ಕನ್ನಡ ಬಾವುಟ: ಇದು ಚುನಾವಣೆಯ 'ವ್ಯೂಹ' ಎಂದ ನಟ ಜಗ್ಗೇಶ್
ಕರುನಾಡಿನಲ್ಲಿ ಪ್ರತ್ಯೇಕ ನಾಡಧ್ವಜ ರೂಪಿಸಿ, ಅದಕ್ಕೆ ಕಾನೂನು ಚೌಕಟ್ಟು ನೀಡಲು ಹೊರಟಿರುವ ಕರ್ನಾಟಕ ರಾಜ್ಯ ಸರ್ಕಾರದ ನಡೆಗೆ ರಾಷ್ಟ್ರವ್ಯಾಪಿ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.
''ಯಾವುದೇ ರಾಜ್ಯ ಪ್ರತ್ಯೇಕ ಧ್ವಜವನ್ನು ಹೊಂದಲು ಕಾನೂನಿನಲ್ಲಿ ಅವಕಾಶ ಇಲ್ಲ. ಕರ್ನಾಟಕ ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿದೆ. ಏಕತೆಗೆ ಭಂಗ ತರಲು ಯತ್ನಿಸುತ್ತಿದೆ'' ಎಂದು ಕೆಲವರು 'ಒನ್ ನೇಷನ್ ಒನ್ ಫ್ಲ್ಯಾಗ್' ಪರ ವಾದ ಮಾಡುತ್ತಿದ್ದರೆ, ''ಮೊದಲು ನಾನು ಕನ್ನಡಿಗ, ನಂತರ ಭಾರತೀಯ'' ಎಂದು ಕನ್ನಡಿಗರು, ಕನ್ನಡ ಪರ ಹೋರಾಟಗಾರರು 'ಮೈ ಸ್ಟೇಟ್ ಮೈ ಫ್ಲ್ಯಾಗ್'ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹೀಗಿರುವಾಗಲೇ, ಕನ್ನಡ ಚಿತ್ರರಂಗದ ನಟ, ಬಿಜೆಪಿ ನಾಯಕ ಜಗ್ಗೇಶ್ ''ಇದೆಲ್ಲ ಚುನಾವಣೆ ಹತ್ತಿರ ಇರಬೇಕಾದರೆ ನಡೆಯುವ ವ್ಯೂಹ'' ಎಂದು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿರಿ....

ಸರಣಿ ಟ್ವೀಟ್ ಮಾಡಿರುವ ನಟ ಜಗ್ಗೇಶ್
ಕನ್ನಡ ಪರ ಹಾಗೂ ಡಬ್ಬಿಂಗ್ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿ, ಕನ್ನಡಿಗರ ಪರ ದನಿ ಎತ್ತಿದ್ದ ನಟ ಜಗ್ಗೇಶ್ 'ಪ್ರತ್ಯೇಕ ನಾಡಧ್ವಜ' ವಿವಾದದ ಕುರಿತು ತಮ್ಮ ಅನಿಸಿಕೆಯನ್ನ ಸರಣಿ ಟ್ವೀಟ್ ಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಸಿರಿಗನ್ನಡಂ ಗೆಲ್ಗೆ
''ನಾಡ ದೇವತೆ ತಾಯಿ ಚಾಮುಂಡಿ... ಅವಳ ಹಣೆಯ ಕೆಂಪು ಕುಂಕುಮ, ಗದ್ದದ ಮೇಲಿನ ಹರಿಶಿನ ತೆಗೆದು ಕನ್ನಡದ ಧ್ವಜ 'ಹಳದಿ ಕೆಂಪು'... ಹೆಮ್ಮೆಯ ಕನ್ನಡಿಗರ ಬಾವುಟ. ಸಿರಿಗನ್ನಡಂ ಗೆಲ್ಗೆ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಹುಳುಕು ಮುಚ್ಚಲು....
''ತಮ್ಮ ಸರ್ಕಾರ ಹುಳುಕು ಮುಚ್ಚಲು, ಜನರ ಗಮನ ಬೇರೆಡೆ ಸೆಳೆಯಲು, ಭಾವನಾತ್ಮಕ ಭಾವನೆಯ ಕನ್ನಡ ಬಾವುಟ ಬಳಸುತ್ತಿದ್ದಾರೆ. ಇದು ಚಾಣಕ್ಯ ತಂತ್ರದ ರಾಜಕೀಯ ದಾಳ'' ಎಂದೂ ನಟ ಜಗ್ಗೇಶ್ ಟ್ವೀಟಿಸಿದ್ದಾರೆ.

ಚುನಾವಣೆಯ ವ್ಯೂಹ
''ಕನ್ನಡದ ಬಾವುಟ ವಿಷಯ ತಂದು ಕನ್ನಡಿಗರಿಗೆ ಕೇಂದ್ರದ ಮೇಲೆ ಕೋಪ ತರಿಸುವ ಹುನ್ನಾರ ಭಾಸವಾಗುತ್ತಿದೆ. ಅದು ಚುನಾವಣೆ ಹತ್ತಿರ ಇರಬೇಕಾದರೆ ನಡೆಯುವ ವ್ಯೂಹ'' - ಜಗ್ಗೇಶ್

ಕ್ಷುದ್ರ ವಿದ್ಯೆ
''ಕೈ' ಸರ್ಕಾರದಿಂದ ಶತಾಯಗತಾಯ ಸರ್ಕಾರ ಮರುಸ್ಥಾಪಿಸಲು ಎಲ್ಲ ಕ್ಷುದ್ರ ವಿದ್ಯೆ ಪ್ರಯೋಗವಾಗುತ್ತಿದೆ. ಅದಕ್ಕೆ ಸಾಕ್ಷಿಯೇ ಸಿದ್ದರಾಮಣ್ಣ. ಟಿವಿಯಲ್ಲಿ ಹೇಳಿದ್ದು ನಾನು ಹಿಂದು, ಬಿಜೆಪಿ ಠುಸ್ ಎಂದು.!'' - ಜಗ್ಗೇಶ್


Click it and Unblock the Notifications











