ಮತ್ತಿಬ್ಬರು ಖ್ಯಾತ ಕಲಾವಿದರಿಗೆ ಕರ್ನಾಟಕ ರತ್ನ ನೀಡುವಂತೆ ಅಭಿಮಾನಿಗಳ ಆಗ್ರಹ
ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿಯರವರಿಗೆ ಕರ್ನಾಟಕ ರತನ್ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತು. ಕನ್ನಡ ಚಿತ್ರರಂಗ ಹಾಗೂ ನಾಡಿಗೆ ಇವರಿಬ್ಬರು ನೀಡಿದ ಕೊಡುಗೆ ಪುರಸ್ಕರಿಸಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಸರ್ಕಾರ ನಡೆಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎನ್ನುವುದು ಅಭಿಮಾನಿಗಳ ಬಹಳ ವರ್ಷಗಳ ಆಸೆಯಾಗಿತ್ತು. ಇತ್ತೀಚೆಗೆ ಭಾರತೀ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ್ ಕೂಡ ಸಿಎಂ ಬಳಿ ಈ ಬಗ್ಗೆ ಮನವಿ ಮಾಡಿದ್ದರು. ಹಿರಿಯ ನಟಿಯರಾದ ಜಯಮಾಲ, ಮಾಳವಿಕಾ ಅವಿನಾಶ್ ಹಾಗೂ ಶೃತಿ ಕೂಡ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದರು. ಹಾಗಾಗಿ ಅಂತಿಮವಾಗಿ ಸರ್ಕಾರ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡಿದೆ.

ಇದೀಗ ಮತ್ತಿಬ್ಬರು ಕನ್ನಡದ ಖ್ಯಾತ ಕಲಾವಿದರಿಗೆ ಕರ್ನಾಟಕ ರತ್ನ ನೀಡಬೇಕು ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ದಿವಂಗತ ನಟಿ ಲೀಲಾವತಿ ಹಾಗೂ ದಿವಂಗತ ನಟ ಅಂಬರೀಶ್ ಅವರಿಗೂ ಮರಣೋತ್ತರ ಕರ್ನಾಟಕ ರತ್ನ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ನಟಿ ತಾರಾ ಕೂಡ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ವಿಷ್ಣು ಹಾಗೂ ಅಂಬಿ ಕುಚಿಕು ಗೆಳೆಯರಾಗಿದ್ದರು. ಹಾಗಾಗಿ ಇಬ್ಬರಿಗೂ ಒಮ್ಮೆಲೆ ಒಂದೇ ವೇದಿಕೆಯಲ್ಲಿ ಕರ್ನಾಟಕ ರತ್ನ ಗೌರವ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ಪಬ್ಲಿಕ್ ಟಿವಿ ವಾಹಿನಿಗೆ ನಟಿ ತಾರಾ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ವಿಷ್ಣು ಹಾಗೂ ಅಂಬಿ ಚಿತ್ರರಂಗ ಪ್ರವೇಶಿಸಿದ್ದರು. ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಹೀರೊ ಆಗಿ ಗೆದ್ದರೆ ಅದೇ ಚಿತ್ರದ ಜಲೀಲನ ಪಾತ್ರದಲ್ಲಿ ಅಂಬರೀಶ್ ಗಮನ ಸೆಳೆದಿದ್ದರು. ಮುಂದೆ ಖಳನಟನಾಗಿ ಪೋಷಕ ನಟನಾಗಿ ಗುರ್ತಿಸಿಕೊಂಡಿದ್ದ ಅಂಬಿ ಬಳಿಕ ಹೀರೊ ಆಗಿ ಸಕ್ಸಸ್ ಕಂಡಿದ್ದರು. ಬಳಿಕ ರಾಜಕೀಯರಂಗದಲ್ಲಿ ಕೂಡ ಸೇವೆ ಸಲ್ಲಿಸಿದ್ದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಕೊನೆ ಕೊನೆಗೆ ಪೋಷಕ ಪಾತ್ರಗಳಲ್ಲಿ ಮಿಂಚಿದ್ದರು. ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ತೆರೆ ಹಂಚಿಕೊಂಡ ಏಕೈಕ ನಟ ಅಂಬರೀಶ್ ಎಂದರೇ ತಪ್ಪಾಗಲ್ಲ.

600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿ ಲೀಲಾವತಿ ಅವರು ನಟಿಸಿದ್ದಾರೆ. ಬಡ ಕುಟುಂಬದಿಂದ ಬಂದು ಆಕೆ ಸಾಧನೆಯ ಶಿಖರ ಏರಿದ್ದರು. ಅಷ್ಟೇ ಅಲ್ಲ ಸಮಾಜಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದನ್ನೆಲ್ಲಾ ಪರಿಗಣಿಸಿ ಅವರಿಗೆ ಕರ್ನಾಟಕ ರತ್ನ ಗೌರವ ನೀಡಬೇಕು ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿದ ಲೀಲಾ ಕಿರಣ್ ಚಿಕ್ಕಂದಿನಲ್ಲೇ ನಾಟಕ, ರಂಗಭೂಮಿ ಬಗ್ಗೆ ಆಸಕ್ತಿ ಹೊಂದಿದ್ದರು. ವೃತ್ತಿರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಚಿತ್ರರಂಗ ಪ್ರವೇಶಿಸಿದ್ದರು.
ಡಾ. ರಾಜ್ಕುಮಾರ್ ಹಾಗೂ ಲೀಲಾವತಿ ಜೋಡಿ ಮೋಡಿ ಮಾಡಿತ್ತು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ಸಿನಿಮಾಗಳಲ್ಲಿ ಅವರು ನಟಿಸಿದ್ದರು. 1949ರಲ್ಲಿ ಬಂದಿದ್ದ 'ನಾಗ ಕನ್ನಿಕಾ' ಅವರು ನಟಿಸಿದ್ದ ಮೊದಲ ಸಿನಿಮಾ. ಲೀಲಾವತಿ ಪುತ್ರ ವಿನೋದ್ ರಾಜ್ ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು.


Click it and Unblock the Notifications











