ಹೊಟ್ಟೆಗೆ ಪಸರಿಸಿದ ಕ್ಯಾನ್ಸರ್; ಚಿಂತಾಜನಕ ಸ್ಥಿತಿಯಲ್ಲಿ ನಟ ಹರೀಶ್ ರಾಯ್
ಕನ್ನಡ ಪೋಷಕ ನಟ ಹರೀಶ್ ರಾಯ್ ಆರೋಗ್ಯಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಅವರು ಮಾರಕ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ನಟರಾದ ಯಶ್, ದರ್ಶನ್ ಸೇರಿದಂತೆ ಕೆಲವರು ಹರೀಶ್ ಅವರಿಗೆ ಸಹಾಯ ಮಾಡಿದ್ದಾರೆ. ಇದೀಗ ಕ್ಯಾನ್ಸರ್ ಹೊಟ್ಟೆಗೆ ಪಸರಿಸಿ ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.
'ಓಂ', 'KGF' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಹರೀಶ್ ರಾಯ್ ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಖಳನಟನಾಗಿಯೇ ಬಣ್ಣ ಹಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಯಶ್ ನಟನೆಯ 'KGF' ಚಿತ್ರದಲ್ಲಿ ಚಾಚಾ ಆಗಿ ಅವರ ನಟನೆ ಗಮನ ಸೆಳೆದಿತ್ತು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲೇ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆ ಆಗಿತ್ತು. ಬಳಿಕ ಚಿಕಿತ್ಸೆ ಪಡೆಯಲು ಆರಂಭಿಸಿದ್ದರು. ಇದೀಗ ಆರೋಗ್ಯಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ಅಂದಹಾಗೆ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ದೇಹದ ತೂಕ ಇಳಿದು ತೆಳ್ಳಗಾಗಿದ್ದಾರೆ. ಆದರೆ ಹೊಟ್ಟೆಯಲ್ಲಿ ನೀರು ತುಂಬಿ ಊದಿಕೊಂಡಿದೆ. ತೆರೆಮೇಲೆ ಖಡಕ್ ಪಾತ್ರಗಳನ್ನ ಅಬ್ಬರಿಸುತ್ತಿದ್ದ ನಟನನ್ನು ಈ ಸ್ಥಿತಿಯಲ್ಲಿ ನೋಡಿ ಅಭಿಮಾನಿಗಳು ಮರುಕಪಡುತ್ತಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗೋಪಿ ಗೌಡ್ರು ಎಂಬುವವರು ನಟ ಹರೀಶ್ ರಾಯ್ ಅವರನ್ನು ಭೇಟಿ ಮಾಡಿ ವೀಡಿಯೋ ಮಾಡಿದ್ದಾರೆ.
ಹರೀಶ್ ರಾಯ್ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಮಾತನಾಡುತ್ತಾ ಹರೀಶ್ ಭಾವುಕರಾಗಿದ್ದಾರೆ. "ಈ ವೀಡಿಯೋವನ್ನು ಕನ್ನಡದ ಖ್ಯಾತ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಫಿಲ್ಮ್ ಚೇಂಬರ್ಗೆ ತಲುಪಿಸಿ. ನನಗೆ ಸಹಾಯ ಮಾಡಿ ನನ್ನನ್ನು ಉಳಿಸಿ. ನಾನು ಗುಣವಾದರೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ" ಎಂದು ಹರೀಶ್ ರಾಯ್ ವೀಡಿಯೋದಲ್ಲಿ ಮಾತನಾಡಿ ಮನವಿ ಮಾಡಿದ್ದಾರೆ.
ಥೈರಾಯ್ಡ್ನಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರಿಗೆ ಗಂಟಲಲ್ಲಿ ಗಡ್ಡೆಯಾಗಿ ಅದು ಕ್ಯಾನ್ಸರ್ಗೆ ತಿರುಗಿತ್ತು. ಈ ವಿಚಾರವನ್ನು 3 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಆ ಸಮಯದಲ್ಲಿ ಚಿತ್ರರಂಗ ಕೆಲವರು ಸ್ಪಂದಿಸಿ ಸಹಾಯ ಮಾಡಿದ್ದರು. ಯಶ್ ಹಾಗೂ ದರ್ಶನ್ ದೊಡ್ಡ ಮೊತ್ತದ ಸಹಾಯ ಮಾಡಿದ್ದಾಗಿಯೂ ಹರೀಶ್ ತಿಳಿಸಿದ್ದರು. ಆರಂಭದಲ್ಲಿ ಕ್ಯಾನ್ಸರ್ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ವಾಸಕೋಶಕ್ಕೆ ಸೋಂಕು ತಗುಲಿ ಕ್ಯಾನ್ಸರ್ ಆಗಿ ತಿರುಗಿನ ಮೇಲೆ ಚಿಕಿತ್ಸೆ, ವಿಶ್ರಾಂತಿ ಬಗ್ಗೆ ಯೋಚಿಸಿದ್ದೆ ಎಂದು ಹೇಳಿಕೊಂಡಿದ್ದರು.
ಸದ್ಯ ಹರೀಶ್ ರಾಯ್ ಅವರ ಆರೋಗ್ಯ ಸ್ಥಿತಿ ಕಂಡು ಕೆಲವರು ಸಹಾಯ ಮಾಡಲು ಆರಂಭಿಸಿದ್ದಾರೆ. ಮತ್ತಷ್ಟು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸಾಕಷ್ಟು ಜನ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಹೆಚ್ಚು ಜನರಿಗೆ ತಲುಪುವಂತೆ ಮಾಡುತ್ತಿದ್ದಾರೆ.
ಶಿವರಾಜ್ಕುಮಾರ್ ಚಿತ್ರರಂಗದಲ್ಲಿ ಗಾಡ್ ಫಾದರ್. ಶಿವಣ್ಣನ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡುತ್ತಿದ್ದ ಅವರಿಗೆ ಮುಂದೆ 'ಓಂ' ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಡಾನ್ ರಾಯ್ ಪಾತ್ರದಲ್ಲಿ ಮಿಂಚಿದ್ದರು. ಶಿವಣ್ಣ ಸೂಚಿಸಿದಂತೆ ತಮ್ಮ ಹೆಸರಿನ ಜೊತೆ 'ರಾಯ್' ಎಂದು ಸೇರಿಸಿಕೊಂಡರು. ಅದೇ ನನಗೆ ವರವಾಯಿತು. 'ಓಂ' ಬಳಿಕ ಶಿವಣ್ಣ ಕರೆದು 'ಸಮರ' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವಂತಾಯಿತು.


Click it and Unblock the Notifications











