'ಕಾಟೇರ' ಸಮಯದಲ್ಲಿಯೇ ಬೆನ್ನು ನೋವು, ತರುಣ್ ಸುಧೀರ್ಗೆ ದರ್ಶನ್ ಹೇಳಿದ್ದೇನು..?
ನೂರಾ ಮೂವತ್ತೊಂದು ದಿನದ ನಂತರ ದರ್ಶನ್ ದರ್ಶನ ಪಡೆದು ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳೂ ಪುನೀತರಾಗಿದ್ದಾರೆ. ತಮ್ಮ ಆರಾಧ್ಯ ದೈವ ಹೊರ ಬಂದ ಖುಷಿಯಲ್ಲಿ ದೀಪಾವಳಿ ಹಬ್ಬವನ್ನು ಇನ್ನೂ ಸಡಗರ ಮತ್ತು ಸಂಭ್ರಮದಿಂದ ಆಚರಿಸಲು ಸಿದ್ಧರಾಗಿದ್ದಾರೆ.
ಇನ್ನೂ ಕನ್ನಡ ಚಿತ್ರರಂಗ ಕೂಡ ದರ್ಶನ್ ಅವರಿಗೆ ರತ್ನಗಂಬಳಿಯನ್ನು ಹಾಕಿ ಸ್ವಾಗತ ಕೋರಿದೆ. ರಚಿತಾ ರಾಮ್.. ರಕ್ಷಿತಾ.. ಸೇರಿ ದರ್ಶನ್ ಅವರ ಆಪ್ತ ವಲಯದ ಮುಖದಲ್ಲಿ ಮಂದಹಾಸ ಮೂಡಿದೆ. ಇವತ್ತು ಕನ್ನಡ ಚಿತ್ರರಂಗದಿಂದ ದರ್ಶನ್ ಕಾಲಿಗೆ ಅಡ್ಡಡ್ಡ ಬಿದ್ದು ಯಾರೆಲ್ಲ ದರ್ಶನ ಪಡೆಯಲಿದ್ದಾರೆ ಎನ್ನುವುದು ಇನ್ನೇನು ಕೆಲವೇ ಹೊತ್ತಿನಲ್ಲಿ ಗೊತ್ತಾಗಲಿದೆಯಾದರೂ ಸದ್ಯಕ್ಕೆ ದರ್ಶನ್ ಮನೆಗೆ ಮರಳಿ ಬಂದಿರುವ ಖುಷಿಯನ್ನು ತರುಣ್ ಸುಧೀರ್ ಹಂಚಿಕೊಂಡಿದ್ದಾರೆ.

ಹೌದು, TV9 ಕನ್ನಡ ಜೊತೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿರುವ ತರುಣ್ ಸುಧೀರ್ ಮೊದಲಿಗೆ ನೆಮ್ಮದಿ ಸಿಕ್ಕಿದೆ ಯಾಕೆಂದರೆ ಕಳೆದು ಎರಡು ಮೂರು ವಾರದಿಂದ ಅವರ ಆರೋಗ್ಯದ ಕುರಿತು ಸುದ್ದಿಗಳನ್ನು ನೋಡಿ ಆತಂಕ ಹೆಚ್ಚಾಗಿತ್ತು ಎಂದಿದ್ದಾರೆ. ದರ್ಶನ್ ಅವರಿಗೆ ಎಷ್ಟೇ ನೋವು ಇದ್ದರೂ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ ಹೀಗಿರುವಾಗ ನಡೆಯೋಕೆ ಆಗದಷ್ಟು ಕಷ್ಟ ಆಗ್ತಿದೆ ಎಂದಾಗ ನೋವು ವಿಪರೀತವಾಗಿದೆಯಲ್ಲ ಎನ್ನುವ ಆತಂಕ ಇತ್ತು ಎಂದಿರುವ ತರುಣ್ ಸುಧೀರ್ ನ್ಯಾಯಾಲಯ ಅತ್ಯುತ್ತಮವಾದ ತೀರ್ಪು ನೀಡಿದೆ, ಅವರಿಗೆ ಮಧ್ಯಂತರ ಜಾಮೀನು ನೀಡಿದೆ ಎಂದಿದ್ದಾರೆ. ಆರು ವಾರಗಳ ಕಾಲ ಚಿಕಿತ್ಸೆ ಪಡೆಯಲು ಅವಕಾಶ ನೀಡಿದ ಹಿನ್ನೆಲೆ ನ್ಯಾಯಾಲಯಕ್ಕೆ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಇನ್ನೂ ದರ್ಶನ್ಗೆ ಬೆನ್ನು ನೋವು ಇಂದು ನಿನ್ನೆಯಿಂದ ಕಾಡುತ್ತಿಲ್ಲ ಕಾಟೇರ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕೂಡ ದರ್ಶನ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು ಎಂದಿರುವ ತರುಣ್ ನಿರ್ಮಾಪಕರಿಗೆ ತೊಂದರೆಯಾಗಬಾರೆಂಬ ಉದ್ದೇಶದಿಂದ ನೋವಲ್ಲಿಯೇ ಒಂದು ವಾರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದಾರೆ. ಅದಾದ ನಂತರ ಶೆಡ್ಯೂಲ್ ಬ್ರೇಕ್ ಆದ ನಂತರ ನಾನು ಮನೆಗೆ ಹೋದಾಗ ಅವತ್ತು ಕಾಣಿಸಿಕೊಂಡಿದ್ದು ಕಾಲು ನೋವಲ್ಲ ಬದಲಿಗೆ ಬೆನ್ನು ನೋವು ಎನ್ನುವ ವಿಚಾರ ನನಗೆ ಗೊತ್ತಾಯ್ತು ಎಂದಿರುವ ತರುಣ್ ನನಗ್ಯಾವಾಗ ಬೆನ್ನು ನೋವು ಜಾಸ್ತಿಯಾಗುತ್ತೆ ಆಗ ಆ ನೋವು ಕಾಲಿನವರೆಗೆ ಹರಡುತ್ತೆ ಎಂದು ದರ್ಶನ್ ನನಗೆ ಹೇಳಿದ್ದರು ಎಂದು ಹೇಳಿದ್ದಾರೆ.
ಚಿಕಿತ್ಸೆಯ ವಿಚಾರ ಕೇಳಿದಾಗ ಬೇಡ ನಾನು ಆಸ್ಪತ್ರೆಗೆ ಹೋಗುವುದು ಅವರು ಆಪರೇಷನ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರೆ ಮೂರು ನಾಲ್ಕು ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತೆ. ಕೋಟಿ ಕೋಟಿ ಹಣ ಹಾಕಿ ಇಲ್ಲಿ ಚಿತ್ರೀಕರಣ ನಡೆಯುತ್ತಿರುತ್ತೆ. ಹಾಗೇನಾದರೂ ಆದರೆ ನಾನು ಯಾರಿಗೆ ಜವಾಬ್ಧಾರಿ ಎಂದು ದರ್ಶನ್ ಹೇಳಿದ್ದರು ಎಂದು ನೆನಪು ಮಾಡಿಕೊಂಡಿರುವ ತರುಣ್ ಎಲ್ಲ ಸರಿಹೋಗುತ್ತೆ ಎಂದು ದರ್ಶನ್ ಹೇಳಿದ್ದರು ಎಂದು ಹೇಳಿದ್ದಾರೆ. ಇಲ್ಲಿದ್ದಾಗ ತಾತ್ಕಾಲಿಕ ಪರಿಹಾರವಷ್ಟೇ ಅವರು ಕಂಡುಕೊಳ್ಳುತ್ತಿದ್ದರು ಈ ಕಾರಣಕ್ಕೆ ಆ ನೋವು ಜೈಲಿನಲ್ಲಿ ಉಲ್ಭಣವಾಗಿದೆ ಎಂದು ಹೇಳಿದ್ದಾರೆ. ಅವರಿರುವ ಎತ್ತರಕ್ಕೆ ಆ ನೋವು ಜಾಸ್ತಿಯಾಗಿದೆ ಎನ್ನುವುದು ನನ್ನ ಭಾವನೆ ಎಂದು ಹೇಳಿರುವ ತರುಣ್ ಅವರು ಹೊರಗಡೆ ಬಂದಿರುವುದಕ್ಕೆ ನಾವೆಲ್ಲ ತುಂಬಾ ಖುಷಿಯಾಗಿದ್ದೇವೆ ಎಂದು ಕೂಡ ಹೇಳಿದ್ದಾರೆ.
ಇನ್ನೂ ಮತ್ತೊಂದು ಕಡೆ ತರುಣ್ ಸುಧೀರ್ ಅವರ ಪತ್ನಿ ಮತ್ತು ದರ್ಶನ್ ಅವರಿಗೆ ದೇವರು ಕೊಟ್ಟ ತಂಗಿ ಸೋನಾಲ್ ಮಾಂಥೆರೋ ಕೂಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ದೇವರಿಗೆ ಧನ್ಯವಾದವನ್ನು ಹೇಳಿದ್ದಾರೆ.


Click it and Unblock the Notifications











