ಅರ್ಜುನ್ ಸರ್ಜಾ ಕನಸಿನ ದೇವಸ್ಥಾನದ ಹಿಂದಿದೆ ಕನ್ನಡಿಗರ ಶ್ರಮ, ಪ್ರತಿಭೆ
ನಟ ಅರ್ಜುನ್ ಸರ್ಜಾ ಕನಸಿನ ಹನುಮಾನ್ ದೇವಸ್ಥಾನ ಲೋಕಾಪರ್ಣೆಯಾಗಿದೆ. ಜುಲೈ 2ರಂದು ಚೆನ್ನೈ ವಿಮಾನ ನಿಲ್ದಾಣದ ಹೊರವಲಯದ ಅರ್ಜುನ್ ಸರ್ಜಾರವರ ಫಾರ್ಮ್ ಹೌಸ್ ನಲ್ಲಿ ಭವ್ಯವಾದ ಆಂಜನೇಯನ ದೇವಸ್ಥಾನ ತಲೆ ಎತ್ತಿನಿಂತಿದೆ.
ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣ ಮಾಡಬೇಕು ಎಂಬುದು ಅರ್ಜುನ್ ಸರ್ಜಾರ ಬಹುವರ್ಷಗಳ ಕನಸು. ಈ ಕನಸನ್ನು ನನಸು ಮಾಡುವಲ್ಲಿ ಮಂಗಳೂರಿನ ಎಂಜಿನಿಯರ್ ಮುಖ್ಯ ಪಾತ್ರವಹಿಸಿದ್ದಾರೆ. ಮಂಗಳೂರಿನ ಬೋಳಾರ ಸಂತೋಷ್ ಕುಮಾರ್ ಶೆಟ್ಟಿ ಯವರ ಪರಿಕಲ್ಪನೆಯಲ್ಲಿ ಈ ಹನುಮಂತನ ದೇವಸ್ಥಾನ ರಚನೆಯಾಗಿದೆ.
ನಟ ಅರ್ಜುನ್ ಸರ್ಜಾ ಹನುಮಂತನ ದೇವಸ್ಥಾನ ನಿರ್ಮಿಸುವ ಮುನ್ನ ರಾಜ್ಯ ಕರಾವಳಿಗೆ ಭೇಟಿ ನೀಡಿದ್ದರು. ಕರಾವಳಿಯ ಹತ್ತಾರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವಸ್ಥಾನದ ಅದ್ಭುತ ವಾಸ್ತುಶಿಲ್ಪದ ಮಾಹಿತಿ ಪಡೆದುಕೊಂಡಿದ್ದರು. ಕರಾವಳಿ ಮತ್ತು ಕೇರಳ ದೇವಸ್ಥಾನಗಳ ಮಾದರಿಯಲ್ಲೇ ತನ್ನ ಆರಾಧ್ಯದೈವ ಹನುಮಂತನ ದೇವಸ್ಥಾನವನ್ನು ನಿರ್ಮಿಸಲು ಯೋಜನೆ ಹಾಕಿಕೊಂಡರು. ಕೂಡಲೇ ತನ್ನ ಸ್ನೇಹಿತರ ಮೂಲಕ ಇಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿಯವರನ್ನು ಸಂಪರ್ಕಿಸಿದ ಅರ್ಜುನ್ ಸರ್ಜಾ, ಚೆನ್ನೈ ಗೆ ಕರೆಯಿಸಿಕೊಂಡು ತನ್ನ ಯೋಜನೆಯನ್ನು ಸಂತೋಷ್ ಕುಮಾರ್ ಎದುರು ಬಿಚ್ಚಿಟ್ಟರು.

ಮಂಗಳೂರಿನಿಂದ ಕೆಂಪು ಕಲ್ಲು ಚೆನ್ನೈಗೆ ರವಾನೆ
32 ಅಡಿ ಎತ್ತರದ ಧ್ಯಾನಮಗ್ನರಾಗಿರುವ ಮುಖ್ಯಪ್ರಾಣ ಹನುಮಂತ ಮೂರ್ತಿಯ ಕೆತ್ತನೆಯನ್ನು ಕರ್ನಾಟಕದವರೇ ಆದ ಅಶೋಕ್ ಗುಡಿಗಾರ್ ನೇತೃತ್ವದ ತಂಡ ಮಾಡಿದರೆ, ಉಳಿದ ಎಲ್ಲಾ ವಿನ್ಯಾಸವನ್ನು ಸಂತೋಷ್ ಕುಮಾರ್ ಶೆಟ್ಟಿಯವರ ತಂಡವೇ ಮಾಡಿದೆ. ಕರಾವಳಿಯ ದೇವಸ್ಥಾನಗಳ ರಚನೆಗೆ ಬಳಸುವ ಕೆಂಪು ಕಲ್ಲುಗಳನ್ನೇ ತನ್ನ ದೇವಸ್ಥಾನಕ್ಕೆ ಬಳಸಬೇಕೆಂದು ಆಸೆ ಹೊಂದಿದ ಅರ್ಜುನ್ ಸರ್ಜಾ,ಮಂಗಳೂರಿನಿಂದಲೇ ಕೆಂಪು ಕಲ್ಲುಗಳನ್ನು ಚೆನೈಗೆ ತರಿಸಿಕೊಂಡಿದ್ದಾರೆ. ಹನುಮಂತ ದೇವಸ್ಥಾನಕ್ಕೆ ಮಂಗಳೂರಿನಿಂದ ರೈಲು ಮೂಲಕ 60 ಲಕ್ಷ ಮೌಲ್ಯದ ಒಂದು ಲಕ್ಷ ಕೆಂಪು ಕಲ್ಲುಗಳು ಚೈನೈಗೆ ತಲುಪಿ ದೇವಸ್ಥಾನಕ್ಕೆ ಉಪಯೋಗಿಸಲಾಗಿದೆ.

ಹಲವು ದೇವಾಲಯಗಳ ವಾಸ್ತುಶಿಲ್ಪ ಬಳಕೆ
ಹನುಮಂತನ ದೇವಸ್ಥಾನಕ್ಕೆ, ಮಂಗಳೂರಿನ ಬೋಳಾರ ಹಳೆಕೋಟೆ ಮಾರಿಯಮ್ಮ, ಕುಡುಪು ಅನಂತಪದ್ಮನಾಭ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ,ಕದ್ರಿಯ ಮಹತೋಭಾರ ಮಂಜುನಾಥೇಶ್ವರ ದೇವಸ್ಥಾನದ ವಾಸ್ತು ಶಿಲ್ಪದ ವಿನ್ಯಾಸವನ್ನು ಬಳಸಲಾಗಿದೆ.

ದೇವಾಸ್ಥಾನ ನಿರ್ಮಾಣದಲ್ಲಿ ಕನ್ನಡಿಗರ ಶ್ರಮ
ಕೆಂಪು ಕಲ್ಲಿನ ಮೂಲಕವೇ ದೇವಸ್ಥಾನದ ಆವರಣ ಗೋಪುರ, ಮುಖ ಗೋಪುರ, ಹನುಮಂತ ಮೂರ್ತಿಯ ಸುತ್ತವಿರುವ ನಾಲ್ಕು ಪಿಲ್ಲರ್, ಕೌಪೌಂಡ್, ನೆಲಹಾಸು ಗಳನ್ನು ನಿರ್ಮಿಸಲಾಗಿದೆ. ಯಾವುದೇ ಬಾಗಿಲುಗಳಿಲ್ಲದ ದೇವಸ್ಥಾನ ಜಗದ ಕಣ್ಮನ ಸೆಳೆದಿದೆ. ಒಟ್ಟಿನಲ್ಲಿ ಬಹುಭಾಷಾ ನಟನ ಕನಸಿನ ಭವ್ಯ ದೇಗುಲವನ್ನು ನಿರ್ಮಾಣ ಮಾಡಿದ್ದು ಕರ್ನಾಟಕ ಮೂಲದವರೇ ಅನ್ನೋದು ಹೆಮ್ಮೆಯ ವಿಷಯವಾಗಿದೆ.
Recommended Video

ಜುಲೈ 1, 2 ರಂದು ದೇವಸ್ಥಾನ ಲೋಕಾರ್ಪಣೆ
ಜುಲೈ 1, 2 ರಂದು ಚೆನ್ನೈನಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಆಗಿದೆ. ಅಂದು ರಾಜ್ಯದ ಅವಧೂತ ವಿನಯ್ ಗುರೂಜಿ ಸೇರಿದಂತೆ ಇನ್ನೂ ಕೆಲವು ಧಾರ್ಮಿಕ ಪ್ರಮುಖರು ಆಂಜನೇಯ ಸ್ವಾಮಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಅರ್ಜುನ್ ಸರ್ಜಾ ಕುಟುಂಬ ಸದಸ್ಯರು ಮತ್ತು ಇತರೆ ಆಪ್ತೇಷ್ಟರು ಮಾತ್ರವೇ ಹಾಜರಿದ್ದ ಸರಳ ಕಾರ್ಯಕ್ರಮದಲ್ಲಿ ದೇವಸ್ಥಾನ ಲೋಕಾರ್ಪಣೆಗೊಂಡಿತು.


Click it and Unblock the Notifications











