ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಛಾಯಾಗ್ರಾಹಕ ಅಶೋಕ್ ಕಶ್ಯಪ್ ನೇಮಕ
ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸುನೀಲ್ ಪುರಾಣಿಕ್ ಅವರಿಂದ ಇತ್ತೀಚೆಗೆ ತೆರವಾಗಿದ್ದ ಸ್ಥಾನಕ್ಕೆ ಅಶೋಕ್ ಕಶ್ಯಪ್ ಆಗಮನವಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿ, ಅಧ್ಯಕ್ಷರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.
ಇನ್ನು ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ ಅವರನ್ನು ನೇಮಿಸಲಾಗಿದೆ. ಇತ್ತೀಚೆಗೆ ಅವಧಿ ಪೂರ್ಣಗೊಂಡಿದ್ದ ಕಾರಣ ಚಲನಚಿತ್ರ ಅಕಾಡೆಮಿ, ನಿಗಮ ಮಂಡಳಿ ಅಧಕ್ಷರು ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು. ಹಾಗಾಗಿ ತೆರವಾಗಿದ್ದ ಸ್ಥಾನಗಳಿಗೆ ಹೊಸಬರ ನೇಮಕ ಕಾರ್ಯ ನಡೀತಿದೆ. ಶೀಘ್ರದಲ್ಲೇ ಇನ್ನುಳಿದ ನಿಗಮ ಹಾಗೂ ಮಂಡಳಿ ಅಧ್ಯಕ್ಷರ ನೇಮಕವೂ ನಡೆಯಲಿದೆ ಎಂದು ಮಾಹಿತಿ ಸಿಗುತ್ತಿದೆ. 'ಶ್', 'ಸಿಹಿಮುತ್ತು', 'ಸೂಪರ್', 'ಉಪ್ಪಿ- 2','ಸೂಪರ್ ರಂಗ' ಸೇರಿದಂತೆ 20ಕ್ಕೂ ಅಧಿಕ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಅಶೋಕ್ ಕಶ್ಯಪ್, 'ಲಿಫ್ಟ್ ಕೊಡ್ಲಾ', 'ಧ್ವಜ' ಸೇರಿದಂತೆ ಕೆಲ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಹಿಂದೆಯೂ ಅಶೋಕ್ ಕಶ್ಯಪ್ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಂಚಾರಿ ವಿಜಯ್ ನಟನೆಯ 'ತಲೆತಂಡ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದ್ದು ಗೊತ್ತೇಯಿದೆ. ಈ ಚಿತ್ರಕ್ಕೂ ಅಶೋಕ್ ಕಶ್ಯಪ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.

2001ರಲ್ಲಿ 'ಶಾಪ' ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳಿಗೆ ಹೆಚ್ಚು ಅಶೋಕ್ ಕಶ್ಯಪ್ ಹೆಚ್ಚು ಕೆಲಸ ಮಾಡಿದ್ದಾರೆ.


Click it and Unblock the Notifications











