'ಕೆಡಿ'- 2 ಸಿನಿಮಾ ತೆರೆಗೆ ಬರೋದು ಯಾವಾಗ? ಧ್ರುವಗೆ ಸವಾಲ್ ಹಾಕುವ ತಮಿಳು ನಟ ಯಾರು?
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಕೆಡಿ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಸಣ್ಣಪುಟ್ಟ ತಪ್ಪುಗಳ ನಡುವೆಯೂ ಮಾಸ್ ಪ್ರೇಕ್ಷಕರನ್ನು ಸಿನಿಮಾ ಸೆಳೆಯುತ್ತಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. 'ಕೆಡಿ' ಪಾರ್ಟ್-2 ಕೂಡ ಘೋಷಣೆ ಆಗಿದೆ. ಧ್ರುವ ಸರ್ಜಾ ಹಾಗೂ ಕಿಚ್ಚ ಸುದೀಪ್ ಜೊತೆಗೆ ತಮಿಳು ನಟ ಕೂಡ ಸೀಕ್ವೆಲ್ನಲ್ಲಿ ಚಮಕ್ ಕೊಡೋಕೆ ಬರ್ತಾರೆ ಎನ್ನಲಾಗ್ತಿದೆ.
4 ವರ್ಷಗಳ ಹಿಂದೆ 'ಕೆಡಿ' ಸಿನಿಮಾ ಶುರುವಾಗಿತ್ತು. ನಾನಾ ಕಾರಣಗಳಿಂದ ಸಿನಿಮಾ ಬಿಡುಗಡೆ ತಡವಾಗುತ್ತಾ ಬಂದಿತ್ತು. ಇನ್ನು ಕಿಚ್ಚ ಸುದೀಪ್ ಎಂಟ್ರಿ ಬಳಿಕ ಕಥೆಗೆ ಬೇರೆಯದ್ದೇ ರೂಪ ಕೊಟ್ಟು ಪ್ರೇಮ್ ಗಮನ ಸೆಳೆದಿದ್ದಾರೆ. ಬಾದ್ಶಾ ಖದರ್ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ. ಬಹುಕೋಟಿ ವೆಚ್ಚದಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿ ಹುಬ್ಬೇರಿಸುತ್ತಿದೆ.

ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಜಮಾನ ನಡೀತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಎರಡು ಭಾಗಗಳಾಗಿ ತೆರೆಗೆ ತರುವ ಲೆಕ್ಕಾಚಾರ ಇದು. ಮೊದಲಿಗೆ 'ಕೆಡಿ' ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳಿ ಮುಗಿಸಲು ಪ್ರೇಮ್ ಮನಸ್ಸು ಮಾಡಿದ್ದರು. ಬಳಿಕ ಅದನ್ನು ಎಳೆದು ಎರಡು ಭಾಗವಾಗಿ ಕತ್ತರಿಸಿದ್ದಾರೆ. ಒಂದು ಚಿತ್ರಕ್ಕೆ 4 ವರ್ಷ ಆಯ್ತು, ಪಾರ್ಟ್-2 ಯಾವಾಗ ಸರ್ ಎನ್ನುವ ಪ್ರಶ್ನೆಗೆ "ಇನ್ನೊಂದು ವರ್ಷದಲ್ಲಿ ಸೀಕ್ವೆಲ್ ಬರುತ್ತೆ ಮಿಸ್ಸೇ ಇಲ್ಲ" ಎಂದು ಪ್ರೇಮ್ ಹೇಳಿದ್ದಾರೆ. ಪ್ರೇಕ್ಷಕರು ಸರಿ ಕಾದು ನೋಡೋಣ ಎಂದು ಸುಮ್ಮನಾಗಿದ್ದಾರೆ.
'ಕೆಡಿ' ಚಿತ್ರದಲ್ಲಿ ಸುದೀಪ್ ಹೀರೊನಾ? ಎನ್ನುವ ಅನುಮಾನ ಮೂಡಿತ್ತು. ಆದರೆ ಸಿನಿಮಾ ನೋಡಿದ್ಮೇಲೆ ಧ್ರುವ ಸರ್ಜಾ ಜೊತೆಗೆ ಸುದೀಪ್ ಇರ್ತಾರೆ ಎನ್ನುವುದು ಗೊತ್ತಾಗಿದೆ. ಇನ್ನು ಸೀಕ್ವೆಲ್ ವಿಲನ್ ಯಾರು ಎನ್ನುವುದು ಕ್ಲೈಮ್ಯಾಕ್ಸ್ ನೋಡಿದ್ರೆ ಅರ್ಥವಾಗುತ್ತದೆ. ಜೊತೆಗೆ ತಮಿಳು ಸ್ಟಾರ್ ನಟನನ್ನು ಪ್ರೇಮ್ ಕರ್ಕೊಂಡ್ ಬರ್ತಾರೆ ಎಂದು ಗುಲ್ಲಾಗಿದೆ.

'ಕೆಡಿ' ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸ್ತಾರೆ ಎನ್ನುವ ಊಹಾಪೋಹ ಬಹಳ ಹಿಂದೆಯೇ ಕೇಳಿಬಂದಿತ್ತು. ಎರಡು ವರ್ಷಗಳ ಹಿಂದೆ ಇಂತಾದೊಂದು ಸುದ್ದಿ ಹರಿದಾಡಿತ್ತು. ಆದರೆ ಅದು ನಿಜವಾಗಲಿಲ್ಲ. ಎರಡನೇ ಭಾಗದಲ್ಲಿ ಖಂಡಿತ ವಿಜಯ್ ಇರ್ತಾರೆ ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಪ್ರೇಮ್ ನಿರ್ದೇಶನ ಅಂದಮೇಲೆ ಇಂತಹ ಪ್ರಯತ್ನಗಳು ನಡೆದರೆ ಅಚ್ಚರಿ ಪಡಬೇಕಿಲ್ಲ.
ಕ್ರೇಜಿ ಐಡಿಯಾಗಳಿಂದ ವಿಭಿನ್ನ ಪ್ರಚಾರದಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದವರು ಪ್ರೇಮ್. ಮಾತಲ್ಲೇ ಎಂತಹವರನ್ನು ಮರಳು ಮಾಡಲು ಪ್ರತಿಭೆ ಅವರಿಗಿದೆ. ಯಾರಿಗೆ ಬೇಕಾದರೂ ಕಥೆ ಹೇಳಿ ಒಪ್ಪಿಸಿಬಿಡುತ್ತಾರೆ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ರೀತಿಯ ಧಾರಾಳ ನಿರ್ಮಾಣ ಸಂಸ್ಥೆ ಇರುವಾಗ ವಿಜಯ್ ಸೇತುಪತಿ ಕನ್ನಡಕ್ಕೆ ಬಂದರೂ ಅಚ್ಚರಿಪಡಬೇಕಿಲ್ಲ. ತಮ್ಮ ಅದ್ಭುತ ನಟನೆಯಿಂದ ಸೇತುಪತಿ ಬಾಲಿವುಡ್ ಅಂಗಳದಲ್ಲಿ ಕೂಡ ಸದ್ದು ಮಾಡ್ತಿದ್ದಾರೆ.
ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ವಿಜಯ್ ಸೇತುಪತಿ ನಟಿಸೋಕೆ ಹಿಂದು ಮುಂದು ನೋಡಲ್ಲ. ಒಳ್ಳೆ ಕಥೆ, ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತಾರೆ. ತಮಿಳು ಚಿತ್ರರಂಗ ಪ್ರವೇಶಿಸುವ ಮುನ್ನ ಕೆಲ ದಿನ ಅವರು ಬೆಂಗಳೂರಿನಲ್ಲಿ ಇದ್ದರು. ಒಂದು ಕನ್ನಡ ಚಿತ್ರದಲ್ಲಿ ಕೂಡ ನಟಿಸಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ನಿಂತುಹೋಗಿತ್ತು. ಅದನ್ನು ಅವರು ಮರೆತ್ತಿಲ್ಲ. ಹಾಗಾಗಿ 'ಕೆಡಿ' ಧ್ರುವ ಎದುರು ಸೇತುಪತಿ ತೊಡೆ ತಟ್ಟಿ ನಿಂತರೆ ಅಚ್ಚರಿ ಪಡಬೇಕಿಲ್ಲ.
ದರ್ಶನ್ ಜೊತೆ ಪ್ರೇಮ್ ಒಂದು ಸಿನಿಮಾ ಮಾಡಬೇಕಿದೆ. ಆ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ಪ್ರಮುಖ ಪಾತ್ರ ಮಾಡ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಪ್ರೇಮ್ ಹೋಗಿ ಚಿರು ಭೇಟಿ ಮಾಡಿ ಬಂದಿದ್ದರು. ಹಾಗಾಗಿ ಪರಭಾಷೆಯ ಸ್ಟಾರ್ ನಟರನ್ನು ಕನ್ನಡಕ್ಕೆ ಕರೆತರಲು ನಿರ್ದೇಶಕರು ಪ್ರಯತ್ನಿಸುತ್ತಲೇ ಇರ್ತಾರೆ. 'ಕೆಡಿ- 2' ಸಿನಿಮಾ ಹೇಗೆ ರೂಪುಗೊಳ್ಳುತ್ತೆ ಕಾದು ನೋಡೊಣ.


Click it and Unblock the Notifications