ಹಿರಿಯ ಸಾಹಿತಿ ಶ್ರೀರಂಗ ನೀಡಿದ ಸಲಹೆಯ ಮಹತ್ವ ನೆನೆದ ಕವಿರಾಜ್
ಕನ್ನಡ ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ, ಬರಹಗಾರರೂ ಆಗಿದ್ದ ಶ್ರೀರಂಗ ಅವರು ಅನಾರೋಗ್ಯ ಕಾರಣದಿಂದ ಮೇ 9 ರಂದು ನಿಧನರಾದರು. ಶ್ರೀರಂಗ ಅವರ ಸಾವಿಗೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದರು.
ಕನ್ನಡದ ಹಲವು ಸೂಪರ್ ಹಿಟ್ ಗೀತೆಗಳನ್ನು ರಚಿಸಿದ್ದ ಶ್ರೀರಂಗ ಅವರು ಅನೇಕ ಯುವ ಗೀತಾ ರಚನೆಕಾರರಿಗೆ, ಚಿತ್ರ ಸಾಹಿತಿಗಳಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಕರಾಗಿದ್ದರು. ಕವಿರಾಜ್ ಅವರು ಸಹ ಶ್ರೀರಂಗ ಅವರಿಂದ ಮಾರ್ಗದರ್ಶನ ಪಡೆದುಕೊಂಡವರೇ.
ಅಂದು ಶ್ರೀರಂಗ ಅವರು ನೀಡಿದ ಸಲಹೆಯೊಂದನ್ನು ಕವಿರಾಜ್ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದನ್ನ ಈಗಲೂ ಮುಂದುವರಿಸುತ್ತಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ವಿವರವಾಗಿ ಬರೆದು, ಶ್ರೀರಂಗ ಅವರನ್ನು ಸ್ಮರಿಸಿಕೊಂಡಿದ್ದಾರೆ.

'ಅದೆಷ್ಟು ಸರಳ, ಅದೆಷ್ಟು ಸೌಮ್ಯ, ಅದೆಷ್ಟು ಸಜ್ಜನ, ಅದೆಷ್ಟು ಮಿತಭಾಷಿ ಅಂದ್ರೆ ಅಕ್ಷರಶಃ ವರ್ಣಿಸೋಕೆ ಪದಗಳೇ ಇಲ್ಲ. ಸಂಕೋಚದ ಮುದ್ದೆಯಂತೆ ಒಂದು ಮೂಲೆಯಲ್ಲಿ ಕುಳಿತಿರುತಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು, ಪರದೆ ಎತ್ತಿ ಪನ್ನೀರ ಚೆಲ್ಲಿ , ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ ಅಂತಾ ಗಮ್ಮತ್ತಿನ ಹಾಡುಗಳನ್ನು ಬರೆದಿದ್ದು ಇವರೇ. ಹಾಗಾಗಿ ಹೆಸರು 'ಶ್ರೀರಂಗ' ಆಗಿದ್ದರೂ 'ಭಂಗಿ ರಂಗ' ಎಂದೇ ಖ್ಯಾತರಾಗಿದ್ದರು
ಅವರು ನನಗೆ ಕೊಟ್ಟ ಸಲಹೆ ಒಂದನ್ನು ಇಂದಿಗೂ ನಾನು ಪಾಲಿಸುತ್ತಿದ್ದೇನೆ. ನನ್ನ ಆರಂಭದ ದಿನಗಳಲ್ಲಿ ಗುರುಕಿರಣ್ ಅವರ ಸ್ಟುಡಿಯೋದಲ್ಲಿ ಒಟ್ಟಿಗೆ ಹಾಡು ಬರೆಯುವ ಸಂದರ್ಭಗಳು ಸಿಕ್ಕಿತ್ತು. ಅವರು 'ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ' ಹಾಡು ಬರೆಯುತ್ತಿದ್ದರು. ನಾನು ಬೇರಾವುದೋ ಹಾಡು ಬರೆಯುತ್ತಾ ನಡುನಡುವೆ ಅವರಿಗೆ ತೋರಿಸುತ್ತಿದ್ದೆ. ಆಗ ನನ್ನನ್ನು ಸರಿಯಾಗಿ ಗಮನಿಸಿದ್ದ ಅವರು "ಕವಿರಾಜ್ ಪ್ರತಿ ಸಾಲಲ್ಲೂ ಏನೋ ಅದ್ಭುತವಾದದ್ದೇ ಬರೆಯಬೇಕು ಅಂತಾ ಒದ್ದಾಡಬೇಡಿ. ಪ್ರತಿ ಟ್ಯೂನಲ್ಲು ಒಂದು ಜೀವಸ್ಥಾನ ಅಂದ್ರೇ ಪಂಚ್ ಮಾಡಬೇಕಾದ ಜಾಗ ಇರುತ್ತೆ. ಅದನ್ನು ಗುರುತಿಸಿಕೊಳ್ಳಿ. ಅಲ್ಲಿ ಸರಿಯಾಗಿ ಪಂಚ್ ಕೊಡಿ ಉಳಿದ ಸಾಲೆಲ್ಲಾ ಸರಳವಾ, ಪೂರಕವಾಗಿ ಅದಕ್ಕೆ ಲೀಡ್ ಮಾಡುವಂತಿರಲಿ" ಅಂದಿದ್ದರು.

ಅವರು ಗಮನಿಸಿದ್ದು ಅಕ್ಷರಶಃ ನಿಜವಾಗಿತ್ತು. ನನ್ನ ಸ್ಥಿತಿ ಹಾಗೇ ಇತ್ತು. ಪ್ರತಿ ಲೈನಿಗೂ ಸರ್ಕಸ್ ಮಾಡುತ್ತಿದ್ದೆ. ಅವರ ಸಲಹೆ ನಿಜಕ್ಕೂ ನನಗೆ ಉಪಯುಕ್ತವಾಗಿತ್ತು. ಈ ಮಾತಿಂದ ಹಾಡು ಬರೆವ ಬಗ್ಗೆ ನನಗೊಂದು ಕ್ಲಾರಿಟಿ ಸಿಕ್ಕಿ ನನ್ನದೇ ಆದ ಸರಳ ಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯವಾಯಿತು. ನಿನ್ನೆ ವಯೋಸಹಜ ಅನಾರೋಗ್ಯದಿಂದ ನಮ್ಮನ್ನು ಅಗಲಿದ ಈ ಹಿರಿಯ ಚೇತನಕ್ಕೆ ಭಾವಪೂರ್ಣ ನಮನಗಳು' ಎಂದು ಕವಿರಾಜ್ ಸಂತಾಪ ಸೂಚಿಸಿದ್ದಾರೆ.
ನಂಜುಂಡಿ ಕಲ್ಯಾಣ ಚಿತ್ರದ 'ಒಳಗೆ ಸೇರಿದರೆ ಗುಂಡು......', ಗಜಪತಿ ಗರ್ವ ಭಂಗ ಚಿತ್ರದ 'ಜಟಕಾ ಕುದುರೆ ಹತ್ತಿ.....', ಆದಿತ್ಯ ಚಿತ್ರದ 'ರಂಭೆ ನೀ ವಯ್ಯಾರದ ಗೊಂಬೆ....', ಅಪ್ಪು ಚಿತ್ರದ 'ಬಾರೆ ಬಾರೆ ಕಲ್ಯಾಣ ಮಂಟಪಕೆ....', ಅಭಿ ಚಿತ್ರದ 'ಸುಮ್ ಸುಮ್ನೆ ಓಳು ಬಿಡೋ ಸುಂದರಿ....' ಹೀಗೇ ಅನೇಕ ಹಾಡುಗಳಿಗೆ ಶ್ರೀರಂಗ ಸಾಹಿತ್ಯ ರಚಿಸಿದ್ದರು.


Click it and Unblock the Notifications











