'ಕೆಜಿಎಫ್'ನ ಕಣ್ಣು ಭುವನ್ ಗೌಡಗೆ ಹುಟ್ಟುಹಬ್ಬದ ಶುಭಾಶಯಗಳು
Recommended Video

'ಕೆಜಿಎಫ್' ಚಿತ್ರದ ಯಶಸ್ಸಿನ ಹಿಂದೆ ಹಲವು ಕೈಗಳು ಕೆಲಸ ಮಾಡಿದೆ. ಈ ಪ್ರಮುಖ ಕೈಗಳಲ್ಲಿ ಛಾಯಾಗ್ರಾಹಕ ಭುವನ್ ಗೌಡ ಒಬ್ಬರು. ಡಿಸೆಂಬರ್ 21 ಕೆಜಿಎಫ್ ಸಿನಿಮಾ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಭುವನ್ ಅವರ ಕ್ಯಾಮೆರಾ ವರ್ಕ್ ಅದ್ಭುತವೆನ್ನುತ್ತಿದ್ದಾರೆ.
ಎರಡೂವರೆ ವರ್ಷ ತಾನು ಪಟ್ಟ ಪರಿಶ್ರಮಕ್ಕೆ ಜನರ ಕೊಟ್ಟ ಬೆಲೆಯನ್ನ ನೋಡಿ ಭುವನ್ ಗೌಡ ತೀರಾ ಸಂತಸಗೊಂಡಿರುವುದಂತೂ ಸುಳ್ಳಲ್ಲ. ಕೆಜಿಎಫ್ ಚಿತ್ರದ ಯಶಸ್ಸಿಗೆ ಪಾಲುದಾರನಾಗಿದ್ದಕ್ಕೆ ಖುಷಿ ಒಂದು ಕಡೆಯಾದ್ರೆ, ಇಂದು ತಮ್ಮ ಹುಟ್ಟುಹಬ್ಬ ಎನ್ನುವುದು ಇನ್ನೊಂದು ಖುಷಿಯಾಗಿದೆ.

ಹೌದು, ಸದ್ಯ ಕೆಜಿಎಫ್ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಭುವನ್ ಗೌಡ ಅವರಿಗೆ ಇಂದು (ಡಿಸೆಂಬರ್ 22) ಜನುಮದಿನದ ಸಂಭ್ರಮ. ಬಹುಶಃ ಈ ವರ್ಷದ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಿತ್ರವೇ ಗಿಫ್ಟ್ ಎನ್ನಬಹುದು.
ಕೆಜಿಎಫ್ ಸಿನಿಮಾ ಮೇಕಿಂಗ್ ವಿಷ್ಯದಲ್ಲಿ ಶಿವಕುಮಾರ್ ಅವರು ಹಾಕಿರುವ ಸೆಟ್ ಪ್ರಮುಖ ಆಕರ್ಷಣೆ. ಆ ಸೆಟ್ ಅಷ್ಟು ಅದ್ಭುತವಾಗಿ ಕಾಣಿಸಲು ಕಾರಣ ಭುವನ್. ಕೆಜಿಎಫ್ ಪ್ರತಿಯೊಂದು ಸೆಟ್ ಗೂ ಭುವನ್ ಜೀವ ನೀಡಿದ್ದಾರೆ. ಪ್ರತಿ ದೃಶ್ಯದಲ್ಲೂ ಭುವನ್ ಅವರ ಕೆಲಸ ಮಾತನಾಡಿದೆ. ಹಾಗಾಗಿ, ಸಿನಿಜಗತ್ತು ಭುವನ್ ಪ್ರತಿಭೆಗೆ ಚಪ್ಪಾಳೆ ಹೊಡೆದು, ಶಿಳ್ಳೆ ಹಾಕಿದೆ.

ಬಹುಶಃ ಭುವನ್ ಗೌಡ ಅವರ ಈ ಕೆಲಸ, ಅವರನ್ನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಮತ್ತು ಕೆಜಿಎಫ್ ನಂತರ ಪರಭಾಷೆಯಲ್ಲೂ ಭುವನ್ ಕೈಚಳಕ ತೋರಿದರೂ ಅಚ್ಚರಿಯಿಲ್ಲ.

ಈಗಾಗಲೇ ಲೊಡ್ಡೆ, ರಥಾವರ, ಪುಷ್ಪಕ ವಿಮಾನ ಹಾಗೂ ಕೆಜಿಎಫ್ ಚಿತ್ರಕ್ಕೆ ಕ್ಯಾಮರಾ ನಿರ್ದೇಶನ ಮಾಡಿರುವ ಭುವನ್ ಇದೀಗ, ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ, ಬರ್ತಡೇ ಸಂಭ್ರಮದಲ್ಲಿರುವ ಭುವನ್ ಗೆ ಕೆಜಿಎಫ್ ಯಶಸ್ಸು ಡಬಲ್ ಖುಷಿ ತಂದಿದೆ. ಅವರಿಂದ ಇನ್ನಂದಷ್ಟು ಒಳ್ಳೆಯ ಚಿತ್ರಗಳು ಬರಲಿ ಎನ್ನುವುದಷ್ಟೇ ನಮ್ಮ ಆಶಯ.


Click it and Unblock the Notifications











