KCC 2023: ಸುದೀಪ್ vs ಶಿವಣ್ಣ ಟೀಮ್ಗಳ ಪಂದ್ಯದಲ್ಲಿ ಗೆದ್ದದ್ದಾರು? ಮೊದಲ ದಿನದ 3 ಪಂದ್ಯಗಳ ಫಲಿತಾಂಶ
ಸದ್ಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಜರುಗುತ್ತಿದ್ದು, ಇದರ ನಡುವೆಯೇ ಕನ್ನಡ ಚಲನಚಿತ್ರ ಕಪ್ ಟೂರ್ನಿ ಸಹ ಆರಂಭಗೊಂಡಿದೆ. ನಿನ್ನೆ ( ಫೆಬ್ರವರಿ 24 ) ಆರಂಭಗೊಂಡ ಈ ಟೂರ್ನಿ ಇಂದು ಮುಕ್ತಾಯಗೊಳ್ಳಲಿದೆ. ಎರಡು ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಮೊದಲ ದಿನ ಒಟ್ಟು ಮೂರು ಪಂದ್ಯಗಳು ಜರುಗಿವೆ.
ಈ ಬಾರಿಯ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಕಣಕ್ಕಿಳಿದಿದ್ದು, ಗಂಗಾ ವಾರಿಯರ್ಸ್ ತಂಡವನ್ನು ಧನಂಜಯ್ ಮುನ್ನಡೆಸುತ್ತಿದ್ದರೆ, ಕದಂಬ ಲಯನ್ಸ್ ತಂಡವನ್ನು ಗಣೇಶ್, ಒಡೆಯರ್ ಚಾರ್ಜರ್ಸ್ ತಂಡವನ್ನು ಶಿವ ರಾಜ್ಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್, ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಉಪೇಂದ್ರ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಧ್ರುವ ಸರ್ಜಾ ಮುನ್ನಡೆಸುತ್ತಿದ್ದಾರೆ.

ಇನ್ನು ಮೊದಲ ದಿನ ನಡೆದ ಮೂರು ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಧನಂಜಯ್ ಅವರ ಗಂಗಾ ವಾರಿಯರ್ಸ್ ಹಾಗೂ ಸುದೀಪ್ ಅವರ ಹೊಯ್ಸಳ ಈಗಲ್ಸ್ ಮುಖಾಮುಖಿಯಾದವು, ಎರಡನೇ ಪಂದ್ಯದಲ್ಲಿ ಸುದೀಪ್ ಅವರ ಹೊಯ್ಸಳ ಈಗಲ್ಸ್ ಹಾಗೂ ಶಿವ ರಾಜ್ಕುಮಾರ್ ಅವರ ಒಡೆಯರ್ ಚಾರ್ಜರ್ಸ್ ಮುಖಾಮುಖಿಯಾದವು ಹಾಗೂ ಮೂರನೇ ಪಂದ್ಯದಲ್ಲಿ ಧ್ರುವ ಸರ್ಜಾ ಅವರ ರಾಷ್ಟ್ರಕೂಟ ಫ್ಯಾಂಥರ್ಸ್ ಹಾಗೂ ಕದಂಬ ಲಯನ್ಸ್ ಮುಖಾಮುಖಿಯಾದವು.
ಬೆಂಗಳೂರಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಹತ್ತು ಓವರ್ಗಳ ಮಾದರಿಯಲ್ಲಿ ಪಂದ್ಯಗಳು ಜರುಗಿದ್ದು, ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಹಾಗೂ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹೊಯ್ಸಳ ಈಗಲ್ಸ್ ಎದುರಾಳಿ ಗಂಗಾ ವಾರಿಯರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಇನ್ನು ಗಂಗಾ ವಾರಿಯರ್ಸ್ ತಂಡದ ಕರಣ್ ಆರ್ಯನ್ 21 ಎಸೆತಗಳಲ್ಲಿ 54 ರನ್ ಬಾರಿಸಿ ಅಬ್ಬರಿಸಿದ ನೆರವಿನಿಂದ ತಂಡ 10 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 114 ರನ್ ಕಲೆಹಾಕಿ ಸುದೀಪ್ ಅವರ ಹೊಯ್ಸಳ ಈಗಲ್ಸ್ ತಂಡಕ್ಕೆ ಗೆಲ್ಲಲು 115 ರನ್ಗಳ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ಸೋಲನ್ನು ಕಂಡಿತು.
ಹೀಗೆ ಮೊದಲ ಪಂದ್ಯದಲ್ಲಿ ಸೋತ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ಎರಡನೇ ಪಂದ್ಯದಲ್ಲಿ ಶಿವ ರಾಜ್ಕುಮಾರ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡದ ವಿರುದ್ಧ ಕಣಕ್ಕಿಳಿಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಒಡೆಯರ್ ಚಾರ್ಜರ್ಸ್ 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 105 ರನ್ ಕಲೆಹಾಕಿ ಹೊಯ್ಸಳ ಈಗಲ್ಸ್ಗೆ 106 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಹೊಯ್ಸಳ ಈಗಲ್ಸ್ ಪರ ಕ್ರಿಸ್ ಗೇಲ್ 23 ಎಸೆತಗಳಲ್ಲಿ 59 ರನ್ ಬಾರಿಸಿ ಅಬ್ಬರಿಸಿದರು. ಪರಿಣಾಮ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ಶಿವಣ್ಣ ನಾಯಕತ್ವದ ಒಡೆಯರ್ ಚಾರ್ಜರ್ಸ್ ವಿರುದ್ಧ ಜಯ ಸಾಧಿಸಿತು.
ಇನ್ನು ಮೊದಲ ದಿನದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಧ್ರುವ ಸರ್ಜಾ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಫೀಲ್ಡಿಂಗ್ ಆಯ್ದುಕೊಂಡು ಗಣೇಶ್ ನಾಯಕತ್ವದ ಕದಂಬ ಲಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಕದಂಬ ಲಯನ್ಸ್ ತಂಡ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 111 ರನ್ ಕಲೆಹಾಕಿ ಎದುರಾಳಿ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಕ್ಕೆ ಗೆಲ್ಲಲು 112 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಧ್ರುವ ಸರ್ಜಾ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿಫಲವಾದ ಕಾರಣ ಗಣೇಶ್ ನಾಯಕತ್ವದ ಕದಂಬ ಲಯನ್ಸ್ ಗೆಲುವನ್ನು ಕಂಡಿತು.


Click it and Unblock the Notifications











