3 ದಿನಗಳ ಅದ್ಧೂರಿ ಕೆಸಿಸಿ ಟೂರ್ನಿಗೆ ತೆರೆ: ಚಾಂಪಿಯನ್ ಆದ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್, ಶಿವಣ್ಣ ತಂಡ ರನ್ನರ್ಅಪ್
ಮೂರು ದಿನಗಳ ಕಾಲ ರಾಜಧಾನಿ ಬೆಂಗಳೂರಿನಲ್ಲಿ ಸಿನಿಮಾ ಮತ್ತು ಕ್ರಿಕೆಟದ ಜ್ವರ ಹೆಚ್ಚಾಗಿಯೇ ಇತ್ತು. ಅದಕ್ಕೆ ಕಾರಣ ಕೆಸಿಸಿ ಸೀಸನ್ ನಾಲ್ಕು. ಎಸ್...ಮೂರು ದಿನಗಳ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ)ಗೆ ಅದ್ಧೂರಿಯಾಗಿ ತೆರೆ ಎಳೆಯಲಾಗಿದೆ. ಸ್ಯಾಂಡಲ್ವುಡ್ ನಟರು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಸೇರಿ ಸಕತ್ ಮನರಂಜನೆ ನೀಡಿದ್ದ ಟೂರ್ನಿಗೆ ತೆರೆ ಬಿದ್ದಿದೆ.
ಕೆಸಿಸಿ ನಾಲ್ಕರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಸೋಲಿಸಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಗಿದೆ. ಸೋಮವಾರ ರಾತ್ರಿ ನಡೆದ ಕೆಸಿಸಿ ಕಪ್ ಫೈನಲ್ ಪಂದ್ಯಕ್ಕೆ ವಿಶೇಷ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು.

ಚಾಂಪಿಯನ್ ಆದ ಣೇಶ್ ನೇತೃತ್ವದ ಗಂಗಾ ವಾರಿಯರ್ಸ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ನಾಲ್ಕನೇ ಆವೃತ್ತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ 3 ರನ್ಗಳ ಅಂತರದಲ್ಲಿ ಗಂಗಾ ವಾರಿಯರ್ಸ್ ಗೆಲುವು ದಾಖಲಿಸಿತು.
3 ರನ್ಗಳ ಅಂತರದಲ್ಲಿ ಪಂದ್ಯದ ತೀರ್ಪು ಬದಲಾಗಿದ್ದು, ನಟ ಶಿವರಾಜ್ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ನಡುವಿನ ಫೈನಲ್ ಪಂದ್ಯ ಸಕತ್ ರೋಚಕವಾಗಿತ್ತು. ಟಾಸ್ಕ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ರಾಷ್ಟ್ರಕೂಟ ಪ್ಯಾಂಥರ್ಸ್, ಬ್ಯಾಟಿಂಗ್ಗೆ ಗಣೇಶ್ ತಂಡವನ್ನು ಬಿಟ್ಟಿತ್ತು.
ಸಕತ್ ಫೈಟ್ ನೀಡಿದ್ದ ಶಿವಣ್ಣ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್
ಮೊದಲು ಬ್ಯಾಟ್ ಮಾಡಿದ ಗಂಗಾ ವಾರಿಯರ್ಸ್ ತಂಡ ನಿಗದಿತ 10 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 111 ರನ್ ಗಳಿಸಿತು. 32 ರನ್ಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ನಂತರ ಅವಿನಾಶ್ 12 ಎಸೆತಗಳಲ್ಲಿ 40 ರನ್ ದಾಖಲಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದ್ದರು. ಜೊತೆಗೆ ಕರಣ್ ಹಾಗೂ ಪ್ರಿನ್ಸ್ ಕ್ರಮವಾಗಿ 25 ಮತ್ತು 16 ರನ್ ಗಳಿಸಿ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದರು.

ಗಂಗಾ ವಾರಿಯರ್ಸ್ ನೀಡಿದ್ದ ಸವಾಲಿನ ಗುರಿ ಬೆನ್ನಟ್ಟಿದ ಶಿವಣ್ಣ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಮೊದಲಿಗೆ ಉತ್ತಮ ಆರಂಭ ಪಡೆದಿತ್ತು. ಮಾಜಿ ಕ್ರಿಕೆಟರ್ ಸುರೇಶ್ ರೈನಾ ಹಾಗೂ ಪ್ರದೀಪ್ ಜೋಡಿ 85 ರನ್ಗಳನ್ನು ತರುವ ಮೂಲಕ ತಮಡಕ್ಕೆ ಗೆಲುವಿನ ವಿಶ್ವಾಸ ಬರಿಸಿದ್ದರು. ಸುರೇಶ್ ರೈನಾ 51 ರನ್ ನೀಡಿ ಪೆವಿಲಿಯನ್ಗೆ ನಡೆದರು. ಕೊನೆಗೆ ರಾಷ್ಟ್ರಕೂಟ ಪ್ಯಾಂಥರ್ಸ್ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ರೋಚಕ ಮ್ಯಾಚ್ನಲ್ಲಿ ಸೋಲು ಒಪ್ಪಿಕೊಂಡಿತು.
ಕೆಸಿಸಿ ನಾಲ್ಕನೇ ಸೀಸನ್ನಲ್ಲಿ ಶಿವಣ್ಣ, ಕಿಚ್ಚ ಸುದೀಪ್, ಗಣೇಶ್, ಧನಂಜಯ್, ಉಪೇಂದ್ರ ಜೊತೆಗೆ ಈ ಬಾರಿ ದುನಿಯಾ ವಿಜಯ್ ಎಂಟ್ರಿ ನೀಡಿದ್ದರು. ತಮಿಳಿನಿಂದ ವಿಕ್ರಾಂತ್, ತೆಲುಗಿನಿಂದ ಪ್ರಿನ್ಸ್ ಈ ಪಂದ್ಯದಲ್ಲಿ ಸಕತ್ ಮನರಂಜನೆ ನೀಡಿದ್ದರು. ಮೂರು ದಿನಗಳ ಕಾಲ ನಡೆದ ಸ್ಯಾಂಡಲ್ವುಡ್ ತಾರೆಯರ ಕ್ರಿಕೆಟ್ ಹಬ್ಬಕ್ಕೆ ಕ್ರಿಕೆಟ್ ಪ್ರೇಮಿಗಳು, ಸಿನಿಮಾ ಕಲಾವಿದರು, ಕ್ರಿಕೆಟಿಗರು, ಬೆಂಗಳೂರಿಗರು ಸಾಕ್ಷಿಯಾದರು.


Click it and Unblock the Notifications










