ಕೆಸಿಸಿ ಸೀಸನ್ 3 ಶುರು: ಈ ಸಲ ಮೈಸೂರಿನಲ್ಲಿ ಪಂದ್ಯಾವಳಿ
Recommended Video
ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ಹಿಡಿದು ಮತ್ತೆ ಕ್ರೀಡಾಂಗಣಕ್ಕೆ ಧುಮುಕಲಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್. ಸುದೀಪ್, ಪುನೀತ್, ಶಿವಣ್ಣ, ಉಪೇಂದ್ರ, ಯಶ್, ಗಣೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ನಟ, ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರು ಸೇರಿದಂತೆ ಇಂಡಸ್ಟ್ರಿಯವರು ಈ ಟೂರ್ನಿಯಲ್ಲಿ ಭಾಗಿಯಾಗಿದ್ದರು.
ಈಗಾಗಲೇ ಎರಡು ಆವೃತ್ತಿಯನ್ನ ಯಶಸ್ವಿಯಾಗಿ ಮುಗಿಸಿರುವ ಸ್ಯಾಂಡಲ್ ವುಡ್ ಈಗ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಮೂರನೇ ಆವೃತ್ತಿ ನಡೆಸಲು ತೀರ್ಮಾನಿಸಿದೆ. ಕಳೆದ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೂರ್ನಿ ನಡೆದಿತ್ತು. ಈ ಸಲ ಮೈಸೂರಿನಲ್ಲಿ ಪಂದ್ಯಾವಳಿ ನಡೆಯಲಿದೆ.
ಕಿಚ್ಚ ಸುದೀಪ್, ಜಾಕ್ ಮಂಜು, ಸಿನಿಮಾ ಪತ್ರಕರ್ತ ಸದಾಶಿವ ಶಣೈ, ನಿರ್ದೇಶಕ ಕೃಷ್ಣ, ಕಾರ್ತಿಕ್, ಕೆಪಿ ಶ್ರೀಕಾಂತ್ ಎಲ್ಲರೂ ಒಟ್ಟುಗೂಡಿ ಮೂರನೇ ಆವೃತ್ತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿರುವ ಸುದೀಪ್ ಮತ್ತು ಕೆಸಿಸಿ ಸದಸ್ಯರು ಸೆಪ್ಟೆಂಬರ್ 6, 7, 8 ರಂದು ಟೂರ್ನಿ ನಡೆಯುವುದಾಗಿ ತಿಳಿಸಿದ್ದಾರೆ.

ಕಳೆದ ಬಾರಿ ಒಟ್ಟು ಆರು ತಂಡಗಳು ಭಾಗಿಯಾಗಿದ್ದವು. ಪ್ರತಿಯೊಂದು ತಂಡದಲ್ಲೂ ಒಬ್ಬೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಆಡಿದ್ದರು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಸುದೀಪ್, ಯಶ್ ಮತ್ತು ಗಣೇಶ್ ಅಂತಹ ಸ್ಟಾರ್ ಆಟಗಾರರಿದ್ದರು.
ಮೊದಲ ಆವೃತ್ತಿಯಲ್ಲಿ ಶಿವರಾಜ್ ಕುಮಾರ್ ತಂಡ ಗೆದ್ದಿದ್ದರು. ಎರಡನೇ ಆವೃತ್ತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತಂಡ ವಿನ್ನರ್ ಆಗಿ ಹೊರಹೊಮ್ಮಿತ್ತು. ಈಗ ಮೂರನೇ ಆವೃತ್ತಿಯಲ್ಲಿ ಯಾರೆಲ್ಲ ಆಡಲಿದ್ದಾರೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.
ಈ ಬಾರಿಯೂ ಅಂತಾರಾಷ್ಟ್ರೀಯ ಆಟಗಾರರು ಆಡ್ತಾರಾ? ಕಳೆದ ಬಾರಿ ಆಡದ ಸ್ಯಾಂಡಲ್ ವುಡ್ ಸ್ಟಾರ್ ಗಳು ಈ ಸಲ ಭಾಗಿಯಾಗ್ತಾರಾ? ಈ ಆವೃತ್ತಿಯ ವಿಶೇಷತೆ ಏನು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ.


Click it and Unblock the Notifications











