ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ವಿವಾದ; ಸಿಂಪಲ್ ಸುನಿ, ಕವಿರಾಜ್ ಪ್ರತಿಕ್ರಿಯೆ
ರಾಜ್ಯಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ. ಇದು ಕನ್ನಡಿಗರ ಬಹು ದಿನಗಳ ಬೇಡಿಕೆ ಆಗಿತ್ತು. ಕೊನೆಗೂ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಬಹುತೇಕರು ಇದನ್ನು ಸ್ವಾಗತಿಸಿದ್ದಾರೆ. ಕನ್ನಡ ಸಿನಿಮಾ ತಾರೆಯರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಸದ್ಯ ಹೊಸ ನಿಯಮದ ಅನುಸಾರ ಶಾಲೆಗಳಲ್ಲಿ ತೃತೀಯ ಭಾಷೆ ವಿಷಯದಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳನ್ನು ಒಟ್ಟು ಮೊತ್ತಕ್ಕೆ ಸೇರಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಅದನ್ನು ಗ್ರೇಡ್ ಮೂಲಕ ಅಳೆಯಲು ಸೂಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಕಮ್ಮಿ ಆದಂತೆ ಆಗಿದೆ. ತೃತೀಯ ಭಾಷೆಯಾಗಿ ಬಹುತೇಕ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಲಿಸಲಾಗುತ್ತಿದೆ. ಹಾಗಾಗಿ ಹಿಂದಿ ವಿಷಯದ ಅಂಕಗಳಿಗೆ ಕೋಕ್ ಕೊಡಲಾಗಿದೆ. ಬಹುತೇಕ ರಾಜ್ಯಗಳಲ್ಲಿ ಇಂಗ್ಲೀಷ್ ಜೊತೆಗೆ ಆಯಾ ರಾಜ್ಯಗಳ ಭಾಷೆಯನ್ನು ಮಾತ್ರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕನ್ನಡ, ಇಂಗ್ಲೀಷ್ ಜೊತೆಗೆ ಹಿಂದಿ ಭಾಷೆಯನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಇತೆರೆ 5 ವಿಷಯಗಳ ಜೊತೆಗೆ 6ನೇ ವಿಷಯವಾಗಿ ಹಿಂದಿ ಇದೆ.

ಸರ್ಕಾರ ನಿರ್ಧಾರ ಸರಿಯಲ್ಲ ಎಂದು ಪ್ರತಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ನಾಲ್ಕೈದು ದಿನ ಇರುವಾಗ ಈ ನಿರ್ಧಾರ ಸರಿಯಲ್ಲ. ಇಷ್ಟು ದಿನ ಓದಿದ ಮಕ್ಕಳು ಏನು ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಕನ್ನಡ ಚಿತ್ರ ನಿರ್ದೇಶಕ ಸಿಂಪಲ್ ಸುನಿ, ನಟಿ ಪೂಜಾ ಗಾಂಧಿ ಹಾಗೂ ಗೀತಸಾಹಿತಿ ಕವಿರಾಜ್ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ.
ಕವಿರಾಜ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿ "ಸರ್ಕಾರ ನಿರ್ಧಾರ ಸರಿಯಾಗಿದೆ. ಕಳೆದ ವರ್ಷ ಮಾತ್ರ ಹಿಂದಿ ಭಾಷೆ ವಿಷಯದಲ್ಲಿ 1 ಲಕ್ಷದ 40 ಸಾವಿರ ಮಕ್ಕಳು ಫೇಲ್ ಆಗಿದ್ದಾರೆ. ಬೇರೆ ಎಲ್ಲಾ ರಾಜ್ಯಗಳಲ್ಲಿ 5 ವಿಷಯಗಳನ್ನು ಮಾತ್ರ ಮಕ್ಕಳು ಓದುತ್ತಾರೆ. ನಮ್ಮಲ್ಲಿ ಮಾತ್ರ ಯಾಕೆ 6 ವಿಷಯಗಳು ಬೇಕು. ಹಾಗಾಗಿ ಮಕ್ಕಳಿಗೆ ಓದುವ ಸಮಯ ಕಮ್ಮಿ ಆಗುತ್ತದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳ ಪ್ರದರ್ಶನ ಕಮ್ಮಿ ಆಗ್ತಿದೆ. ಎಲ್ಲರಿಗೂ ಸಮಾನತೆ ಇರಬೇಕು. ಹಿಂದಿ ವಿಷಯವನ್ನೇ ತೆಗೆದು ಹಾಕಿಲ್ಲ. ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲ್ಲ ಅಂದಿದ್ದಾರೆ. ಇದರಿಂದ ಮಕ್ಕಳಿಗೆ ಅನುಕೂಲವಾಗುತ್ತದೆ" ಎಂದಿದ್ದಾರೆ.

ಹಿಂದಿ ಬದಲು ಬೇರೆ ಯಾವುದಾದರೂ ಉಪಯುಕ್ತವಾದ ವಿಷಯವನ್ನು ಶಾಲೆಗಳ ಪಠ್ಯದಲ್ಲಿ ಸೇರಿಸಬಹುದೇ ಎಂದು ಕೆಲವರು ಚರ್ಚಿಸುತ್ತಿದ್ದಾರೆ. "ಕಂಡಿತ.. ಮುಂದೆ ಮಕ್ಕಳಿಗೆ ಉಪಯೋಗವಾಗುವಂತಹ ಎಐ, ಕಂಪ್ಯೂಟರ್ ಹೀಗೆ ಬೇರೆ ವಿಷಯ ಸೇರಿಸುವುದು ಒಳಿತು. ಅದು ಬಿಟ್ಟು 3 ಭಾಷೆ ಓದುವ ಅವಶ್ಯಕತೆಯಿಲ್ಲ. "ಹಿಂದಿ ಕಲಿತರೆ ದೇಶಾದ್ಯಂತ ಕೆಲಸಗಳು ಸಿಗುತ್ತದೆ ಎನ್ನುವ ಆಮಿಷ ಒಡ್ಡಿ ಸ್ವತಂತ್ರ್ಯ ಬಂದ ಆರಂಭದಲ್ಲಿ ಕಾಂಗ್ರೆಸ್ ಸರ್ಕಾರ ಅದನ್ನು ಸೇರಿಸಿತ್ತು. ಆದರೆ ಇವತ್ತಿಗೂ ಅದು ಸಾಧ್ಯವಾಗಿಲ್ಲ. ಕರ್ನಾಟಕದವರು ಇಡೀ ಭಾರತದಲ್ಲಿ 35 ಸಾವಿರ ಜನ ಮಾತ್ರ ಉದ್ಯೋಗದಲ್ಲಿರುವುದು. ಆದರೆ ಬೆಂಗಳೂರಿನಲ್ಲೇ ಉತ್ತರ ಭಾರತದ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ. ಅವರು ಅನ್ನಕ್ಕಾಗ ಉದ್ಯೋಗ ಹುಡುಕಿ ಇಲ್ಲಿಗೆ ಬಂದಾಗ ತೊಂದರೆ ಆಗಬಾರದು ಎಂದು ನಾವು ಹಿಂದಿ ಕಲಿತಂತೆ ಆಗುತ್ತಿದೆ" ಎಂದು ವಿವರಿಸಿದ್ದಾರೆ.
ಇದೇ ವಿಚಾರದ ಬಗ್ಗೆ ನಿರ್ದೇಶಕ ಸುನಿ ಪೋಸ್ಟ್ ಮಾಡಿದ್ದರು. ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿ "ಯಾವುದೇ ಭಾಷೆ ಕಲಿಯುವುದು ಒಳ್ಳೆಯದು. ಆದರೆ ಹಿಂದಿ ಕಲಿಯಬೇಕು ಎಂದು ಹೇರಿಕೆ ಮಾಡುವುದು ಸರಿಯಲ್ಲ. ವ್ಯವಹಾರಿಕ ಭಾಷೆಯಾಗಿ ಹಿಂದಿ ಎಲ್ಲಾ ಕಡೆ ಇದೆ. ಅದನ್ನು ಕಲಿಯುತ್ತೇನೆ. ಮತ್ತೊಂದು ಮಾತೃಭಾಷೆ ಕನ್ನಡ ಕಲಿಯೋಣ. ಅದು ಬಿಟ್ಟು ಮಗದೊಂದು ಯಾಕೆ. ಯಾವುದೋ ರಾಜಕೀಯ ಪಕ್ಷ ಹೇರಿಕೆ ಮಾಡುವುದು ಬೇಡವಾಗಿತ್ತು. ನಾವೆಲ್ಲಾ ಓದುವಾಗ ಬಹಳ ಕಷ್ಟಪಟ್ಟಿದ್ದೀವಿ. ನಮಗೆ ಗೊತ್ತಿಲ್ಲದ ಭಾಷೆ ಆಗಿದ್ದರಿಂದ ಓದಲು ಹೆಚ್ಚಿನ ಸಮಯ ವ್ಯಯಿಸುತ್ತಿದ್ದೆವು" ಎಂದು ತಿಳಿಸಿದ್ದಾರೆ.
ನಮ್ಮ ಜನಕ್ಕೆ ನಾಗರಿಕ ಪ್ರಜ್ಞೆ ಕಮ್ಮಿಯಿದೆ. ಸಾರ್ವಜನಿಕ ಜಾಗಗಳಲ್ಲಿ ಹೇಗೆ ವರ್ತಿಸಬೇಕು ಎನ್ನುವುದು ಗೊತ್ತಿಲ್ಲ. ಹಿಂದಿ ಬದಲು ನಾಗರಿಕ ಪ್ರಜ್ಞೆ ಎನ್ನುವುದನ್ನು ಒಂದು ವಿಷಯವಾಗಿ ಕಲಿಸಿದರೆ ಉಪಯೋಗವಾಗುತ್ತದೆ. ಕ್ರೀಡೆ, ಚಿತ್ರಕಲೆ, ನಾಗರಿಕ ಪ್ರಜ್ಞೆ ಹೀಗೆ ಒಂದೊಂದು ದಿನ ಒಂದೊಂದು ವಿಷಯ ಹೇಳಿಕೊಟ್ಟರೆ ಸಹಕಾರಿ. ಈ ಬಗ್ಗೆ ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯುವುದು ಉತ್ತಮ ಎಂದು ಸುನಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶದ ಮೀರತ್ನಲ್ಲಿ ಹುಟ್ಟಿ ಬೆಳೆದ ನಟಿ ಪೂಜಾ ಗಾಂಧಿ 'ಮುಂಗಾರುಮಳೆ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು. ಈಗ ಇಲ್ಲೇ ಮದುವೆ ಆಗಿ ವಾಸಿಸುತ್ತಿದ್ದಾರೆ. ಕನ್ನಡ ಓದಲು, ಬರೆಯಲು ಕಲಿತಿದ್ದಾರೆ. ಇತ್ತೀಚೆಗೆ ವಿಡಿಯೋ ಮಾಡಿ ಮಾತನಾಡಿದ್ದ ಪೂಜಾ "ಇವತ್ತು ನಿಜವಾಗಲೂ ತುಂಬಾನೇ ಸಂತೋಷ ಆಗುತ್ತಿದೆ. ನಾನು ಮೊದಲನೆಯದಾಗಿ ಕರ್ನಾಟಕ ಸರ್ಕಾರ ಹಾಗೂ ಮಧು ಬಂಗಾರಪ್ಪ ಅವರಿಗೆ ಧನ್ಯವಾದಗಳನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಇವತ್ತು ಅವರು ತೆಗೆದುಕೊಂಡಿರುವ ತೀರ್ಪುನಿಂದ ತುಂಬಾನೇ ಖುಷಿಯಾಗುತ್ತಿದೆ" ಎಂದಿದ್ದರು.


Click it and Unblock the Notifications











