Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಲಂ ಚೇಂಬರ್ ನಲ್ಲಿ ನೂಕಾಟ, ತಳ್ಳಾಟ, ರಂಪಾಟ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಿಂದೆಂದೂ ಕಂಡರಿಯದ ನೂಕಾಟ, ತಳ್ಳಾಟ, ರಂಪಾಟಕ್ಕೆ ಸೋಮವಾರ (ಮಾ.17) ಸಾಕ್ಷಿಯಾಯಿತು. ಪರ್ಯಾಯ ಚಲನಚಿತ್ರ ಕಾರ್ಮಿಕ ಒಕ್ಕೂಟಕ್ಕೆ ಮಾನ್ಯತೆ ಕೊಡುವ ವಿಚಾರವಾಗಿ ನಿರ್ಮಾಪಕರೊಂದಿಗೆ ನಡೆದ ಸಭೆ ಸಾಕ್ಷಾತ್ ರಣರಂಗವಾಗಿ ಮಾರ್ಪಟ್ಟಿತು.
ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಅವರ ನೇತೃತ್ವದ ಕಾರ್ಮಿಕರ ಒಕ್ಕೂಟಕ್ಕೆ ಮಾನ್ಯತೆ ಕೊಡಬೇಕೆ ಬೇಡವೆ ಎಂಬ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್ ಹಾಗೂ ಇತರೆ ಪದಾಧಿಕಾರಿಗಳು ಮನವಿ ಸಲ್ಲಿಸಲು ಕಚೇರಿಗೆ ಬಂದಾಗ ವಾಗ್ವಾದ, ರಂಪಾಟ, ಬೈದಾಟ, ನೂಕಾಟ ನಡೆಯಿತು. [ಒಕ್ಕೂಟ ಒಡೆದರೆ ಸುಮ್ಮನಿರಲ್ಲ]
ಒಂದು ಹಂತದರಲ್ಲಿ ನಿರ್ಮಾಪಕರು ಹಾಗೂ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಪರಸ್ಪರ ಆರೋಪ, ಪ್ರತ್ಯಾರೋಪ ಏಕವಚನ ಬೈಗುಳಗಳ ರವಾನೆಯಾಯಿತು.
ಇನ್ನೇನು ನಿರ್ಮಾಪಕರು ಹಾಗೂ ಕಾರ್ಮಿಕರು ಮಲ್ಲಯುದ್ಧಕ್ಕೆ ಇಳಿಯಬೇಕು ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು.
ಕಾರ್ಮಿಕ ಒಕ್ಕೂಟದ ಗಲಾಟೆಯಲ್ಲಿ ಸುಮಾರು 40 ಚಿತ್ರಗಳ ಚಿತ್ರೀಕರಣ ನಿಂತುಹೋಗಿದೆ. ಕಾರ್ಮಿಕರ ಒಕ್ಕೂಟದ ಮುಷ್ಕರದಿಂದಾಗಿ ದರ್ಶನ್ ಅವರ ಅಂಬರೀಶ, ದುನಿಯಾ ವಿಜಯ್ ಅವರ ಸಿಂಹಾದ್ರಿ, ಶರಣ್ ಅವರ ಅಧ್ಯಕ್ಷ ಹೀಗೆ ಸುಮಾರು 40 ಚಿತ್ರಗಳ ಚಿತ್ರೀಕರಣ ನಡೆಯುತ್ತಿಲ್ಲ.
ಅಶೋಕ್ ಅವರ ನೇತೃತ್ವದ ಚಲನಚಿತ್ರ ಕಾರ್ಮಿಕ ಒಕ್ಕೂಟ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕಾರ್ಮಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವುದೇ ಇದಕ್ಕೆ ಕಾರಣ. ಇದರಿಂದ ನಮಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ಬ್ರಹ್ಮಾವರ್ ಅವರ ಪರ್ಯಾಯ ಒಕ್ಕೂಟಕ್ಕೆ ಮಾನ್ಯತೆ ಕೊಡಿ ಎಂದು ನಿರ್ಮಾಪಕರು ಫಿಲಂ ಚೇಂಬರ್ ನಲ್ಲಿ ಮನವಿ ಮಾಡಿದರು.
ಇನ್ನೊಂದು ಕಡೆ ಪುನೀತ್ ರಾಜ್ ಕುಮಾರ್ ಅವರ 'ಧೀರ ರಣ ವಿಕ್ರಮ' ಚಿತ್ರ ಇಂದು ಸೆಟ್ಟೇರಿದ್ದು, ಆ ಚಿತ್ರಕ್ಕೆ ಬೇಕಾದ ಕಾರ್ಮಿಕರನ್ನು ಮಾತ್ರ ಅಶೋಕ್ ಬಣ ಕಳುಹಿಸಿದೆ. ಇದರಿಂದ ಕೆಲ ನಿರ್ಮಾಪಕರು ಬೇಸರಗೊಂಡಿದ್ದು ಪರ್ಯಾಯ ಒಕ್ಕೂಟಕ್ಕೆ ಅವಕಾಶ ಮಾಡಿಕೊಡುವಂತೆ ವಿನಂತಿಸಿಕೊಂಡರು.
ಅಶೋಕ್ ಅವರು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ನಿರ್ಮಾಪಕರು ನೇರವಾಗಿ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ರಾಜೇಶ್ ಬ್ರಹ್ಮಾವರ್ ಅವರ ನೇತೃತ್ವದ ಪರ್ಯಾಯ ಕಾರ್ಮಿಕರ ಒಕ್ಕೂಟಕ್ಕೆ ಮಾನ್ಯತೆ ಕೊಡಬೇಕೆ ಅಥವಾ ಅಶೋಕ್ ಬಣಕ್ಕೆ ಇರುವ ಮಾನ್ಯತೆಯನ್ನು ಮುಂದುವರಿಸಿಕೊಂಡು ಹೋಗಬೇಕೆ ಎಂಬುದರ ಬಗ್ಗೆ ಚರ್ಚಿಸಲಾಯಿತು.
ಪರ್ಯಾಯ ಒಕ್ಕೂಟ ರಚನೆ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ತಟಸ್ಥ ನಿಲುವು ತಾಳಿದ್ದು ನಿರ್ಮಾಪಕರು ತಮಗೆ ಇಷ್ಟಬಂದ ಕಾರ್ಮಿಕರ ಸಂಘವನ್ನು ಬಳಸಿಕೊಳ್ಳಬಹುದು ಎಂದು ಹೇಳಿ ಪರ್ಯಾಯ ಒಕ್ಕೂಟಕ್ಕೆ ಪರೋಕ್ಷ ಬೆಂಬಲ ನೀಡಿದೆ. ಇದು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.