ಯುವ ನಿರ್ದೇಶಕ ಭರತ್ ಸಾವಿಗೆ ಮರುಗಿದ ಚಿತ್ರ ಸಾಹಿತಿ ಕವಿರಾಜ್
ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಭರತ್ ಸಾವಿಗೀಡಾಗಿದ್ದಾರೆ. ಕೊರೊನಾ ವೈರಸ್ ಜೊತೆಗೆ ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದರು ಎಂಬ ಮಾಹಿತಿ ಲಭ್ಯವಾಗಿದೆ. ಶ್ರೀಮುರಳಿ ನಟಿಸಿದ್ದ 'ಕಂಠಿ' ಹಾಗೂ ರವಿಚಂದ್ರನ್ ಮಗ ಮನೋರಂಜನ್ ನಟಿಸಿದ್ದ 'ಸಾಹೇಬ' ಸಿನಿಮಾಗಳನ್ನು ನಿರ್ದೇಶಿಸಿದ್ದ ಭರತ್ ನಂತರದ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.
ಯುವ ನಿರ್ದೇಶಕ ಭರತ್ ಅವರ ದಿಢೀರ್ ಸಾವಿಗೆ ಇಡೀ ಚಿತ್ರರಂಗ ಅಚ್ಚರಿ ವ್ಯಕ್ತಪಡಿಸಿದೆ. ವಿಶೇಷವಾಗಿ ಸಾಹಿತಿ ಕವಿರಾಜ್ ಬೇಸರಗೊಂಡಿದ್ದಾರೆ. ಅವರ ಜೊತೆಗಿನ ಕೆಲಸ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ನನ್ನ ಮನ್ನಣೆಗೆ ಕಾರಣ ಆಗಿದ್ದರು
''ನನ್ನ ಸಿನಿ ಜೀವನದ ಆರಂಭದ ದಿನಗಳಲ್ಲಿ ಗೀತರಚನೆಕಾರನಾಗಿ ಮನ್ನಣೆ ಗಳಿಸಲು ಇವರ ನಿರ್ದೇಶನದ 'ಕಂಠಿ' ಸಿನಿಮಾಕ್ಕೆ ಬರೆದ 'ಜಿನುಜಿನುಗೋ ಜೇನಾಹನಿ' ಮತ್ತು 'ಬಾನಿಂದ ಬಾ ಚಂದಿರ' ಹಾಡುಗಳು ನೆರವಾಗಿದ್ದವು. ಇವರ ಇನ್ನೊಂದು ಸಿನಿಮಾ ಮನೋರಂಜನ್ ರವಿಚಂದ್ರನ್ ಅಭಿನಯದ 'ಸಾಹೇಬ' ಸಿನಿಮಾಕ್ಕೂ ಶೀರ್ಷಿಕೆ ಗೀತೆ ಬರೆಯುವ ಅವಕಾಶ ಸಿಕ್ಕಿತ್ತು.'' - ಕವಿರಾಜ್, ಸಾಹಿತಿ

ಕಂಠಿ ಚಿತ್ರದ ನಿಜಕ್ಕೂ ವಿಶೇಷ
''ಸುಮಾರು ಹದಿನಾರು ವರ್ಷಗಳ ಹಿಂದೆ ಆ ಕಾಲಕ್ಕೆ ಕಂಠಿ ನಿಜವಾದ ವಿಭಿನ್ನ ಸಿನಿಮಾ ಅಗಿ ಗೆದ್ದಿತ್ತು. ಬೆಳಗಾವಿಯ ಕನ್ನಡ ಮರಾಠಿ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ಲವ್ ಸ್ಟೋರಿಯೊಂದನ್ನು ಸೊಗಸಾಗಿ ಹೆಣೆದು 'ಭರತ್' ಎಲ್ಲರ ಗಮನ ಸೆಳೆದಿದ್ದರು. ಇಂತಹ ಅದ್ಭುತ ಸಿನಿಮಾವನ್ನು ಮೊದಲ ಯತ್ನದಲ್ಲೇ ಕೊಟ್ಟರು ಭರತ್ ಅವರಿಗೆ ಮುಂದೆ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಲು ಆಗಲೇ ಇಲ್ಲ. '' - ಕವಿರಾಜ್, ಸಾಹಿತಿ

ನೇರ ನಡವಳಿಕೆ ಮುಳುವಾಯಿತು
''ಎಷ್ಟೇ ಪ್ರತಿಭಾವಂತನಾದರೂ ತೀರಾ ನೇರ ನಡವಳಿಕೆ, ಹೊಂದಾಣಿಕೆ ಮಾಡಿಕೊಳ್ಳದ ಸ್ವಭಾವವೇ ಅವರಿಗೆ ಮುಳುವಾಯಿತೇನೋ. ಈ ಬಗ್ಗೆ ಅವರ ಬಳಿ ಒಮ್ಮೆ ಸೂಕ್ಷ್ಮವಾಗಿ ಮಾತಾಡಿದಾಗ "ಇಲ್ಲಾ ಕವಿರಾಜ್..ನಾನಿರೋದೇ ಹೀಗೆ" ಎಂದಿದ್ದರು. ಇಂದು ಬೆಳಗ್ಗೆ ಬಂದ ಭರತ್ ಇನ್ನಿಲ್ಲ ಎಂಬ ಸುದ್ದಿ ತೀರಾ ವಿಷಾದ ಹುಟ್ಟಿಸಿತು. ಕೋವಿಡ್ ಜೊತೆಗೆ ಇತರೇ ಆರೋಗ್ಯ ಸಮಸ್ಯೆಗಳು ಸೇರಿ ಅವರ ಬಲಿಪಡೆದಿವೆ.'' - ಕವಿರಾಜ್, ಸಾಹಿತಿ
Recommended Video

2020 ಅದೇಕೆ ಇಷ್ಟು ಅಹಿತಕರ
''ಇತ್ತೀಚೆಗೆ ಸಾವಿನ ಸುದ್ದಿ ಕೇಳಿ ಕೇಳಿ ಒಂದು ರೀತಿ ಬದುಕಿನ ಬಗ್ಗೆ ವೈರಾಗ್ಯ ಮೂಡುವಂತಾಗಿದೆ. ಕೊರೊನಾ ಸಂಕಷ್ಟದ ಬೇಸರದ ನಡುವೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಿನಿಮಾ ರಂಗದ ಹಲವರು ಕೊನೆಯುಸಿರೆಳೆದರು. 2020 ಅದೇಕೆ ಇಷ್ಟು ಅಹಿತಕರ ವರ್ಷವಾಗುತ್ತಿದೇಯೋ ???'' - ಕವಿರಾಜ್, ಸಾಹಿತಿ


Click it and Unblock the Notifications











