ಕೊಲೆ ಬೆದರಿಕೆ ಪತ್ರ: ಶಿವರಾಜ್ ಕುಮಾರ್ ನಿವಾಸಕ್ಕೆ ಭದ್ರತೆ
ನಟ ಶಿವರಾಜ್ ಕುಮಾರ್ ಸೇರಿ ರಾಜ್ಯದ ಇನ್ನೂ ಕೆಲವು ಗಣ್ಯರನ್ನು ಕೊಲೆ ಮಾಡುವುದಾಗಿ ಅನಾಮಿಕ ಪತ್ರವೊಂದು ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಶಿವರಾಜ್ ಕುಮಾರ್ ನಿವಾಸಕ್ಕೆ ಭದ್ರತೆ ಒದಗಿಸಿದೆ.
ಶಿವರಾಜ್ ಕುಮಾರ್, ಪಬ್ಲಿಕ್ ಟಿವಿ ರಂಗನಾಥ್, ಬಿಜೆಪಿ ಶಾಸಕ ಸಿಟಿ ರವಿ, ಸಾಹಿತಿ ಬಿಟಿ ಲಲಿತಾ ನಾಯಕ್ ಅವರುಗಳನ್ನು ಮೇ 1ನೇ ತಾರೀಖಿನ ವೇಳೆಗೆ ಕೊಲೆ ಮಾಡುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ. ಈ ಬಗ್ಗೆ ಬಿ.ಟಿ.ಲಲಿತಾ ನಾಯಕ್ ಅವರು ಭಾನುವಾರ ನಡೆದ ಮಾಜಿ ಸಚಿವ ಎಚ್.ಎಂ.ರೇವಣ್ಣ ಅಭಿನಂದನಾ ಸಮಾರಂಭದಲ್ಲಿ ಹೇಳಿದ್ದಾರೆ.
ಬಿ.ಟಿ.ಲಲಿತಾ ನಾಯಕ್ ಅವರು ಈ ಬಗ್ಗೆ ದೂರು ಸಹ ದಾಖಲಿಸಿದ್ದಾರೆ. ಲಲಿತಾ ನಾಯಕ್ ಅವರಂತೆಯೇ ಶಿವರಾಜ್ ಕುಮಾರ್ ಅವರಿಗೂ ಬೆದರಿಕೆ ಪತ್ರ ಬಂದಿದ್ದು, ಶಿವರಾಜ್ ಕುಮಾರ್ ಅವರು ಅದನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ನಿವಾಸಕ್ಕೆ ಗೃಹ ಇಲಾಖೆಯು ಪೊಲೀಸ್ ಭದ್ರತೆ ಒದಗಿಸಿದೆ. ಕಳೆದ ನಾಲ್ಕು ದಿನದಿಂದಲೂ ಪೊಲೀಸರು ಶಿವಣ್ಣನ ಮನೆಗೆ ಭದ್ರತೆ ಒದಗಿಸುತ್ತಿದ್ದಾರೆ.
ಗನ್ಮ್ಯಾನ್ ಸೇರಿದಂತೆ ಎಂಟು ಮಂದಿ ಪೊಲೀಸರು ಶಿವಣ್ಣನ ಮನೆಗೆ ಎರಡು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಲು ಕರೆ ಮಾಡಿದ ಮಾಧ್ಯಮದವರಿಗೆ 'ಈ ಸುದ್ದಿಗೆ ಹೆಚ್ಚಿನ ಮಹತ್ವ ನೀಡಬೇಡಿ' ಎಂದು ಹೇಳಿದ್ದಾರೆ ಶಿವರಾಜ್ ಕುಮಾರ್.
Recommended Video
ತಮಗೆ ಕೊಲೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಸಾಹಿತಿ ಬಿ.ಟಿ.ಲಲಿತಾ ನಾಯಕ್. ಈ ಬಗ್ಗೆ ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, 'ಲಲಿತಾ ನಾಯಕ್ ಅವರು ಗೌರವಾನ್ವಿತ ವ್ಯಕ್ತಿ, ಮಾಜಿ ಸಚಿವರೂ ಸಹ. ಅವರಿಗೆ ಬೆದರಿಕೆ ಪತ್ರ ಬಂದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತನಿಖೆ ನಡೆಸಿ ಕೃತ್ಯದ ಹಿಂದಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ' ಎಂದಿದ್ದಾರೆ.


Click it and Unblock the Notifications











