'KGF'ಗೂ ಮುನ್ನ ಯಶ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಸಿನಿಮಾ ಜುಲೈ 26ಕ್ಕೆ ರೀ- ರಿಲೀಸ್
ಸ್ಯಾಂಡಲ್ವುಡ್ನಲ್ಲಿ ಹಿಟ್ ಸಿನಿಮಾಗಳ ರೀ-ರಿಲೀಸ್ ಟ್ರೆಂಡ್ ಮುಂದುವರೆದಿದೆ. ದೊಡ್ಡ ಸಿನಿಮಾಗಳು ತೆರೆಗೆ ಬರಲು ಹಿಂದು ಮುಂದು ನೋಡುವಂತಾಗಿದೆ. ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗದೇ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಹಾಗಾಗಿ ಹಳೇ ಸಿನಿಮಾಗಳನ್ನೇ ಪ್ರದರ್ಶನ ಮಾಡುವ ಪ್ರಯತ್ನ ನಡೀತಿದೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ತೆರೆಗೆ ಬಂದಿದ್ದ 'ಜಾಕಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. 13 ವರ್ಷಗಳ ಬಳಿಕ ಅಭಿಮಾನಿಗಳು ಹಬ್ಬದ ರೀತಿ ಚಿತ್ರವನ್ನು ಸ್ವಾಗತಿಸಿದ್ದರು. ಮತ್ತೆ ತೆರೆಮೇಲೆ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದರು. ಬಳಿಕ ಹಲವು ಸಿನಿಮಾಗಳು ಇದೇ ಹಾದಿ ಹಿಡಿದವು.

ಉಪೇಂದ್ರ ನಿರ್ದೇಶಿಸಿ ನಟಿಸಿದ 'ಎ' ಕೂಡ ರೀ ರಿಲೀಸ್ ಆಗಿ ಸದ್ದು ಮಾಡಿತ್ತು. ಹೊಸ ರೂಪದಲ್ಲಿ ಕಲ್ಟ್ ಕ್ಲಾಸಿಕ್ ಸಿನಿಮಾ ತೆರೆಕಂಡು ಪ್ರೇಕ್ಷಕರನ್ನು ರಂಜಿಸಿತು. ಪುನೀತ್ ರಾಜ್ಕುಮಾರ್ ನಟನೆಯ 'ಅಂಜನಿಪುತ್ರ', 'ಪವರ್' ಒಂದೇ ದಿನ ಮತ್ತೆ ತೆರೆಗೆ ಬಂದಿದ್ದವು. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಕೃಷ್ಣ ನೀಬೇಗನೆ ಬಾರೋ' ಚಿತ್ರ ಕೂಡ ಇತ್ತೀಚೆಗೆ ಪ್ರೇಕ್ಷಕರನ್ನು ರಂಜಿಸಿತ್ತು.
ಇದೀಗ ರಾಕಿಂಗ್ ಸ್ಟಾರ್ ಯಶ್ ಸರದಿ. ಈಗಾಗಲೇ ಯಶ್ ನಟನೆಯ ಹಿಟ್ ಸಿನಿಮಾಗಳು ರೀ-ರಿಲೀಸ್ ಆಗಿ ಸದ್ದು ಮಾಡ್ತಿವೆ. 'ಮಿ. & ಮಿ. ರಾಮಾಚಾರಿ' ಸಿನಿಮಾ ಕೂಡ ಮರುಬಿಡುಗಡೆ ಆಗಿತ್ತು. 'ಕೆಜಿಎಫ್' ಸರಣಿ ಸಿನಿಮಾಗಳು ಆಗಾಗ್ಗೆ ಪ್ರೇಕ್ಷಕರ ಮುಂದೆ ಬರುತ್ತಿರುತ್ತವೆ. ಇದೀಗ ಸೂಪರ್ ಹಿಟ್ 'ರಾಜಾಹುಲಿ' ಸಿನಿಮಾ ಮತ್ತೆ ತೆರೆಗೆ ಬರ್ತಿದೆ.
ಗುರು ದೇಶ್ಪಾಂಡೆ ನಿರ್ದೇಶನದ 'ರಾಜಾಹುಲಿ' ಸಿನಿಮಾ 11 ವರ್ಷಗಳ ಹಿಂದೆ ತೆರೆಗಪ್ಪಳಿಸಿ ಗೆದ್ದಿತ್ತು. ಕೆ. ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದರು. ತಮಿಳಿನ 'ಸುಂದರ ಪಾಂಡಿಯನ್' ರೀಮೆಕ್ ಆಗಿದ್ದ ಕನ್ನಡದ ನೇಟಿವಿಟಿಗೆ ತಕ್ಕಂತೆ 'ರಾಜಾಹುಲಿ'ಯನ್ನು ತಿದ್ದಿ ತೀಡಲಾಗಿತ್ತು. ಯಶ್ ಅದೇ ಮೊದಲ ಬಾರಿಗೆ ಗಿರಿಜಾ ಮೀಸೆ ಬಿಟ್ಟು ಅಬ್ಬರಿಸಿದ್ದರು.

ಮಂಡ್ಯ ಹಿನ್ನೆಲೆಯಲ್ಲಿ 'ರಾಜಾಹುಲಿ' ಸಿನಿಮಾ ಕಟ್ಟಿಕೊಡಲಾಗಿತ್ತು. ಕಾಮಿಡಿ, ಆಕ್ಷನ್, ರಿವೇಂಜ್ ಡ್ರಾಮಾ ಬೆರೆಸಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾದಬ್ರಹ್ಮ ಹಂಸಲೇಖ ಸಂಗೀತ, ಸಾಹಿತ್ಯ ಚಿತ್ರಕ್ಕೆ ದೊಡ್ಡ ಶಕ್ತಿ ಆಗಿತ್ತು. ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಭರ್ಜರಿ ಕಲೆಕ್ಷನ್ ಮಾಡಿತ್ತು.
'ರಾಜಾಹುಲಿ' ಯಶ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಸಿನಿಮಾ. ಅದಾಗಲೇ 'ಗೂಗ್ಲಿ' ಸಿನಿಮಾ ಹಿಟ್ ಆಗಿದ್ದರೂ ಕಮರ್ಷಿಯಲ್ ಆಗಿ ಈ ಸಿನಿಮಾ ದೊಡ್ಡ ಪ್ಲಸ್ ಆಗಿತ್ತು. ಬೆಂಗಳೂರಿನ ಕಪಾಲಿ, ವೀರೇಶ್, ಪಿವಿಆರ್, ರಾಕ್ ಲೈನ್ ಮಾಲ್ ಸೇರಿದಂತೆ ರಾಜ್ಯದಾದ್ಯಂತ 26 ಚಿತ್ರಮಂದಿರಗಳಲ್ಲಿ ಅಂದು ಸಿನಿಮಾ ಅರ್ಧ ಶತಕ ಬಾರಿಸಿತ್ತು. ಮೊದಲ ವಾರವೇ ಸಿನಿಮಾ 7 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಮಂಜು ಮಾಂಡವ್ಯ ಸಂಭಾಷಣೆ 'ರಾಜಾಹುಲಿ' ಚಿತ್ರದ ಮತ್ತೊಂದು ಪ್ಲಸ್ಪಾಯಿಂಟ್. ಯಶ್ ಅಣ್ತಮ್ಮ ಡೈಲಾಗ್ ಬಹಳ ಜನಪ್ರಿಯವಾಗಿತ್ತು. ಯಶ್-ಚಿಕ್ಕಣ್ಣ ಕಾಮಿಡಿ ಸನ್ನಿವೇಶಗಳು ಮೋಡಿ ಮಾಡಿದ್ದು ಸುಳ್ಳಲ್ಲ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆ. ಮಂಜುಗೂ ಈ ಸಿನಿಮಾ ಶಕ್ತಿ ತುಂಬಿತ್ತು. ಈ ಚಿತ್ರದಿಂದ ಬಂದ ಸಂಭಾವನೆಯಲ್ಲಿ ನಟ ಯಶ್ ಹೊಸಕೆರೆಹಳ್ಳಿ ಬಳಿ ಒಂದು ಮನೆ ಖರೀದಿಸಿದ್ದರು.
ಜುಲೈ 26ರಿಂದ 'ರಾಜಾಹುಲಿ' ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ. ಭೂಮಿ ಫಿಲಂಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಲು ಮುಂದಾಗಿದೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ.


Click it and Unblock the Notifications











