"ಕೆಲವು ವರ್ಷ ಸಿನಿಮಾ ನಿರ್ಮಾಣ ಮಾಡಲ್ಲ"; 'ಕೆರೆಬೇಟೆ' ನಟ-ನಿರ್ಮಾಪಕನ ಗಟ್ಟಿ ನಿರ್ಧಾರ!
ಗೌರಿಶಂಕರ್ ನಟಿಸಿ, ರಾಜ್ ಗುರು ನಿರ್ದೇಶಿಸಿದ 'ಕೆರೆಬೇಟೆ' ಸಿನಿಮಾ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಪ್ಪಟ ಮಲೆನಾಡಿನ ಕತೆಯನ್ನು ತೆರೆಮೇಲೆ ತರಲಾಗಿತ್ತು. ಸಿನಿಮಾ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದರೂ, ಸಿನಿಮಾ ಕಮರ್ಷಿಯಲ್ ಆಗಿ ಹಿಟ್ ಆಗಲಿಲ್ಲ. ಇದೇ ಬೇಸರದಲ್ಲಿ ಸಿನಿಮಾದ ನಿರ್ಮಾಪಕ ಹಾಗೂ ನಟ ಗೌರಿ ಶಂಕರ್ ಇದ್ದಾರೆ.
'ಕೆರೆಬೇಟೆ' ಸಿನಿಮಾವನ್ನು ರಾಜಗುರು ನಿರ್ದೇಶನ ಮಾಡಿದ್ದರು. ಬಹಳ ಕಷ್ಟಪಟ್ಟು ಇಷ್ಟಪಟ್ಟು ಈ ಸಿನಿಮಾ ನಿರ್ಮಾಣ ಮಾಡಿದ್ದರು. ಸಿನಿಮಾ ಕುತೂಹಲಕ್ಕೆ ತಕ್ಕಂತೆ ಅದ್ಭುತವಾಗಿ ಮೂಡಿ ಬಂದಿತ್ತು. ಸಿನಿಮಾ ನೋಡಿವರಿಗೂ ವಿಶೇಷ ಅನುಭವ ಕೊಟ್ಟಿತ್ತು. ಆದರೆ, ಬಾಕ್ಸಾಫೀಸ್ನಲ್ಲಿ ಸಕ್ಸಸ್ ಕಾಣಲು ಸಾಧ್ಯವಾಗಲಿಲ್ಲ.

ಕಮರ್ಷಿಯಲ್ ಆಗಿ ಸಿನಿಮಾ ಯಶಸ್ಸು ಕಾಣದೇ ಹೋದರೂ, ಜನರ ಮನಸ್ಸು ಗೆಲ್ಲುವಲ್ಲಿ ಸಕ್ಸಸ್ ಕಂಡಿದೆ. ಸಿನಿಮಾ ನೋಡಿದವರು ಒಳ್ಳೆಯ ಸಿನಿಮಾ ಅಂತ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಸಿನಿಮಾದ ನಟ ಕಮ್ ನಿರ್ಮಾಪಕ ಗೌರಿ ಶಂಕರ್ ಸಿನಿಮಾಗಾಗಿ ಶ್ರಮಿಸಿದವರಿಗೆ ನೆನಪಿನ ಕಾಣಿಕೆಗಳನ್ನು ಕೊಟ್ಟಿದ್ದಾರೆ.
ಇದೇ ವೇಳೆ ಕೆರೆಬೇಟೆ ನಟ ಗೌರಿ ಶಂಕರ್ ಸದ್ಯಕ್ಕೆ ಸಿನಿಮಾ ನಿರ್ಮಾಣ ಮಾಡದೇ ಇರಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. "ಸದ್ಯಕ್ಕೆ ಕೆಲವು ವರ್ಷಗಳ ಕಾಲ ಪ್ರೊಡಕ್ಷನ್ ಅನ್ನು ಮಾಡುವುದಿಲ್ಲ. ಕೇವಲ ನಟನೆಯ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಒಳ್ಳೆಯ ನಿರ್ದೇಶಕರಿಂದ, ಒಳ್ಳೆಯ ನಿರ್ಮಾಪಕರಿಂದ ಅವಕಾಶಗಳು ಬಂದರೆ ಅವರಿಗೆ ಬೆನ್ನೆಲುಬಾಗಿರುತ್ತೇನೆ." ಎಂದು ಕೆರೆಬೇಟೆ ಸಿನಿಮಾದ ಹೀರೊ ಗೌರಿಶಂಕರ್ ಹೇಳಿದ್ದಾರೆ.
ಹಾಗೇ, "ಸಿನಿಮಾ ಕಮರ್ಷಿಯಲಿ ದೊಡ್ಡ ಮಟ್ಟಕ್ಕೆ ಹಿಟ್ಟಾಗಿಲ್ಲ, ಆದರೆ ಜನ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ. ಎಲ್ಲೇ ಹೋದರೂ ಕೆರೆಬೇಟೆ ಹೀರೋ ಅಂತ ಗುರುತಿಸುತ್ತಾರೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ 50 ದಿನಗಳು ಓಡಿದೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಇದೆ." ಎಂದು ಹೇಳಿದ್ದಾರೆ.
'ಕೆರೆಬೇಟೆ' ಸಿನಿಮಾ ಅಪ್ಪಟ ಮಲೆನಾಡಿನ ಹಳ್ಳಿ ಸೊಗಡಿನ ಚಿತ್ರ. ಮಾರ್ಚ್ 15ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ನಾಯಕ ನಟ ಗೌರಿ ಶಂಕರ್ ಅವರ ಜನಮನ ಸಿನಿಮಾ ಸಂಸ್ಥೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಮಲೆನಾಡಿನ ಮೀನು ಬೇಟೆಯಾಡುವ ಸಂಸ್ಕೃತಿಯನ್ನು ಈ ಸಿನಿಮಾ ಪರಿಚಯಿಸಿತ್ತು.
'ಕೆರೆಬೇಟೆ' ಸಿನಿಮಾದಲ್ಲಿ ನಾಯಕ ಗೌರಿಶಂಕರ್ ನಟಿಸಿದ್ದರೆ, ನಾಯಕಿ ಬಿಂದು ಗೌಡ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಇವರ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











