ಡಾ.ಬರಗೂರು ರಾಮಚಂದ್ರಪ್ಪನವರಿಗೆ ವಾಣಿಜ್ಯ ಮಂಡಳಿಯಿಂದ ಅಭಿನಂದನೆ
82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಕನ್ನಡ ಸಾಹಿತಿ, ಕನ್ನಡ ಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ರವರಿಗೆ ಅಭಿನಂದನೆ ಸಲ್ಲಿಸಲು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯ ಪದಾಧಿಕಾರಿಗಳ ಸಮ್ಮುಖದಲ್ಲಿ, ಡಾ.ಬರಗೂರು ರಾಮಚಂದ್ರಪ್ಪ ರವರಿಗೆ ಬೆಳ್ಳಿತಟ್ಟೆ ಹಾಗೂ ಹೂಗುಚ್ಛ ನೀಡಿ ಅಧ್ಯಕ್ಷ ಸಾ.ರಾ.ಗೋವಿಂದು ಅಭಿನಂದನೆ ಸಲ್ಲಿಸಿದರು.

ಬರಗೂರು ರಾಮಚಂದ್ರಪ್ಪ ಬಗ್ಗೆ ಸಾ.ರಾ.ಗೋವಿಂದು ಹೆಮ್ಮೆಯ ಮಾತು
''ಬರಗೂರು ರಾಮಚಂದ್ರಪ್ಪ ರವರ ಸಾಹಿತ್ಯ ಹಾಗೂ ಬರವಣಿಗೆ ಬಗ್ಗೆ ಅಪಾರ ಹೆಮ್ಮೆ ಇದೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಎಷ್ಟು ಸೇವೆಯನ್ನು ಸಲ್ಲಿಸಿದ್ದಾರೋ, ಅಷ್ಟೇ ಸೇವೆಯನ್ನ ಸಿನಿಮಾ ರಂಗದಲ್ಲೂ ಸಲ್ಲಿಸಿದ್ದಾರೆ. ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವಾಗ, ಅಲ್ಲಿ ಒಳ್ಳೆಯ ನಿರ್ಣಯಗಳನ್ನ ಬಲವಾಗಿ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ'' ಎಂದರು ಕೆ.ಎಫ್.ಸಿ.ಸಿ ಅಧ್ಯಕ್ಷ ಸಾ.ರಾ.ಗೋವಿಂದು.

ಬರಗೂರು ರಾಮಚಂದ್ರಪ್ಪ ಏನಂದ್ರು?
''ಗಾಂಧಿನಗರ ನನ್ನನ್ನ ಬಹಳ ಗೌರವದಿಂದ ನೋಡಿಕೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಸಾಮಾನ್ಯ ಕಲಾತ್ಮಕ ಚಿತ್ರದ ನಿರ್ದೇಶಕ/ನಿರ್ಮಾಪಕರು ಇಟ್ಟುಕೊಂಡಿರುವ ಒಡನಾಟಕ್ಕೆ ನನಗೆ ಮೊದಲ rank ಸಿಗಬೇಕು. ಯಾವ ಮಡಿವಂತಿಕೆ ಇಲ್ಲದೇ, ಇಲ್ಲಿರುವವರೆಲ್ಲರ ಜೊತೆ ಹೊಂದುಕೊಂಡಿದ್ದೇನೆ. ಬಹುಶಃ ವಾಣಿಜ್ಯ ಮಂಡಳಿಗೆ ಹೆಚ್ಚು ಪ್ರವೇಶ ಮಾಡಿರುವವರ ಪೈಕಿ ಆ ವಲಯದಿಂದ ನಾನೇ ಇರಬೇಕು. ಅದು ನನಗೆ ಹೆಮ್ಮೆ. ಈ ಸನ್ಮಾನವನ್ನ ಬಹಳ ಸಂತೋಷದಿಂದ ಸ್ವೀಕರಿಸಿದ್ದೇವೆ. ಕನ್ನಡ ಚಿತ್ರರಂಗಕ್ಕೆ ಹಾಗೂ ವಾಣಿಜ್ಯ ಮಂಡಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ'' - ಡಾ.ಬರಗೂರು ರಾಮಚಂದ್ರಪ್ಪ

ಕನ್ನಡ ಚಿತ್ರರಂಗಕ್ಕೆ ಬರಗೂರು ರಾಮಚಂದ್ರಪ್ಪ ಕೊಡುಗೆ...
'ಹಗಲು ವೇಷ', 'ಶಾಂತಿ', 'ತಾಯಿ', 'ಏಕಲವ್ಯ', 'ಉಗ್ರಗಾಮಿ' ಸೇರಿದಂತೆ ಅನೇಕ ಸಮಾಜಿಕ ಕಳಕಳಿಯ ಚಿತ್ರಗಳನ್ನ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ಆಗಿ ನೀಡಿದವರು ಡಾ.ಬರಗೂರು ರಾಮಚಂದ್ರಪ್ಪ.

ಬರಗೂರು ರಾಮಚಂದ್ರಪ್ಪ ಕುರಿತು...
ಮೂಲತಃ ತುಮಕೂರು ಜಿಲ್ಲೆಯ ಬರಗೂರಿನವರಾದ ರಾಮಚಂದ್ರಪ್ಪ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಚೇರ್ ಮ್ಯಾನ್ ಆಗಿದ್ದ ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಅಕಾಡೆಮಿಯಲ್ಲಿ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.


Click it and Unblock the Notifications











