Puneeth Rajkumar: ತಂದೆ ರಾಜ್ಕುಮಾರ್ ಸ್ಮಾರಕದ ಮಾದರಿಯಲ್ಲೇ 'ನಗುಮೊಗದ ಮಾಣಿಕ್ಯ'ನ ಸ್ಮಾರಕ
ಕರುನಾಡಿಗೆ ಅಕ್ಟೋಬರ್ 29 ಅತಿಯಾಗಿ ನೋವು ಕೊಟ್ಟ ದಿನ. ಕನ್ನಡ ಸಿನಿಮಾರಂಗಕ್ಕೆ, ಕನ್ನಡದ ಸಿನಿ ಪ್ರೇಮಿಗಳಿಗೆ ತುಂಬಲಾರದ ನಷ್ಟ ಉಂಟಾದ ದಿನ. ಇದೇ ದಿನ ಪರಮಾತ್ಮ ಪುನೀತ್ ರಾಜ್ ಕುಮಾರ್ ನಮ್ಮನ್ನು ದೈಹಿಕವಾಗಿ ಅಗಲಿದ್ದು. ಆದರೆ, ಇಂದಿಗೂ ಕರುನಾಡಿನ ಮನೆ, ಮನಗಳಲ್ಲಿಯೂ ಜೀವಂತವಾಗಿದ್ದಾರೆ.
ಈ ನೋವಿಗೆ ಎರಡು ವರ್ಷ ತುಂಬುತ್ತಿದೆ. ಜೊತೆಗಿರದ ಜೀವ ಎನ್ನುತ್ತ ಇಡೀ ರಾಜ್ಯವೇ ಅವರನ್ನು ಜೀವಂತವಾಗಿರಿಸಿಕೊಂಡಿದೆ. ಕಂಠೀರವ ಸ್ಟೂಡಿಯೋದಲ್ಲಿ ಪುಣ್ಯತಿಥಿ ನಡೆಯಲಿದೆ. ಅಪ್ಪು ಸಮಾಧಿ ಬಳಿ ಕುಟುಂಬಸ್ಥರಿಂದ ಪೂಜಾ ಕಾರ್ಯಗಳು ನಡೆಯುತ್ತಿವೆ. ಜೊತೆಗೆ ಅಪ್ಪು ನೆನಪಿನಲ್ಲಿ ಹಲವು ಕಡೆಗಳಲ್ಲಿ ರಕ್ತದಾನ, ಅನ್ನದಾನ ಶಿಬಿರಗಳು ನಡೆಯುತ್ತಿದೆ.

ಅಪ್ಪುರನ್ನು ನೆನಪಿಸಿಕೊಂಡ ರಾಜಕೀಯ ನಾಯಕರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. "ಸರ್ವರನ್ನೂ ಪ್ರೀತಿ, ಗೌರವದಿಂದ ಕಾಣುತ್ತಿದ್ದ, ನೊಂದ ಜೀವಗಳಿಗೆ ಸದ್ದಿಲ್ಲದ ನೆರವಿಗೆ ನಿಲ್ಲುತ್ತಿದ್ದ ನಿಷ್ಕಲ್ಮಶ ಹೃದಯದ ಪುನೀತ್ ರಾಜ್ಕುಮಾರ್ ನಮ್ಮಿಂದ ಮರೆಯಾದರೂ, ಅವರ ಆದರ್ಶಪ್ರಾಯವಾದ ವ್ಯಕ್ತಿತ್ವ ನಮ್ಮ ನಡುವೆ ಶಾಶ್ವತ. ನಮ್ಮೆಲ್ಲರ ಪ್ರೀತಿಯ ಅಪ್ಪುವಿನ ಪುಣ್ಯಸ್ಮರಣೆಯಂದು ಅವರನ್ನು ಗೌರವದಿಂದ ಸ್ಮರಿಸೋಣ" ಎಂದಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡು, "ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳು" ಎಂದು ಗೌರವ ಸಲ್ಲಿಸಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ಟ್ವೀಟ್ ಮಾಡಿದ್ದು, "ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ನಗುಮೊಗದ ಮಾಣಿಕ್ಯ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಅಪ್ಪು ಅವರ ಸರಳತೆ, ಹೃದಯವಂತಿಕೆ, ಸಾಮಾಜಿಕ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ" ಎಂದಿದ್ದಾರೆ.
ಸಂಸದ ತೇಜಸ್ವಿ ಸೂರ್ಯಾ, "ನಮ್ಮೆಲ್ಲರ ಅಚ್ಚುಮೆಚ್ಚಿನ ಶ್ರೀ ಪುನೀತ್ ರಾಜಕುಮಾರ್ ರವರ ದ್ವಿತೀಯ ಪುಣ್ಯ ಸ್ಮರಣೆಯಂದು ಭಾವಪೂರ್ಣ ನಮನಗಳು. ಅವರ ಸರಳತೆ,ಹೃದಯವಂತಿಕೆ, ಸಾಮಾಜಿಕ ಕಳಕಳಿ, ಅನುಕರಣೀಯ ವ್ಯಕ್ತಿತ್ವ ನಮಗೆಲ್ಲ ಎಂದೆಂದಿಗೂ ಮಾದರಿ" ಎಂದು ಟ್ವೀಟ್ ಮಾಡಿದ್ದಾರೆ.
ಅಪ್ಪು ಸಮಾಧಿ ಬಳಿ ಕುಟುಂಬಸ್ಥರಿಂದ ಪೂಜೆ
ಕಳೆದ ಎರಡು ವರ್ಷಗಳಿಂದಲೂ ರಾಜ್ಯದ ವಿವಿಧ ಭಾಗಗಳಲ್ಲಿ ನಟ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಡಾ.ರಾಜ್ಕುಮಾರ್ ಅವರ ಸಮಾಧಿ ಮಾದರಿಯಲ್ಲೇ ಅಪ್ಪು ಸಮಾಧಿಯನ್ನು ಕಟ್ಟಲಾಗಿದೆ. ಬಿಳಿ ಮಾರ್ಬಲ್ ಬಳಕೆ ಮಾಡಿ ಅಪ್ಪು ಸ್ಮಾರಕ ನಿರ್ಮಾಣ ಮಾಡಿದ್ದು, ಸ್ಮಾರಕದ ಸುತ್ತಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಇದರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇನ್ನು, ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ಅಶ್ವಿನಿ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ರಾಜ್ಕುಮಾರ್ ಕುಟುಂಬದ ಎಲ್ಲರೂ ಬಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗೌರವ ಸಲ್ಲಿಸಲಿದ್ದಾರೆ. ದೂರದ ಊರುಗಳಿಂದಲೂ ಸಾವಿರಾರು ಜನರು ಸಮಾಧಿ ಬಳಿ ಬಂದು ಸೇರಲಿದ್ದಾರೆ. ಹೀಗಾಗಿಯೇ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಅನ್ನದಾನ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಇರಲಿದೆ. ಇಡೀ ದಿನ ರಾಜ್ಕುಮಾರ್ ಕುಟುಂಬಸ್ಥರು ಅನ್ನದಾನ ಮಾಡಲಿದ್ದಾರೆ. ಅಪ್ಪು ನಿಧನದ ನಂತರ ಪ್ರತಿದಿನ ಸಾವಿರಾರು ಜನ ಸಮಾಧಿ ಬಳಿ ಬಂದು ದರ್ಶನ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಭೇಟಿ ಮಾಡಿದ ಜಾಗಗಳಲ್ಲಿ ಅಪ್ಪು ಸಮಾಧಿ ಕೂಡ ಒಂದು.


Click it and Unblock the Notifications










