ಗಾಯಕಿ ನೊಂದ ರೈತರ ಪರ ಒಂದು ಸಾಲು ಬರೆದ ಕೂಡಲೇ ದೇಶದ ಸಾರ್ವಭೌಮತ್ವ ನೆನಪಾಯಿತಾ? ಕವಿರಾಜ್ ಪ್ರಶ್ನೆ
ಖ್ಯಾತ ಪಾಪ್ ಗಾಯಕಿ ಮತ್ತು ನಟಿ ರಿಹಾನ್ನಾ ಭಾರತದ ರೈತರ ಪರ ಧ್ವನಿ ಎತ್ತುತ್ತಿದ್ದಂತೆ, ಮೌನವಾಗಿದ್ದ ಭಾರತೀಯ ಸೆಲೆಬ್ರಿಟಿಗಳು ರಿಹಾನ್ನಾ ವಿರುದ್ಧ ಮುಗಿಬಿದ್ದಿದ್ದಾರೆ. ರಿಹಾನ್ನಾರ ಒಂದೇ ಒಂದು ವಾಕ್ಯ ರೈತ ಹೋರಾಟದ ದಿಕ್ಕನ್ನೆ ಬದಲಾಯಿಸಿದೆ. ಭಾರತೀಯರು ಸಾರ್ವಭೌಮ, ಸಮಗ್ರತೆಯನ್ನು ಪ್ರಶ್ನೆಸಿಕೊಳ್ಳುವಂತಾಗಿದೆ.
ರೈತ ಹೋರಾಟ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಜಾಗತಿಕ ಗಣ್ಯರು ಭಾರತದ ರೈತರ ಬೆಂಬಲಕ್ಕೆ ನಿಂತಿದ್ದಾರೆ. ರಿಹಾನ್ನಾ, ಮಿಯಾ ಖಲೀಫಾ, ಗ್ರೇಟಾ ಥನ್ ಬರ್ಗ್ ಸೇರಿದಂತೆ ಅನೇಕರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ರೈತ ಪ್ರತಿಭಟನೆ ಬಗ್ಗೆ ಇಷ್ಟು ದಿನ ತುಟಿಬಿಚ್ಚಿದ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಜಾಗತಿಕ ಕಲಾವಿದರು ಮಾತನಾಡುತ್ತಿದ್ದಂತೆ, ಈಗ ನಾವೆಲ್ಲರೂ ಒಂದೇ ಎಂದು ಕಾಪಿ ಪೇಸ್ಟ್ ಟ್ವೀಟ್ ಮಾಡುತ್ತಿದ್ದಾರೆ. 'ಇಂಡಿಯಾ ಟುಗೆದರ್' 'ಇಂಡಿಯಾ ಅಗೆನೆಸ್ಟ್ ಪ್ರೊಪಗಂಡಾ' ಹ್ಯಾಷ್ ಟ್ಯಾಗ್ ಬಳಸಿ 'ನಾವೆಲ್ಲರೂ ಒಂದೇ' ಎಂಬರ್ಥದ ಟ್ವೀಟ್ ಗಳನ್ನು ಮಾಡಿದ್ದಾರೆ. ಬಾಲಿವುಡ್ ಕಲಾವಿದರ ಈ ಟ್ವೀಟ್ ಗಳನ್ನು ನೋಡಿ ನೆಟ್ಟಿಗರು ಕೆಕ್ಕರಿಸಿ ನಗುತ್ತಿದ್ದಾರೆ.

ಬಾಲಿವುಡ್ ಕಲಾವಿದರ ಟ್ವೀಟ್ ಗಳ ಬಗ್ಗೆ ಕನ್ನಡದ ಚಿತ್ರಸಾಹಿತಿ ಮತ್ತು ನಿರ್ದೇಶಕ ಕವಿ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. 'ಇವರದೆಲ್ಲಾ ಒಂದೇ ಸಮಯದಲ್ಲಿ ಸ್ವಯಂ ಸ್ಫೂರ್ತಿಯಿಂದ ದೇಶಪ್ರೇಮ ಉಕ್ಕಿ ಹರಿದು ಮಾಡಿದ ಸಹಜ ಟ್ವೀಟ್ ಗಳಲ್ಲ. ರಿಹಾನ್ನಾ ಟ್ವೀಟ್ ಇಂದ ಆದ ಡ್ಯಾಮೇಜ್ ಕಂಟ್ರೋಲಿಗಾಗಿ ಆಳುವವರ ಆದೇಶದಂತೆ, ಪ್ರಾಯೋಜಕರು ಕಳಿಸಿದ ಒಂದೇ ಬರವಣಿಗೆಯನ್ನು ಹಲವರು ಕಾಪಿ ಪೇಸ್ಟ್ ಮಾಡುವಷ್ಟರ ಮಟ್ಟಿಗೆ ಯೋಜಿತ ಪ್ರಾಯೋಜಿತ ದೇಶಪ್ರೇಮದ ಟ್ವೀಟ್ ಗಳಷ್ಟೇ' ಎಂದಿದ್ದಾರೆ.
'ಆಡಿಸುವಾತನ ಕೈ ಚಳಕದಲೆ ಎಲ್ಲ ಅಡಗಿದೆ. ಪ್ರಾಯೋಜಕರಿಲ್ಲದೇ ಏನೂ ಮಾಡುವವರಲ್ಲ ಈ ಸ್ಟಾರ್ ಗಳು. ಇದೇ ಹೋರಾಟದಲ್ಲಿ ನೂರಕ್ಕೂ ಹೆಚ್ಚು ರೈತರು ಅಸುನೀಗಿದಾಗ ನೀವು ಅವರಿಗಾಗಿ ಮಿಡಿಯಲಿಲ್ಲ. ಅದೇ ದೊಡ್ಡ ದೇಶದ ಅಧ್ಯಕ್ಷ , ಅಧಿಕೃತವಾಗಿ ಆ ದೇಶದ ಇಡೀ ಜನಸಂಖ್ಯೆಯ ಪ್ರತಿನಿಧಿಯಾದ ವ್ಯಕ್ತಿ ನಮ್ಮ ಭಾರತವನ್ನು 'ಕೊಳಕು' ಅಂದಾಗ ನಿಮ್ಮ ದೇಶಪ್ರೇಮ ಜಾಗೃತವಾಗಲಿಲ್ಲ. ಆದರೆ ಅದೇ ದೇಶದ ಒಬ್ಬ ಹೃದಯವಂತ ಗಾಯಕಿ ನಮ್ಮ ದೇಶದ ನೊಂದ ರೈತರ ಪರ ಒಂದೇ ಒಂದು ಸಾಲು ಬರೆದ ಕೂಡಲೇ ನಿಮಗೆ ನಮ್ಮ ದೇಶದ ಸಮಗ್ರತೆ, ಸಾರ್ವಭೌಮತ್ವ ಎಲ್ಲಾ ನೆನಪಾಗಿ ಬಿಟ್ಟಿತ್ತಲ್ಲಾ. ಇಷ್ಟು ಎತ್ತರ ಏರಿದ ಮೇಲು ಯಾರದೋ ಕೈ ಗೊಂಬೆಯಾಗುವ ಇಂತಾ ಚಮಚಾಗಿರಿ ಬೇಕಿತ್ತಾ ಸ್ವಾಮಿ? ಎಂದು ಕವಿರಾಜ್ ಪ್ರಶ್ನಿಸಿದ್ದಾರೆ.


Click it and Unblock the Notifications











