"ಇಂತಹವರನ್ನು ದೂರ ಇಟ್ಟರೆ ನನ್ನಂತೆ ನೀವು ಗೆಲ್ಲಬಹುದು": ತಮ್ಮ ಸಕ್ಸಸ್ ಸೀಕ್ರೆಟ್ ಹೇಳಿಬಿಟ್ರು ಯಶ್
ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ. 'KGF' ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಬಸ್ ಡ್ರೈವರ್ ಮಗನಾದ ಯಶ್ ತಮ್ಮ ದೃಢ ಸಂಕಲ್ಪ ಹಾಗೂ ಕಠಿಣ ಪರಿಶ್ರಮದಿಂದ ಭಾರತೀಯ ಚಿತ್ರರಂಗದ ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.
ಯಶ್ ಮುಂದಿನ ಚಿತ್ರಕ್ಕಾಗಿ ಈಗ ಬಾಲಿವುಡ್ ಮಂದಿ ಕೂಡ ಕಾದು ಕೂತಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿ ಫಿಲ್ಮ್ ಮೇಕರ್ಸ್ ಸಹ ರಾಕಿಂಗ್ ಸ್ಟಾರ್ ಜೊತೆ ಸಿನಿಮಾ ಮಾಡೋಕೆ ಕಾಯುವಂತಾಗಿದೆ. ಯಶ್ ಕಂಡ ಕನಸು, ಆ ಕನಸ್ಸನ್ನು ನನಸು ಮಾಡಿಕೊಳ್ಳಲು ಪಟ್ಟ ಶ್ರಮ ಕಣ್ಣಮುಂದಿದೆ. ಇಂದು ಯಶ್ ಬರೀ ಜಾಹೀರಾತುಗಳಿಂದ ನೂರಾರು ಕೋಟಿ ಸಂಪಾದಿಸುತ್ತದ್ದಾರೆ. ಕನ್ನಡ ಚಿತ್ರರಂಗದ ನಂಬರ್ ವನ್ ಸ್ಟಾರ್ ಆಗಿ ದರ್ಬಾರ್ ನಡೆಸುತ್ತಿದ್ದಾರೆ.

ಕೇವಲ 18ನೇ ಸಿನಿಮಾಗಳಲ್ಲಿ 100 ಸಿನಿಮಾಗಳಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. 'KGF' ಸರಣಿ ಚಿತ್ರಗಳನ್ನು ದೇಶ ವಿದೇಶಗಳಲ್ಲಿ ಯಶ್ ಕೊಡುಗೆ ಮರೆಯುವಂತಿಲ್ಲ. ಇನ್ನು ಇಡೀ ಭಾರೀ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತಹ ಸಿನಿಮಾ ಮಾಡುತ್ತೇವೆ ಎಂದು ಹೇಳಿದ್ದ ಯಶ್ ಅದನ್ನು ಸಾಧಿಸಿ ತೋರಿಸಿದ್ದಾರೆ. ಯಶ್ ಯಶೋಗಾಥೆ ಎಷ್ಟೂ ಜನರಿಗೆ ಪ್ರೇರಣೆ. ಅಂದಹಾಗೆ ಯಶ್ ಸಕ್ಸಸ್ ಸೂತ್ರ ಏನು? ಈ ಬಗ್ಗೆ ಸ್ವತಃ ರಾಕಿಂಗ್ ಸ್ಟಾರ್ ಮಾತನಾಡಿದ್ದಾರೆ.
ಬಿಜಿಎಸ್ ಉತ್ಸವ್ 2023 ಕಾರ್ಯಕ್ರಮದಲ್ಲಿ ಯಶ್ ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವ ತಮ್ಮ ಸಕ್ಸಸ್ ಸೂತ್ರ ಏನು? ಎಂದು ನೆರಿದಿದ್ದ ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟರು. ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಅಲ್ಲಿ ನೆರೆದಿದ್ದರು. ಆದರೂ ಕನ್ನಡದಲ್ಲೇ ಹೇಳ್ತೀನಿ ಎಂದು ಕನ್ನಡದಲ್ಲೇ ತಮ್ಮ ಸಕ್ಸಸ್ ಸೂತ್ರದ ಬಗ್ಗೆ ಮಾತನಾಡಿದ್ದಾರೆ.
"ಸಕ್ಸಸ ಸೂತ್ರ ಅಂತ ಏನು ಇಲ್ಲ. ಪ್ರತಿಯೊಬ್ಬರಿಗೂ ಒಳಗೊಂದು ಧ್ವನಿ ಇರುತ್ತದೆ. ಆತ್ಮ ಇರುತ್ತದೆ. ಅದು ಏನೋ ಒಂದು ಹೇಳುತ್ತದೆ. ಏನೋ ಮಾಡಬೇಕು, ಅದನ್ನು ಆಸೆ, ಗುರಿ ಅಂತಿರೋ ಯಾವುದೋ ಒಂದು. ಒಳಗೊಂದು ಹೇಳುತ್ತಿರುತ್ತದೆ. ಆದರೆ ಸುತ್ತಲಿನ ಸಮಾಜದಲ್ಲಿ ಆ ಧ್ವನಿಯನ್ನು ತುಳಿಯುವವರು ತುಂಬಾ ಜನ ಇರ್ತಾರೆ. ಅಂದ್ರೆ ಪ್ರತಿಯೊಬ್ಬರು ಏನೋ ಒಂದು ಮಾಡ್ತೀನಿ ಅಂದಾಕ್ಷಣ, ನೀನು ಹೆಂಗೆ ಮಾಡ್ತೀಯಾ? ನಿನ್ನ ಕೈಯಲ್ಲಿ ಆಗುತ್ತಾ? ಎನ್ನುತ್ತಾರೆ. ಮೊದಲು ಅದನ್ನು ಗೆಲ್ಲಬೇಕು"
"ನಿಮ್ಮ ಕಿವಿಗಳನ್ನು ಮುಚ್ಚಿಕೊಳ್ಳಬೇಕು. ಒಳ್ಳೆಯದನ್ನು ಮಾತ್ರ ಕೇಳಿಸಿಕೊಳ್ಳಬೇಕು. ಬರೀ ಹೊಗಳಿಕೆ ಅಂತಲ್ಲ. ನಿಮ್ಮ ಸುತ್ತಾಮುತ್ತಾ ಪರಿಸಲ ಬಹಳ ಮುಖ್ಯ ಆಗುತ್ತೆ. ಯಾರು ಜೀವನದಲ್ಲಿ ಏನಾದರೂ ಸಾಧಿಸಬೇಕು, ಇನ್ನು ಬೆಳೆಯಬೇಕು ಎಂದುಕೊಳ್ಳುತ್ತಾರೋ ಅಂತಹವರನ್ನು ಮಾತ್ರ ಸುತ್ತಾ ಇಟ್ಕೊಳ್ಳಿ. ಯಾರು ಬರೀ ಕೊರಗುತ್ತಾ ಇರ್ತಾರೋ, ಅದಾಗಲ್ಲ, ಇದಾಗಲ್ಲ, ಅದು ಕಷ್ಟ, ಇದು ಕಷ್ಟ ಅಂತಾರೋ ಅಂತಹವರನ್ನು ಎಂಟರ್ಟೈನ್ ಮಾಡಲು ಹೋಗಬೇಡಿ. ಅದು ಅವರ ತಲೆಯಲ್ಲಿ ಕಟ್ಟಿಕೊಂಡಿರುವ ಪ್ರಪಂಚ. ಆ ಪ್ರಪಂಚ ಕೆಟ್ಟದಾಗಿರುತ್ತದೆ. ನೀವು ನೋಡುವ ಪ್ರಪಂಚ ಚೆನ್ನಾಗಿರಬೇಕು."
"ಪಕ್ಕದಲ್ಲಿರುವವರ ಒಳ್ಳೆಯವರು ಅಂದುಕೊಂಡ್ರೆ ಒಳ್ಳೆಯವರು. ಕೆಟ್ಟವರು ಅಂದುಕೊಂಡ್ರೆ ಕೆಟ್ಟವರು. ಎಲ್ಲಾ ನಿಮ್ಮ ತಲೆಯಲ್ಲಿ ಇರುತ್ತೆ. ಆದಷ್ಟು ಪಾಸಿಟಿವ್ ಆಗಿ ಯೋಚಿಸಿ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದು ಹಾಕುವವರು ಜಾಸ್ತಿ ಇರ್ತಾರೆ. ಅವಾಯ್ಡ್ ಮಾಡ್ಕೊಳಿ. ಎಷ್ಟು ಅದರಿಂದ ದೂರ ಇರ್ತೀರಾ, ಎಷ್ಟು ನಿಮ್ಮ ಗುರಿ ಕಡೆ ಗಮನ ಹರಿಸುತ್ತೀರಾ. ಅಷ್ಟು ಒಳ್ಳೆಯದು. ಆಗ ಎಲ್ಲವೂ ಸಾಧ್ಯ. ಎಲ್ಲ ಸಿಂಪಲ್ ಅನ್ನಿಸುತ್ತೆ."
"ನನ್ನಂತವನು ಇವತ್ತು ಏನಾದರೂ ಕೆಲಸ ಮಾಡಿದ್ದೀನಿ ಅಂದ್ರೆ, ನನಗೇನು ಅನ್ನಿಸುತ್ತೋ ಅದನ್ನು ಮಾಡ್ಕೊಂಡು ಹೋಗಿದ್ದೀನಿ. ಒಳ್ಳೆ ಕೆಲಸ ಮಾಡಿದಾಗ ನೀವು ಆಶೀರ್ವಾದ ಮಾಡಿದ್ದೀರಾ. ನೀವು ಯಾವತ್ತು ತಾರತಮ್ಯ ಮಾಡಲ್ಲ ಅಂತ ಗೊತ್ತು. ಒಳ್ಳೆ ಕೆಲಸ ಮಾಡಿದ್ರೆ ಚಪ್ಪಾಳೆ ತಟ್ಟುತ್ತೀರಾ, ಒಳ್ಳೆ ಕೆಲಸ ಇಲ್ಲ ಅಂದ್ರೆ ತಟ್ಟಿ ಬುದ್ದಿ ಹೇಳ್ತೀರಾ. ಅಷ್ಟು ನಂಬಿಕೆ ನನಗಿದೆ" ಎಂದು ಯಶ್ ಹೇಳಿದ್ದಾರೆ.


Click it and Unblock the Notifications











