ರಾಷ್ಟ್ರ ಪ್ರಶಸ್ತಿ ವಿವಾದ : ಲಿಂಗದೇವರು ವಿಚಾರಣೆಗೆ ಹೈಕೋರ್ಟ್ ಆದೇಶ
ಶ್ರುತಿ ಹರಿಹರನ್ ನಟಿಸಿರುವ 'ನಾತಿಚರಾಮಿ' ಸಿನಿಮಾದ ವಿರುದ್ಧ ನಿರ್ದೇಶಕ ದಯಾಳ್ ಪದ್ಮನಾಭನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ನಿರ್ದೇಶಕ ಬಿ ಎಸ್ ಲಿಂಗದೇವರು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಕಳೆದ ತಿಂಗಳು 2018ನೇ ಸಾಲಿನ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿದ್ದು, ನಾತಿಚರಾಮಿ ಸಿನಿಮಾ 5 ಪ್ರಶಸ್ತಿಗಳನ್ನು ಪಡೆದಿತ್ತು. ಆದರೆ, ಈ ಪ್ರಶಸ್ತಿಗಳ ಮೇಲೆ ತೀರ್ಪುಗಾರರ ಸಮಿತಿಯ ಸದಸ್ಯ ಲಿಂಗದೇವರು ಪ್ರಭಾವ ಇದೆ ಎನ್ನುವುದು ದಯಾಳ್ ಆರೋಪ ಆಗಿತ್ತು.
ಈ ವಿಚಾರವಾಗಿ ದಯಾಳ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ರಾಷ್ಟ್ರ ಪ್ರಶಸ್ತಿ ತೀರ್ಪುಗಾರರ ಸಮಿತಿಗೆ ಸೂಚನೆ ನೀಡಿದ್ದು, ಎರಡು ತಿಂಗಳಿನ ಒಳಗೆ ಲಿಂಗದೇವರು ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.

ನಿಯಮದ ಪ್ರಕಾರ, ಪ್ರಶಸ್ತಿ ಸಮಿತಿಯಲ್ಲಿ ಇರುವವರು ಯಾವುದೇ ಸಿನಿಮಾಗಳ ಜೊತೆಗೆ ನಂಟು ಹೊಂದಿರಬಾರದು. ಆದರೆ, ಲಿಂಗದೇವರು 'ನಾತಿಚರಾಮಿ' ಸಿನಿಮಾದ ಸಂಕಲನ ಕಾರ್ಯ ನಡೆದ 'ಅಕ್ಕಾ' ಕಮ್ಯುನಿಕೇಷನ್ ಪ್ರೈವೇಟ್ ಲಿ ಎಂಬ ಕಂಪನಿ ಜೊತೆಗೆ ನಂಟು ಹೊಂದಿದ್ದಾರೆ ಎಂದು ದಯಾಳ್ ಆರೋಪ ಮಾಡಿದ್ದರು.
ಪದ್ಮನಾಭನ್ ಅವರ ನಿರ್ದೇಶನದ 'ಆ ಕರಾಳ ರಾತ್ರಿ' ಸಿನಿಮಾವು ಪ್ರಸಕ್ತ ವರ್ಷದ ರಾಷ್ಟ್ರೀಯ ಪ್ರಶಸ್ತಿಯ 15 ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸಿತ್ತು. ಉತ್ತಮ ಸಾಹಿತ್ಯಕ್ಕಾಗಿ ಪ್ರಶಸ್ತಿ ಪಡೆದಿರುವ 'ನಾತಿಚರಾಮಿ' ಸಿನಿಮಾಕ್ಕಿಂತಲೂ ಉತ್ತಮ ಸಾಹಿತ್ಯ ಹೊಂದಿರುವ ಕನ್ನಡ ಕವಿ ಡಿ.ವಿ. ಗುಂಡಪ್ಪ ಅವರ ಪದ್ಯವನ್ನು ಬಳಸಿಕೊಳ್ಳಲಾಗಿತ್ತು. ಆದರೆ ಅದನ್ನು ಪರಿಗಣಿಸಿಲ್ಲ ಎನ್ನುವುದು ದಯಾಳ್ ಮಾತಾಗಿದೆ


Click it and Unblock the Notifications











