ಕೆಡಿ to ಸಾಗಾ ಆಫ್ ಅಶ್ವತ್ಥಾಮ: ಶಿವಣ್ಣ ನಟನೆಯ ಮುಂದಿನ 4 ಚಿತ್ರಗಳಿವು; ಅಬ್ಬರಿಸುವುದು ಖಚಿತ!
ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಶಿವಣ್ಣ ಹಲವಾರು ಸಮಯದ ಬಳಿಕ ವೇದ ಚಿತ್ರದ ಮೂಲಕ ಗೆಲುವಿನ ಹಾದಿಗೆ ಮರಳಿದ್ದಾರೆ. 2022ರ ವರ್ಷಾಂತ್ಯದಲ್ಲಿ ಬಿಡುಗಡೆಗೊಂಡ ವೇದ ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದು, ಶಿವಣ್ಣ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ. ಈ ಹಿಂದಿನ ಎ ಹರ್ಷ ಹಾಗೂ ಶಿವ ರಾಜ್ಕುಮಾರ್ ಕಾಂಬಿನೇಶನ್ ಚಿತ್ರಗಳಿಗೂ ಇಬ್ಬರ ಕಾಂಬೊದಲ್ಲಿ ಬಂದಿರುವ ವೇದ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ಶಿವಣ್ಣ ಈ ರೀತಿಯ ಒಳ್ಳೆಯ ಕಥೆಗಳನ್ನು ಆರಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಇನ್ನು ಶಿವ ರಾಜ್ಕುಮಾರ್ ಅವರ ಮುಂದಿನ ಚಿತ್ರಗಳ ಕಡೆ ಗಮನ ಹರಿಸಿದರೆ ಅಭಿಮಾನಿಗಳ ಆಶಯ ನಿಜ ಆಗುವ ಎಲ್ಲಾ ಲಕ್ಷಣಗಳೂ ಸಹ ಕಾಣುತ್ತಿವೆ. ಹೌದು, ಶಿವ ರಾಜ್ಕುಮಾರ್ ಯುಟ್ಯೂಬ್ ಸಂದರ್ಶನಗಳಲ್ಲಿ ತಮ್ಮ ಮುಂದಿನ ನಾಲ್ಕು ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಚಿತ್ರಗಳ ಬಗ್ಗೆ ತಿಳಿದ ಕೂಡಲೇ ಅಭಿಮಾನಿಗಳು ಎಲ್ಲಾ ಚಿತ್ರಗಳು ಅಬ್ಬರಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಅಭಿಮಾನಿಗಳು ಮಾತ್ರವಲ್ಲದೇ ಸಿನಿ ರಸಿಕರೂ ಸಹ ಶಿವ ರಾಜ್ಕುಮಾರ್ ಲೈನ್ ಅಪ್ ಸಿನಿಮಾಗಳ ಕಡೆ ನೋಡಿ ಸಖತ್ ಆಯ್ಕೆ ಎಂದು ಮೆಚ್ಚುಗೆ ವ್ಯಕ್ತಪಸಿ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ವೇದ ಗೆದ್ದ ಬಳಿಕ ಶಿವ ರಾಜ್ಕುಮಾರ್ ಮತ್ತದೇ ರೀತಿಯ ಚಿತ್ರಗಳನ್ನು ಮಾಡ್ತಾರಾ ಅಥವಾ ವೇದ ರೀತಿ ವಿಭಿನ್ನ ಪ್ರಯತ್ನವನ್ನೇನಾದರೂ ಮಾಡ್ತಾರಾ ಎಂಬ ಪ್ರಶ್ನೆ ಏಳುವಾಗಲೇ ಹೊಸವರ್ಷದ ಪ್ರಯುಕ್ತ ಬಿಡುಗಡೆಗೊಂಡ ಘೋಸ್ಟ್ ಚಿತ್ರದ ಮೋಷನ್ ಪೋಸ್ಟರ್ ಶಿವಣ್ಣ ವಿಭಿನ್ನ ಚಿತ್ರಗಳನ್ನೇ ಮಾಡ್ತಾ ಇದ್ದಾರೆ ಎಂಬ ಉತ್ತರ ನೀಡಿತು. ಇದಷ್ಟೇ ಅಲ್ಲದೇ ಶಿವ ರಾಜ್ಕುಮಾರ್ ಅವರ ಇತರೆ ಮುಂದಿನ ಚಿತ್ರಗಳೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಲ್ಲ ಚಿತ್ರಗಳಾಗಿದ್ದು, ಅವುಗಳ ಮಾಹಿತಿ ಈ ಕೆಳಕಂಡಂತಿದೆ..

ಯೋಗರಾಜ್ ಭಟ್ ಕಾಂಬಿನೇಶನ್
ನಿರ್ದೇಶಕ ಸೂರಿ ನಿರ್ದೇಶನದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶಿವ ರಾಜ್ಕುಮಾರ್ ಇಲ್ಲಿಯವರೆಗೂ ಯೋಗರಾಜ್ ಭಟ್ ನಿರ್ದೇಶನದಲ್ಲಿ ಬಣ್ಣ ಹಚ್ಚಿರಲಿಲ್ಲ. ಆದರೆ ಈಗ ಈ ಜೋಡಿ ಮೊದಲ ಬಾರಿಗೆ ಒಂದಾಗಿದ್ದು 'ಕರಟಕ ದಮನಕ' (ಕೆಡಿ) ಎಂಬ ಚಿತ್ರವನ್ನು ಮಾಡ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ವೇದ ಬಳಿಕ ತೆರೆಗೆ ಬರುವ ಶಿವ ರಾಜ್ಕುಮಾರ್ ಅವರ ಮೊದಲ ಚಿತ್ರ ಇದಾಗಿರಲಿದೆ. ಇನ್ನು ಶಿವ ರಾಜ್ಕುಮಾರ್ ತಿಳಿಸಿರುವ ಹಾಗೆ ಇದೊಂದು ಫನ್ ಕಂಟೆಂಟ್ ಇರುವ ಚಿತ್ರವಾಗಿರಲಿದೆ.

ಘೋಸ್ಟ್
ಕರಟಕ ದಮನಕ ಬಿಡುಗಡೆಯಾದ ಬಳಿಕ ಬಿಡುಗಡೆಯಾಗಲಿರುವ ಶಿವ ರಾಜ್ಕುಮಾರ್ ನಟನೆಯ ಚಿತ್ರ ಘೋಸ್ಟ್. ಶೀರ್ಷಿಕೆ ಮೂಲಕವೇ ಎಲ್ಲರ ಗಮನ ಸೆಳೆದಿರುವ ಈ ಚಿತ್ರಕ್ಕೆ ಬೀರ್ಬಲ್ ಹಾಗೂ ಓಲ್ಡ್ ಮಾಂಕ್ ಖ್ಯಾತಿಯ ಯುವ ನಿರ್ದೇಶಕ ಶ್ರೀನಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಲುಕ್, ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ನೋಡಿರುವ ಸಿನಿ ರಸಿಕರು ಈ ಚಿತ್ರ ನಿರೀಕ್ಷೆಗೂ ಮೀರು ಸದ್ದು ಮಾಡುವ ಲಕ್ಷಣ ಕಾಣಿಸುತ್ತಿದೆ ಎಂದಿದ್ದಾರೆ. ಇನ್ನು ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರಲಿದೆ ಎಂದು ಶಿವಣ್ಣ ತಿಳಿಸಿದ್ದಾರೆ.

45
ಘೋಸ್ಟ್ ಬಳಿಕ ಶಿವ ರಾಜ್ಕುಮಾರ್ ನಟನೆಯ ಮುಂದಿನ ಚಿತ್ರ 45ನ ಚಿತ್ರೀಕರಣ ಆರಂಭಗೊಳ್ಳಲಿದೆ. ಈ 45 ಚಿತ್ರ ಹಲವಾರು ಕಾರಣಗಳಿಗೆ ವಿಶೇಷವೆನಿಸಲಿದ್ದು, ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡಲಿದ್ದಾರೆ, ಚಿತ್ರದಲ್ಲಿ ಶಿವ ರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಲಿದ್ದಾರೆ. ಹೀಗೆ ಕುತೂಹಲ ಕೆರಳಿಸುವ ತಾರಗಣ ಇರುವ ಈ ಚಿತ್ರ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸುವುದು ಖಚಿತ.

ಸಾಗಾ ಆಫ್ ಅಶ್ವತ್ಥಾಮ
ಈ ಮೂರು ಚಿತ್ರಗಳ ಬಳಿಕ ಶಿವಣ್ಣನಿಗೆ ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ 'ಸಾಗಾ ಆಫ್ ಅಶ್ವತ್ಥಾಮ' ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಮಾಹಿತಿಯನ್ನು ಶಿವಣ್ಣ ಹಂಚಿಕೊಂಡಿದ್ದು, ಇದು ಅಡ್ವೆಂಚರಸ್ ಚಿತ್ರವಾಗಿರಲಿದೆಯಾ ಅಥವಾ ಪೌರಾಣಿಕ ಚಿತ್ರವಾಗಿರಲಿದೆಯಾ ಎಂಬ ಕುತೂಹಲವನ್ನು ಕೆರಳಿಸಿದೆ. ಒಟ್ಟಿನಲ್ಲಿ ಶಿವ ರಾಜ್ಕುಮಾರ್ ಅವರ ಮುಂದಿನ ಈ ನಾಲ್ಕು ಚಿತ್ರಗಳು ಬಿಡುಗಡೆಯ ಸನಿಹಕ್ಕೆ ತೀವ್ರ ನಿರೀಕ್ಷೆ ಹುಟ್ಟಿಸಿ ಅಬ್ಬರಿಸುವುದಂತೂ ಖಚಿತ ಎನ್ನಬಹುದು.


Click it and Unblock the Notifications











