ದರ್ಶನ್ ವಿರುದ್ಧ ಮಾಧ್ಯಮ ವಿಚಾರಣೆಗೆ ಹೈಕೋರ್ಟ್ ಗರಂ ; ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಸೂಚನೆ
ಈ ಹಿಂದೆ ಯಾರಾದರೂ ತಪ್ಪು ಮಾಡಿ ಜೈಲು ಪಾಲಾದರೆ, ನ್ಯಾಯಾಲಯದ ತೀರ್ಪಿಗೆ ಜನ ಎದುರು ನೋಡುತ್ತಿದ್ದರು. ಅಲ್ಲಿಯವರೆಗೆ ಆರೋಪಿಯನ್ನು ಆರೋಪಿ ಎಂದೇ ಪರಿಗಣಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಧೋ ಎಂದು ಸುರಿಯುವ ಮಳೆಗಿಂತ ಮಾಧ್ಯಮಗಳ ಮೂಲಕ ಬ್ರೇಕಿಂಗ್ ನ್ಯೂಸ್ಗಳು ಜನರ ಲಿವಿಂಗ್ ರೂಮ್ ತಲುಪುತ್ತಿವೆ.
ಸುದ್ದಿಗಳನ್ನು ಈಗ ಹಲವರು ಸುದ್ದಿಯಂತೆ ವರದಿ ಮಾಡುತ್ತಿಲ್ಲ. ಬದಲಿಗೆ ಆ ಸುದ್ದಿಗೆ ಮಸಾಲೆ ಹಾಕಿ ನೋಡುಗರ ಮುಂದಿಡುತ್ತಿದ್ದಾರೆ. ಇನ್ನು ನ್ಯಾಯಾಲಯದಲ್ಲಿ ತೀರ್ಪು ಇನ್ನೂ ಬಂದಿರುವುದಿಲ್ಲ. ಅಷ್ಟರಲ್ಲಿಯೇ ಅಪರಾಧಿಯನ್ನು ನಿರಪರಾಧಿಯಂತೆ, ನಿರಪರಾಧಿಯನ್ನು ಅಪರಾಧಿಯಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂಗ್ಲೀಷ್ನಲ್ಲಿ ಇದನ್ನು ಮೀಡಿಯಾ ಟ್ರಯಲ್ ಎಂದು ಕರೆಯಲಾಗುತ್ತೆ.

ಮಾಧ್ಯಮದವರ ಇದೇ ವಿಚಾರಣೆಯ ವಿರುದ್ಧ ದರ್ಶನ್ ಕೆಲ ದಿನಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ರೇಣುಕಾಸ್ವಾಮಿ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಸುದ್ದಿ ವಾಹಿನಿಗಳು ಉಲ್ಲಂಘಿಸಿವೆ ಎಂದಿದ್ದರು. ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಕೂಡ ಮಾಡಿಕೊಂಡಿದ್ದ ದರ್ಶನ್ ತಮ್ಮ ಅರ್ಜಿಯಲ್ಲಿ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನೆ ಮಾಡಿದ್ದರು. ಸದ್ಯ ದರ್ಶನ್ ಅವರ ಈ ಪ್ರಶ್ನೆಗೆ ಹೈಕೋರ್ಟ್ ಉತ್ತರ ನೀಡಿದೆ.
ಹೌದು, ''ಬಾರ್ & ಬೆಂಚ್'' ವರದಿಯ ಪ್ರಕಾರ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದ್ದು, ಮಾಧ್ಯಮಗಳು ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.2024ರಲ್ಲಿ ನ್ಯಾಯಾಲಯ ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ, ವರದಿಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ನ್ಯಾಯಾಂಗ ನಿಂದನೆಯಾಗಲಿದೆ ಎಂದು ವಿದ್ಯುನ್ಮಾನ ಮಾಧ್ಯಮಗಳಿಗೆ ಪೀಠ ಎಚ್ಚರಿಸಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಪ್ರಮುಖ ಮೌಲ್ಯ ಹೌದು. ಆದರೆ ಅದು ಮಾಧ್ಯಮ ಪ್ರೇರಿತ ತೀರ್ಪಿನ ರೂಪದಲ್ಲಿ ಬದಲಾದಾಗ ಪ್ರಜಾಪ್ರಭುತ್ವಕ್ಕೆ ಆಪತ್ತು ಎದುರಾಗುತ್ತೆ ಎಂದು ಅಸಮಾಧಾನ ಹೊರ ಹಾಕಿರುವ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ, ಮಾಧ್ಯಮಗಳು ಕಾವಲು ನಾಯಿಯಂತೆ ಕೆಲಸ ಮಾಡಬೇಕೆ ಹೊರತು ತಾವೇ ನ್ಯಾಯಾಧೀಶರಂತೆ ವರ್ತಿಸಬಾರದು ಎಂದು ತಪರಾಕಿ ಹಾಕಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳು ನ್ಯಾಯಾಲಯದ ವಿಚಾರಣೆಯನ್ನೇ ಮನರಂಜನಾ ಕಾರ್ಯಕ್ರಮದಂತೆ ಬಿಂಬಿಸುತ್ತಿವೆ ಎಂದು ಗರಂ ಆಗಿರುವ ಹೈಕೋರ್ಟ್, ನ್ಯಾಯಾಲಯದ ಕಲಾಪಗಳನ್ನು ಮತ್ತು ಅಪರಾಧ ನಡೆದ ಸ್ಥಳಗಳನ್ನು ತಮಗೆ ಬೇಕಾದಂತೆ ಮರು ಸೃಷ್ಟಿಸುತ್ತಿವೆ, ವಿಚಾರಣಾಧೀನ ನ್ಯಾಯಾಧೀಶರ ಮುಖವನ್ನು ಮಾತ್ರ ಮರೆಮಾಚಿ, ಆರೋಪಿಗಳು ಮತ್ತು ವಕೀಲರ ಮುಖಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದೆ.

ಮುಂದುವರೆದು ಈ ರೀತಿಯ ಏಕಪಕ್ಷೀಯ ವರದಿಗಳಿಂದಾಗಿ ದರ್ಶನ್ ಅವರಿಗೆ ಸಿಗಬೇಕಾದ ನ್ಯಾಯಯುತ ವಿಚಾರಣೆಯ ಹಕ್ಕಿಗೆ ಭಾರಿ ಧಕ್ಕೆಯಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ನ್ಯಾಯಾಲಯ ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಇಷ್ಟೇ ಅಲ್ಲದೇ ದರ್ಶನ್ ವಿರುದ್ಧ ಪ್ರಸಾರ ಮಾಡಲಾಗಿರುವ ಎಲ್ಲಾ ವಿಡಿಯೋ, ಕಂಟೆಂಟ್ಗಳನ್ನು ಡಿಲೀಟ್ ಮಾಡಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ಕೋರ್ಟ್ ಹೇಳಿದ್ದು ಮಾತು ಕೇಳದ, ಆದೇಶ ಉಲ್ಲಂಘಿಸುವ ಮಾಧ್ಯಮಗಳಿಗೆ ದಂಡ ವಿಧಿಸಬೇಕು, ಅವರ ಲೈಸೆನ್ಸ್ ರದ್ದು ಮಾಡುವುದರ ಜೊತೆ ಕಾನೂನು ಪ್ರಕಾರ ಸೂಕ್ತ ಪ್ರಕ್ರಿಯೆ ಆರಂಭ ಮಾಡಬೇಕು ಎಂದು ಕೂಡ ಆದೇಶಿಸಿದೆ. ಇದೆಲ್ಲದರ ಕುರಿತು 3 ತಿಂಗಳಿನೊಳಗೆ ನ್ಯಾಯಾಲಯಕ್ಕೆ ವರದಿ ಒಪ್ಪಿಸಬೇಕೆಂದು ಗಡುವು ನೀಡಿದೆ.


Click it and Unblock the Notifications