"ಯುವತಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ಕೊಂಡು ನಂಗೆ ಅವಾಚ್ಯ ಪದ ಬಳಸಿದ್ಲು"; ನಾಗಲಕ್ಷ್ಮಿ ಚೌಧರಿ
ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ಇತ್ತೀಚೆಗೆ ಹೆಚ್ಚು ಚರ್ಚೆ ಆಗ್ತಿದೆ. ಸಿನಿಮಾ ತಾರೆಯರನ್ನು ಟಾರ್ಗೆಟ್ ಮಾಡಿ ಕೆಲವರು ಅಶ್ಲೀಲ ಕಾಮೆಂಟ್ಸ್ ಮಾಡುತ್ತಿದ್ದಾರೆ. ನನಗೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ ಎಂದು ನಟಿ ರಮ್ಯಾ ದೂರು ನೀಡಿದ್ದು ಗೊತ್ತೇಯಿದೆ. ಈ ಸಂಬಂಧ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.
ಸೆಲೆಬ್ರೆಟಿಗಳು ಮಾತ್ರವಲ್ಲ ಸಾಮಾನ್ಯ ಜನರಿಗೂ ಅದರಲ್ಲೂ ಮುಕ್ಯವಾಗಿ ಮಹಿಳೆಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಹೆಚ್ಚಾಗಿದೆ. ಅಶ್ಲೀಲ ಕಾಮೆಂಟ್ ಮಾಡುವುದು, ಫೋಟೊ, ವೀಡಿಯೋ ಮಾರ್ಪ್ ಮಾಡಿ ವೈರಲ್ ಮಾಡುವುದು, ಮೀಮ್ಸ್ ಕ್ರಿಯೇಟ್ ಮಾಡಿ ಕೆಟ್ಟದಾಗಿ ಪೋಸ್ಟ್ ಮಾಡಿ ಚಾರಿತ್ರ್ಯವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೆಲ ಕಿಡಿಗೇಡಿಗಳ ಮನಸ್ಥಿತಿಯೇ ಆ ರೀತಿ ಇರುತ್ತದೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕೆಟ್ಟದಾಗಿ ಪೋಸ್ಟ್, ಕಾಮೆಂಟ್ ಮಾಡಿ ವಿಕೃತ ಆನಂದ ಅನುಭವಿಸುತ್ತಾರೆ.

ಕೆಲ ಪುರುಷರು ಮಾತ್ರವಲ್ಲ ಕೆಲ ಮಹಿಳೆಯರು ಕೂಡ ಹೀಗೆ ಫೇಕ್ ಅಕೌಂಟ್ಗಳನ್ನು ಹೊಂದಿದ್ದಾರೆ. ಅವರು ಇದೇ ರೀತಿ ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಾರೆ. ಬಹುತೇಕರು ಇದನ್ನು ನಂಬುವುದಿಲ್ಲ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಇಂತಾದೊಂದು ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಬೆಂಗಳೂರು ಬಝ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಒಮ್ಮೆ ತಮಗೆ ಎದುರಾಗಿದ್ದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.
"ಸೌಜನ್ಯ ಪ್ರಕರಣದ ಬಗ್ಗೆ ನಾನು ಸರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿಲ್ಲ, ಎನ್ನುವಂತೆ ನನ್ನ ಬಗ್ಗೆ ಯಾರೋ ಒಂದು ವೀಡಿಯೋ ಹಾಕಿದ್ದರು. ಸಾಕಷ್ಟು ಜನ ಅದಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ರು. ಅದರಲ್ಲಿ ಒಬ್ರು, 'ಇವಳನ್ನು ಕೂಡ ರೇಪ್ ಮಾಡ್ಬೇಕು' ಎಂದು ಕಾಮೆಂಟ್ ಮಾಡಿದ್ರು. ನಾನು ಈ ಸಂಬಂಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೆ. ಬಳಿಕ ಪೊಲೀಸರು ಆ ಅಕೌಂಟ್ಗೆ ಸಂಬಂಧಪಟ್ಟವರನ್ನು ಹುಡುಕಿ ಅರೆಸ್ಟ್ ಮಾಡಿ ಕರೆತಂದಿದ್ರು" ಎಂದು ನಾಗಲಕ್ಷ್ಮಿ ಆ ಘಟನೆ ನೆನಪಿಸಿಕೊಂಡಿದ್ದಾರೆ.
ಅಚ್ಚರಿ ಅಂದ್ರೆ ಆ ರೀತಿ ಕಾಮೆಂಟ್ ಮಾಡಿದ್ದು ಪುರುಷ ಅಲ್ಲ, ಒಬ್ಬ ಮಹಿಳೆ ಎಂದು ನಾಗಲಕ್ಷ್ಮಿ ಹೇಳಿದ್ದಾರೆ. "ಆ ರೀತಿ ಕಾಮೆಂಟ್ ಮಾಡುವವರು ತಮ್ಮ ಅಧಿಕೃತ ಅಕೌಂಟ್ನಿಂದ ಮಾಡಲ್ಲ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡಿರುತ್ತಾರೆ. ನನಗೆ ಆ ರೀತಿ ಕಾಮೆಂಟ್ ಮಾಡಿದ್ದು ಯಾರು ಗೊತ್ತಾ? ಒಬ್ಬ ಹೆಣ್ಣು ಮಗಳು. ಬರೀ ಗಂಡು ಹುಡುಗ್ರು ಮಾತ್ರ ಈ ರೀತಿ ಮಾಡ್ತಾರೆ ಅಂದುಕೊಳ್ಳಬೇಡಿ. ಅಕೌಂಟ್ ಹೆಸರು ನೋಡಿದ್ರೆ ಗಂಡು ಹುಡುಗ ಅನ್ನಿಸುತ್ತೆ. ಆದರೆ ಅದು ಹೆಣ್ಣುಮಗಳ ಫೇಕ್ ಅಕೌಂಟ್ ಆಗಿತ್ತು. ಆಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಗಿದ್ಲು" ಎಂದು ನಾಗಲಕ್ಷ್ಮಿ ವಿವರಿಸಿದ್ದಾರೆ.
ಆ ರೀತಿ ಕಾಮೆಂಟ್ ಮಾಡಿದ್ದಕ್ಕೆ ಆ ಯುವತಿ ಕೊಟ್ಟ ಕಾರಣ ಏನು ಎನ್ನುವುದನ್ನು ನಾಗಲಕ್ಷ್ಮಿ ಬಿಚ್ಚಿಟ್ಟಿದ್ದಾರೆ. "ಆ ರೀತಿ ಕಾಮೆಂಟ್ ಮಾಡೋಕೆ ಕಾರಣ ಏನು ಎಂದು ನಾನು ಆಕೆಯನ್ನು ಕೇಳಿದ್ದೆ. ಅದಕ್ಕೆ ಅವಳು 'ನನ್ನ ಜೀವನದಲ್ಲಿ ಕೂಡ ಕಹಿ ಘಟನೆ ಆಗಿತ್ತು. ಸೌಜನ್ಯ ಪ್ರಕರಣದಲ್ಲಿ ನೀವು ಕ್ರಮ ಕೈಗೊಳ್ಳಬೇಕಿತ್ತು ಅನ್ನಿಸ್ತು, ಅದಕ್ಕೆ ಇವರಿಗೂ ಹಂಗೆ ಆಗಬೇಕು ಎಂದು ಆಕ್ರೋಶದಲ್ಲಿ ಕಾಮೆಂಟ್ ಮಾಡಿದ್ದೆ' ಎಂದಳು. ಪಾಪ ಆಕೆಯ ತಂದೆ ತಾಯಿ ಮುಗ್ಧರು. ಆ ಪ್ರಕರಣದಲ್ಲಿ 3ರಿಂದ 7 ವರ್ಷ ಶಿಕ್ಷೆ ಆಗಿಬೇಕಿತ್ತು. ಕೆಲವರಿಗೆ ಇದೆಲ್ಲಾ ಗೊತ್ತಿರಲ್ಲ" ಎಂದು ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.


Click it and Unblock the Notifications











