ರಾಧಿಕಾ ಮನೆಗೆ ರಾಣಿ; ಎಂಜಿ ರೋಡಲ್ಲಿ ಯಶ್ ನಂಗೆ ಮನೆ, ಸೈಟ್ ಕೊಡ್ಸಿದ್ದಾನೆ; ಪುಷ್ಪಾ
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಇದೀಗ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೊತ್ತಲವಾಡಿ' ಎಂಬ ಸಿನಿಮಾ ನಿರ್ಮಿಸಿದ್ದಾರೆ. ಆಗಷ್ಟ್ 1ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಚಾರದ ಭಾಗವಾಗಿ ನಿರ್ಮಾಪಕಿ ಪುಷ್ಪಾ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ.
ಶ್ರೀರಾಜ್ ನಿರ್ದೇಶನದ 'ಕೊತ್ತಲವಾಡಿ' ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿ ಶ್ರೀವತ್ಸ ಗರಡಿಯಲ್ಲಿ ಪಳಗಿರುವ ಶ್ರೀರಾಜ್ ಒಂದು ಕಮರ್ಷಿಯಲ್ ಚಿತ್ರ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ತಮ್ಮ ನೇರಾನೇರ ಮಾತುಗಳಿಂದ ಯಶ್ ತಾಯಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಮಾತನಾಡುತ್ತಾರೆ. ಇದೇ ಕಾರಣಕ್ಕೆ ಕೆಲವರು ಹಮ್ಮು ಬಿಮ್ಮು ಜಾಸ್ತಿ ಎಂದುಕೊಂಡಿದ್ದಾರೆ. ನಾನು ಆ ರೀತಿ ಅಲ್ಲ. ನನ್ನ ಮಾತು ಕೆಲವರಿಗೆ ಆ ರೀತಿ ಅನ್ನಿಸಬಹುದು ಎಂದು ಪುಷ್ಪಾ ಹೇಳುತ್ತಾ ಬರ್ತಿದ್ದಾರೆ. ಟಿವಿ9 ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಅವರು ಬಿಚ್ಚಿಟ್ಟಿದ್ದಾರೆ.
ತಮ್ಮ ಫ್ಯಾಮಿಲಿ, ಮಗ ಹಾಗೂ ಸೊಸೆ ಜೊತೆಗಿನ ಬಾಂಧವ್ಯ, 'ಕೊತ್ತಲವಾಡಿ' ಹೀಗೆ ಹಲವು ವಿಚಾರಗಳು ಈ ಸಂದರ್ಶನದಲ್ಲಿ ಬಂದು ಹೋಗಿದೆ. ಸೊಸೆ ರಾಧಿಕಾ ಪಂಡಿತ್ ಜೊತೆಗಿನ ಒಡನಾಟದ ಬಗ್ಗೆ ಕೂಡ ಯಶ್ ತಾಯಿ ಪುಷ್ಪಾ ಮಾತನಾಡಿದ್ದಾರೆ. "ರಾಧಿಕಾ ನಮ್ಮ ಮನೆಗೆ ಬಂದು ರಾಣಿ ರೀತಿ ಇದ್ದಾಳೆ. ನಾವಿಬ್ಬರೂ ಅತ್ತೆ, ಸೊಸೆ ರೀತಿ ಇರಲ್ಲ. ಸ್ನೇಹಿತರ ರೀತಿ ಇರ್ತೀವಿ. ಯಶ್ ಕೂಡ ಕೆಲವೊಮ್ಮೆ ಈ ಮುದುಕಿ(ಪುಷ್ಪಾ) ಕೂಡ ಸೊಸೆ ಪರ ಅಂತಿರ್ತಾನೆ. ಇನ್ನೊಬ್ಬರ ಮನೆ ಹೆಣ್ಣು ಮಕ್ಕಳನ್ನು ಹೇಗೆ ನೋಡ್ಕೊಬೇಕು ಎನ್ನುವುದು ನಮಗೆ ಗೊತ್ತು" ಎಂದು ಹೇಳಿದ್ದಾರೆ.

ನಾಲ್ಕೈದು ವರ್ಷಗಳಿಂದ ಯಶ್ ಅವರ ತಂದೆ-ತಾಯಿ ಹಾಸನದಲ್ಲಿ ತೋಟ ಮಾಡಿಕೊಂಡು ಇದ್ದರು. ಇದೀಗ ಬಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೂಲದ ಪುಷ್ಪಾ ಅವರು ಹಾಸನ ಮೂಲದವರು. ಈ ಬಗ್ಗೆ ಕೂಡ ಮಾತನಾಡಿದ್ದಾರೆ. "ನಾನು ಹುಟ್ಟಿದ್ದು ಹಾಡವಳ್ಳಿಯಲ್ಲಿ. ನಮ್ಮ ತಂದೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ರು. ಈಗ ಹಾಸನದ ಎಂಜಿ ರೋಡ್ನಲ್ಲಿ ಮನೆಯಿದೆ. ಮೇನ್ ರೋಡ್ನಲ್ಲಿ ಯಶ್ ಮನೆ ಕೊಡ್ಸಿದ್ದಾನೆ. ಅಲ್ಲೇ ಉಳಿದುಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.
"ಎಂಜಿ ರೋಡ್ ಮನೆ ಪಕ್ಕದಲ್ಲಿ ಒಂದು ಸೈಟ್ ಕೂಡ ಇದೆ. ಬಹಳ ದೊಡ್ಡ ಸೈಟ್ ಅದು. ಯಶ್ ಬೇಡ ಎಂದ, ನಾನು ಬೇಕು ಎಂದು ಹೇಳಿದ್ದಕ್ಕೆ ಕೊಡ್ಸಿದ್ದಾನೆ. ತೋಟ ಮಾಡಿಕೊಂಡಿದ್ದಾಗ ಅಲ್ಲಿಗೆ ಓಡಾಡುವುದು ಕಷ್ಟ ಆಗುತ್ತಿತ್ತು. ಬಾಡಿಗೆ ಮನೆಗೆ ಹೋಗಲು ಇಷ್ಟವಾಗಲಿಲ್ಲ, ನಿಮಗೆ ಗೊತ್ತಲ್ಲ, ಬಾಡಿಗೆ ಮನೆಯಿಂದ ಏನೆಲ್ಲಾ ಆಯ್ತು ಎಂದು. ಅದಕ್ಕೆ ಸ್ವಂತ ಮನೆ ಬೇಕು ಅಂತ ತಗೊಂಡೆ. ಇರಲಿ ಮೊಮ್ಮಕ್ಕಳು ಇದ್ದಾರಲ್ಲ" ಎಂದು ಪುಷ್ಪಾ ಅವರು ಹೇಳಿರುವುದು ವೈರಲ್ ಆಗ್ತಿದೆ.
ಮಾತು ಮುಂದುವರೆಸಿರುವ ಪುಷ್ಪಾ "ನಮ್ಮ ತಾಯಿ ಸಿನಿಮಾ, ನಾನು ನಟಿಸಿದ್ರೆ ಜನ ಬಂದು ನೋಡ್ತಾರೆ ಎಂದು ತಂದು ತುರುಕುವ ಕೆಲಸ ಮಾಡಲ್ಲ. ಆ ರೀತಿ ಜನರಿಂದ ದುಡ್ಡು ಮಾಡಲ್ಲ. ಕಥೆ ಬಯಸಿದರೆ ತೆಲುಗು, ತಮಿಳಿನಿಂದ ಬೇಕಾದರೂ ಕಲಾವಿದರನ್ನು ಕರೆದುಕೊಂಡುಬರ್ತೀನಿ. ಶಿವಣ್ಣ, ಉಪ್ಪಿ, ಸುದೀಪ್ ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳೋಣ. ಆದರೆ ಅದಕ್ಕೆ ಕಥೆ ಬಯಸಬೇಕು" ಎಂದು ವಿವರಿಸಿದ್ದಾರೆ.


Click it and Unblock the Notifications











