5 ವರ್ಷಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್!
ಅದ್ಯಾಕೋ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರ ನಿರ್ಮಾಣ ಸಂಸ್ಥೆಯ ಟೈಮೇ ಸರಿಯಿಲ್ಲ ಕಣ್ರೀ.. 2021ರಲ್ಲಿ 'ಸಖತ್' ಎಂಬ ಸಿನಿಮಾ ಮೂಲಕ ಸಂಸ್ಥೆ ಚಿತ್ರರಂಗ ಪ್ರವೇಶಿಸಿತ್ತು. ಗಣೇಶ್ ನಟನೆಯ ಆ ಸಿನಿಮಾ ಓಕೆ ಓಕೆ ಎನಿಸಿಕೊಂಡಿತ್ತು. ಬಳಿಕ ಬಂದಿದ್ದ 'ಬೈಟು ಲವ್' ಸೋತಿತ್ತು. ಅಲ್ಲಿಂದ ಮುಂದೆ ಸಂಸ್ಥೆ ದೊಡ್ಡ ದೊಡ್ಡ ಸಾಹಸಕ್ಕೆ ಕೈಹಾಕಿತ್ತು.
ಹಣವನ್ನು ನೀರಿನಂತೆ ಚೆಲ್ಲಿ ಸ್ಟಾರ್ ನಟರ ಜೊತೆ ಸಿನಿಮಾಗಳನ್ನು ಆರಂಭಿಸಿತು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಅಷ್ಟೇ ಅಲ್ಲ ಈಗ ಬಾಲಿವುಡ್ನಲ್ಲಿ ಕೂಡ ಕೆವಿಎನ್ ಸಂಸ್ಥೆ ಚಿತ್ರ ನಿರ್ಮಾಣ ಆರಂಭಿಸಿದೆ. ಕನ್ನಡದಲ್ಲಿ ದರ್ಶನ್ ಹಾಗೂ ಪ್ರೇಮ್ ಕಾಂಬಿನೇಷನ್ ಸಿನಿಮಾ ಘೋಷಣೆ ಆಗಿದೆ. ಟಾಕ್ಸಿಕ್, ಜನನಾಯಗನ್ ಹೀಗೆ ಸಂಸ್ಥೆ ನಿರ್ಮಾಣದ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ರಾಮ್ಚರಣ್ ಜೊತೆ ಒಂದು ಸಿನಿಮಾ ಮಾತುಕತೆ ನಡೀತಿದೆ.

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ಕೊನಂಕಿ ಬಹಳ ಗಟ್ಟಿಗ. ನೂರಾರು ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಸ್ಟಾರ್ ನಟರು, ತಂತ್ರಜ್ಞರು ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ತಯಾರಿಸುತ್ತಿದ್ದಾರೆ. ಸದ್ಯ ವಿವಿಧ ಸಿನಿಮಾಗಳ ಮೇಲೆ ಸಂಸ್ಥೆ ಹೆಚ್ಚು ಕಮ್ಮಿ 1000 ಕೋಟಿ ರೂ. ಬಂಡವಾಳ ಹೂಡಿದೆ. 'ಬೈಟು ಲವ್' ಬಳಿಕ ಕೆವಿಎನ್ ಸಂಸ್ಥೆಯ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಸಾಕಷ್ಟು ಅಡೆತಡೆಗಳ ಬಳಿಕ 'ಕೆಡಿ' ಸಿನಿಮಾ ತೆರೆಗಪ್ಪಳಿಸಿದೆ. ಈ ನಡುವೆ ಒಂದಷ್ಟು ಸಿನಿಮಾಗಳನ್ನು ಸಂಸ್ಥೆ ವಿತರಣೆ ಮಾಡಿತ್ತು. ಆದರೆ ದೊಡ್ಡದಾಗಿ ಲಾಭ ನೋಡಲಿಲ್ಲ.
'ಜನ ನಾಯಗನ್' ಬಿಡುಗಡೆಗೆ ಸಮಸ್ಯೆ, 'ಟಾಕ್ಸಿಕ್' ರಿಲೀಸ್ ಡೇಟ್ ಮತ್ತೆ ಮತ್ತೆ ಮುಂದಕ್ಕೆ ಹೋಗ್ತಿದೆ. ಇದೆಲ್ಲದರ ನಡುವೆ 'ಕೆಡಿ' ಸಿನಿಮಾ ಚೆನ್ನಾಗಿದೆ ಎನ್ನುವ ಗುಡ್ ನ್ಯೂಸ್ ಕೆವಿಎನ್ ಸಂಸ್ಥೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಸಿನಿಮಾ ಮುಂದೆ ಬಾಕ್ಸಾಫೀಸ್ನಲ್ಲಿ ಎಷ್ಟು ಗಳಿಕೆ ಮಾಡುತ್ತದೆ? ಲಾಭವಾಗುತ್ತೋ, ನಷ್ಟವಾಗುತ್ತೋ? ಎನ್ನುವುದನ್ನೆಲ್ಲಾ ಪಕ್ಕಕ್ಕಿಟ್ಟರೆ ಸಿನಿಮಾ ಚೆನ್ನಾಗಿಗೆ ಎನ್ನುವ ಪಾಸಿಟಿವ್ ಟಾಕ್ ಬಂದಿರುವುದು ಸಮಾಧಾನ ತಂದಿದೆ.
ಮೊದಲ ಶೋ ಮುಗಿಯುತ್ತಿದ್ದಂತೆ ಒಂದು ಸಿನಿಮಾ ಭವಿಷ್ಯ ಹೇಳಿಬಿಡುವ ಜಮಾನ ಇದು. ಸಿನಿಮಾ ನೋಡುವ ಪ್ರತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂ ಹಾಕುತ್ತಾರೆ. ಕೆಲವೊಮ್ಮೆ ಟಾರ್ಗೆಟ್ ಮಾಡಿ ನೆಗೆಟಿವ್ ಪ್ರಚಾರ ಮಾಡಿಬಿಡುತ್ತಾರೆ. ಅದನ್ನೆಲ್ಲಾ ಮೀರಿ 'ಕೆಡಿ' ಸಿನಿಮಾ ಚೆನ್ನಾಗಿದೆ, ಧ್ರುವ ಹಾಗೂ ಪ್ರೇಮ್ ಕಂಬ್ಯಾಕ್ ಮಾಡಿದ್ದಾರೆ ಎನ್ನುವ ಒಂದೇ ಒಂದು ಸುದ್ದಿ ಕೆವಿಎನ್ ಸಂಸ್ಥೆಗೆ ಖುಷಿ ತಂದಿದೆ.
ಕೆವಿಎನ್ ಸಂಸ್ಥೆಗೆ ಹೆಜ್ಜೆ ಹೆಜ್ಜೆಗೂ ವಿಘ್ನಗಳು ಎದುರಾಗುತ್ತಲೇ ಇದೆ. 4 ವರ್ಷಗಳ ಹಿಂದೆ ಶುರುವಾಗಿದ್ದ 'ಕೆಡಿ' ಸಿನಿಮಾ ಇವತ್ತು ತೆರೆಗಪ್ಪಳಿಸಿದೆ. ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಇನ್ನು ಬೆಳಗ್ಗೆ 6 ಗಂಟೆಗೆ ಕೆಲವು ಕಡೆಗಳಲ್ಲಿ ಶೋ ರದ್ದಾಗಿತ್ತು. ಅಷ್ಟರಮಟ್ಟಿಗೆ ಚಿತ್ರಕ್ಕೆ ಹಿನ್ನಡೆ ಆಗುತ್ತಲೇ ಇತ್ತು. ಅದನ್ನೆಲ್ಲಾ ಮೀರಿ ಸಿನಿಮಾ ಗೆದ್ದಿದೆ. ಪ್ಯಾನ್ ಇಂಡಿಯಾ ಟೂರ್ ಮಾಡಿ ಬಿಡುಗಡೆ ಮಾಡಿದ್ದ ಟೀಸರ್ ಹಿಟ್ ಆಗಲಿಲ್ಲ. ಆಲ್ಬಮ್ ಹಿಟ್ ಆದ್ರು 'ಸರ್ಸೆ ಸರ್ಸೆ' ಸ್ಪೆಷಲ್ ಸಾಂಗ್ ವಿವಾದ ಹುಟ್ಟು ಹಾಕಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ ಹೆಜ್ಜೆ ಹಾಕಿದ ತಪ್ಪಿಗೆ ನಟ ಸಂಜಯ್ ದತ್ ಮಹಿಳಾ ಆಯೋಗದ ಮುಂದೆ ಕ್ಷಮೆ ಕೇಳುವ ಮಟ್ಟಕ್ಕೆ ಸಮಸ್ಯೆ ಆಗಿತ್ತು. ಪ್ರೇಮ್ ಕೂಡ ಕ್ಷಮೆ ಕೇಳಿ ಹೊಸ ಸಾಹಿತ್ಯ ಬರೆದು ಸಾಂಗ್ ರಿಲೀಸ್ ಮಾಡ್ತೀನಿ ಅಂದಿದ್ರು. ಆದರೆ ಕೊನೆಗೆ ಸಿನಿಮಾದಿಂದ ಆ ಸ್ಪೆಷಲ್ ಸಾಂಗ್ ಕೈಬಿಟ್ಟಿದ್ದಾರೆ.
ಸಂಕ್ರಾಂತಿಗೆ ಬರಬೇಕಿದ್ದ 'ಜನನಾಯಗನ್' ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಸೆನ್ಸಾರ್ ಸಮಸ್ಯೆ ಇನ್ನು ಬಗೆಹರಿದಿಲ್ಲ. ಈ ಚಿತ್ರಕ್ಕೆ 300 ಕೋಟಿ ರೂ.ಗೂ ಅಧಿಕ ಹಣ ಸುರಿಯಲಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಲೀಕ್ ಆಗಿ ಎಡವಟ್ಟಾಗಿದ್ದು ಗೊತ್ತೇಯಿದೆ. ಜೂನ್ 4ಕ್ಕೆ ಬರಬೇಕಿದ್ದ 'ಟಾಕ್ಸಿಕ್' ಸಿನಿಮಾ ಮತ್ತೆ ಮುಂದಕ್ಕೆ ಹೋಗಿದೆ. ಒಳ್ಳೆ ಕಾರಣಕ್ಕೆ ಪೋಸ್ಟ್ಪೋನ್ ಮಾಡಿದ್ದಾರೆ ಎನ್ನಲಾಗ್ತಿದೆ.
ಇನ್ನುಳಿದಂತೆ ಬಾಲಿವುಡ್ನಲ್ಲಿ ಪ್ರಿಯದರ್ಶನ್ ಹಾಗೂ ಅಕ್ಷಯ್ಕುಮಾರ್ ನಟನೆಯ 'ಹೈವಾನ್' ಎಂಬ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ. ತೆಲುಗಿನಲ್ಲಿ ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್ ಸಿನಿಮಾ ಶುರುವಾಗಿದೆ. ಮಲಯಾಳಂನಲ್ಲಿ 'ಬಾಲನ್: ಎ ಬಾಯ್' ಎಂಬ ಚಿತ್ರವನ್ನು ವೆಂಕಟ್ ಕೊನಂಕಿ ನಿರ್ಮಾಣ ಮಾಡುತ್ತಿದ್ದಾರೆ. ಸಮಸ್ಯೆಗಳು ಬಗೆಹರಿದು ಈ ಎಲ್ಲಾ ಸಿನಿಮಾಗಳು ಗೆದ್ದು ಸಂಸ್ಥೆ ಮತ್ತಷ್ಟು ಸಿನಿಮಾ ಮಾಡುವಂತಾಗಲಿ ಎಂದು ಹಾರೈಸೋಣ.


Click it and Unblock the Notifications