ರಜನೀಕಾಂತ್ ಪತ್ನಿ ವಿರುದ್ಧ ಪ್ರಕರಣ: ತನಿಖೆ ಮುಂದುವರೆಸಲು ಕರ್ನಾಟಕ ಹೈಕೋರ್ಟ್ ಅಸ್ತು
ನಟ ರಜನೀಕಾಂತ್ ಪತ್ನಿ ಲತಾ ವಿರುದ್ದ ಫೋರ್ಜರಿ ಪ್ರಕರಣದ ತನಿಖೆ ಮುಂದುವರೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲತಾ ವಿರುದ್ಧ ವಂಚನೆ ಹಾಗೂ ಸುಳ್ಳು ಹೇಳಿಕೆ ಪ್ರಕರಣವನ್ನು ಕೈಬಿಡುವಂತೆಯೂ ಹೈಕೋರ್ಟ್ ಸೂಚಿಸಿದೆ.
2014 ರಜನೀಕಾಂತ್ ನಟನೆಯ 'ಕೊಚಾಡಿಯನ್' ಸಿನಿಮಾದ ಕುರಿತಂತೆ ರಜನೀಕಾಂತ್ ಪತ್ನಿ ಲತಾ ವಿರುದ್ಧ ವಂಚನೆ, ಸುಳ್ಳು ಹೇಳಿಕೆ, ಫೋರ್ಜರಿ ಆರೋಪ ಹೊರಿಸಲಾಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಪ್ರಕರಣವೊಂದರ ಕುರಿತಂತೆ ರಾಜ್ಯ ಹೈಕೋರ್ಟ್ ಆದೇಶವೊಂದನ್ನು ಹೊರಡಿಸಿದೆ.
2014 ರಲ್ಲಿ ಬಿಡುಗಡೆ ಆಗಿದ್ದ 'ಕೊಚಾಡಿಯನ್' ಸಿನಿಮಾವನ್ನು ರಜನೀಕಾಂತ್ರ ಪುತ್ರಿ ಸೌಂದರ್ಯಾ ರಜನೀಕಾಂತ್ ನಿರ್ದೇಶನ ಮಾಡಿದ್ದರು, ಆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. 125 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದ್ದ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧಾರುಣವಾಗಿ ಸೋತಿತು. ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಸುನಿಲ್ ಲುಲ್ಲು, ಸುನಂದಾ ಮುರಳಿ ಮನೋಹರ್, ಪ್ರಶಿತಾ ಚೌಧರಿ ತೀವ್ರ ನಷ್ಟ ಅನುಭವಿಸಿದರು.

ಆದರೆ ಸಿನಿಮಾ ನಿರ್ಮಾಣದ ಸಮಯದಲ್ಲಿ ರಜನೀಕಾಂತ್ ಪತ್ನಿ ಲತಾ ನಿರ್ಮಾಣ ಸಂಸ್ಥೆಗೆ ಗ್ಯಾರೆಂಟಿ ಪತ್ರೆ ಬರೆದುಕೊಟ್ಟಿದ್ದರು. ಅದರನ್ವಯ ಸಿನಿಮಾ ಸೋತರೆ ನಷ್ಟ ಭರಿಸುವ ಅಥವಾ ನಷ್ಟದಲ್ಲಿ ಪಾಲು ತೆಗೆದುಕೊಳ್ಳುವ ಜವಾಬ್ದಾರಿ ಅವರದ್ದಾಗಿತ್ತು. ಆದರೆ ಕೊಟ್ಟಿದ್ದ ಭರವಸೆಯಂತೆ ಲತಾ ಅವರು ನಷ್ಟ ಭರಿಸಲಿಲ್ಲವಂತೆ. ಈ ಕುರಿತು ಆಗ ಪತ್ರಿಕೆಗಳಲ್ಲಿ ವರದಿ ಮಾಡಲಾಗಿತ್ತು.
ಆದರೆ ರಜನೀಕಾಂತ್ ಪತ್ನಿ ಲತಾ ಅವರು ಈ ಸಂಬಂಧ ಪತ್ರಿಕೆಗಳ ವಿರುದ್ಧ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದು ಪ್ರಕರಣದ ಕುರಿತಾಗಿ ವರದಿ ಮಾಡದಂತೆ ನಿರ್ಬಂಧ ಹೇರಿದರು. ಆದರೆ ಹೀಗೆ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತರಲು ಬೆಂಗಳೂರು ಪ್ರೆಸ್ಕ್ಲಬ್ನ ವಿಳಾಸ ಹಾಗೂ ಲೆಟರ್ಹೆಡ್ನ ಫೋರ್ಜರಿ ದಾಖಲೆಗಳನ್ನು ಸಲ್ಲಿಸಿದ್ದರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಮೇ ಆಡ್ ಬ್ಯೂರೋ ಅಡ್ವರ್ಟೈಸಿಂಗ್ ಪ್ರೈ ಲೀ ಖಾಸಗಿ ದೂರು ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಪ್ರಕರಣದ ವಿಚಾರಣೆ ರಾಜ್ಯ ಹೈಕೋರ್ಟ್ನಲ್ಲಿ ನಡೆದಿದ್ದು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವಂಚನೆ ಹಾಗೂ ಸುಳ್ಳು ಹೇಳಿಕೆ ಪ್ರಕರಣವನ್ನು ರದ್ದು ಮಾಡಿಸಿದ್ದು, ಪೋರ್ಜರಿ ಪ್ರಕರಣವನ್ನು ಮುಂದುವರೆಸುವಂತೆ ಸೂಚಿಸಿದೆ.
ರಜನೀಕಾಂತ್ ಅವರು ಲತಾ ಅವರನ್ನು 1981 ರಲ್ಲಿ ವಿವಾಹವಾದರು. ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದ ಲತಾ, ರಜನೀಕಾಂತ್ ಅವರನ್ನು ತಮ್ಮ ಕಾಲೇಜು ಮ್ಯಾಗಜೀನ್ಗಾಗಿ ಸಂದರ್ಶನ ಮಾಡಿದ್ದರು. ಅಲ್ಲೇ ರಜನೀಕಾಂತ್ಗೆ ಲತಾ ಮೇಲೆ ಪ್ರೀತಿ ಉಂಟಾಗಿ ಅವರನ್ನೇ ವಿವಾಹವಾದರು. ಲತಾ-ರಜನೀಕಾಂತ್ ಅವರಿಗೆ ಐಶ್ವರ್ಯಾ ಹಾಗೂ ಸೌಂದರ್ಯಾ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಲತಾ ಅವರು ತಮ್ಮನ್ನು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಶ್ರಮ್ ಹೆಸರಿನ ಶಾಲೆಯನ್ನು ಸಹ ಅವರು ನಡೆಸುತ್ತಿದ್ದಾರೆ.


Click it and Unblock the Notifications











