ಕೋವಿಡ್ ಸಂಕಷ್ಟದಲ್ಲಿ 'ಉಸಿರು' ನೀಡುತ್ತಿರುವ ಕವಿರಾಜ್ ಮತ್ತು ಬಳಗ
ಗೀತ ರಚನೆಕಾರ, ನಿರ್ದೇಶಕ ಕವಿರಾಜ್ ಅವರು ಹಲವು ಸಮಾನ ಮನಸ್ಕರೊಂದಿಗೆ ಸೇರಿ 'ಉಸಿರು' ಹೆಸರಿನ ಸೇವೆ ಆರಂಭಿಸಿದ್ದಾರೆ. ಕೋವಿಡ್ನಿಂದ ಉಸಿರಾಟದ ಸಮಸ್ಯೆ ಅನುಭವಿಸುತ್ತಿರುವವರಿಗೆ ಆಮ್ಲಜನಕ ನೀಡುವ ಕಾರ್ಯವನ್ನು 'ಉಸಿರು' ಮಾಡುತ್ತಿದೆ.
ಕೋವಿಡ್ನಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಉಸಿರು ತಂಡವನ್ನು ಸಂಪರ್ಕಿಸಿದರೆ ಅವರಿದ್ದಲ್ಲಿಗೇ ತೆರಳಿ ಆಮ್ಲಜನಕ ಸಾಂದ್ರಕ ಯಂತ್ರವನ್ನು ಅಳವಡಿಸಿ ರೋಗಿಗೆ ನೆಮ್ಮದಿಯಾಗಿ ಉಸಿರಾಡುವಂತೆ ಮಾಡಲಾಗುತ್ತದೆ. ರೋಗಿಗೆ ಆಸ್ಪತ್ರೆ ಬೆಡ್ ದೊರೆತ ಮೇಲೆ ಆಮ್ಲಜನಕ ಸಾಂದ್ರಕ ಯಂತ್ರವನ್ನು ಉಸಿರು ತಂಡಕ್ಕೆ ವಾಪಸ್ ಮರಳಿಸಬೇಕು. ಇದು 'ಉಸಿರು' ತಂಡದ ಕಾರ್ಯವಿಧಾನ.
ಮೇ 12 ರಿಂದ 'ಉಸಿರು' ತಂಡ ಕಾರ್ಯಾರಂಭ ಮಾಡಿದೆ. 10 ಲಕ್ಷ ಹಣ ವ್ಯಯಿಸಿ ಹತ್ತು ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಈ ತಂಡ ಖರೀದಿಸಿದೆ. ತಂಡವು ಕೆಲವು ನರ್ಸ್ಗಳು ಹಾಗೂ ಕೆಲವು ವೈದ್ಯರ ಸೇವೆಯನ್ನು ಮನವಿ ಮೇರೆಗೆ ಬಳಸಿಕೊಳ್ಳುತ್ತಿದೆ. 'ಉಸಿರು' ಸೇವೆ ಬಳಸಿಕೊಳ್ಳಲು 77950 50380 ಸಂಖ್ಯೆಗೆ ಸಂಪರ್ಕಿಸಬಹುದು.

ಹಲವು ಸಿನಿಮಾ ನಟ-ನಟಿಯರು, ತಂತ್ರಜ್ಞರು 'ಉಸಿರು' ತಂಡದ ಜೊತೆಗಿದ್ದಾರೆ. ಸಾಧು ಕೋಕಿಲ, ಕವಿತಾ ಲಂಕೇಶ್, ನೀತು ಶೆಟ್ಟಿ, ದಿನಕರ್ ತೂಗುದೀಪ್, ಚೈತನ್ಯ, ಸಂಚಾರಿ ವಿಜಯ್, ಸುಂದರ್ ಇನ್ನೂ ಹಲವಾರು ಮಂದಿ ಒಟ್ಟು ಸೇರಿ ಈ 'ಉಸಿರು' ಸೇವೆ ಆರಂಭಿಸಿದ್ದಾರೆ.
Recommended Video
ಕವಿರಾಜ್ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಹಲವಾರು ಮಂದಿ ಶ್ರೀಸಾಮಾನ್ಯರು ತಮ್ಮ ದುಡಿಮೆಯ ಹಣವನ್ನು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಒಟ್ಟಿನಲ್ಲಿ ಕವಿರಾಜ್ ಹಾಗೂ ಸಮಾನ ಮನಸ್ಕ ಗೆಳೆಯರು ಸಂಕಷ್ಟದ ಸಮಯದಲ್ಲಿ ಕೈಕಟ್ಟಿ ಕೂರದೆ ಕೊರೊನಾ ಸಂಕಷ್ಟದ ಸಮಯದಲ್ಲಿ ಅವಶ್ಯಕವಾದ ಸೇವೆಯನ್ನು ಒದಗಿಸುತ್ತಿದ್ದಾರೆ.


Click it and Unblock the Notifications











