'ಕೆಜಿಎಫ್' ತಾತನ ಸ್ಥಿತಿ ಗಂಭೀರ: ವೈದ್ಯರು ಹೇಳಿದ್ದೇನು?
'ಕೆಜಿಎಫ್' ಸಿನಿಮಾದಲ್ಲಿ ತಾತನೊಬ್ಬನ ಜೀವ ಉಳಿಸಲು ರಾಕಿಭಾಯ್ ಸುತ್ತಿಗೆ ಎತ್ತಿಕೊಳ್ಳುತ್ತಾನೆ. ಈಗ ನಿಜಕ್ಕೂ ಆ ತಾತನ ಜೀವ ಅಪಾಯದಲ್ಲಿದೆ.
ಕೆಜಿಎಫ್ ತಾತ ಎಂದೇ ಹೆಸರಾಗಿರುವ ಕೃಷ್ಣಾಜಿ ರಾವ್ ಆರೋಗ್ಯ ಹದಗೆಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ತಡರಾತ್ರಿ ಅನಾರೋಗ್ಯದಿಂದ ತಮ್ಮ ಮನೆಯಲ್ಲಿ ಕುಸಿದು ಬಿದ್ದ ಕೆಜಿಎಫ್ ತಾತನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ಆಸ್ಪತ್ರೆಯೊಂದಕ್ಕೆ ಕೃಷ್ಣಾಜಿ ರಾವ್ ಅವರನ್ನು ದಾಖಲಿಸಲಾಗಿದ್ದು, ಅವರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಶ್ವಾಸಕೋಶದ ಸೋಂಕಾಗಿದೆ ಎಂದು ವೈದ್ಯರು ಹೇಳಿದ್ದು, ಅವರ ಆರೋಗ್ಯ ಪರಿಸ್ಥಿತಿ ತುಸು ಚಿಂತಾಜನಕ ಸ್ಥಿತಿಯಲ್ಲಿಯೇ ಇರುವುದಾಗಿ ಹೇಳಿದ್ದಾರೆ.

ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಅವರನ್ನು ಇರಿಸಲಾಗಿದ್ದು, ನಳಿಕ ಮೂಲಕ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಕಳೆದೆರಡು ದಿನದಿಂದಲೂ ಅನಾರೋಗ್ಯದಿಂದಲೇ ಇದ್ದ ಅವರು ಸರಿಯಾಗಿ ಆಹಾರವನ್ನೂ ಸೇವಿಸಿರಲಿಲ್ಲ ಎನ್ನಲಾಗಿದೆ. ನಳಿಕೆಗಳ ಮೂಲಕ ದ್ರವಾಹಾರವನ್ನು ನೀಡಲಾಗುತ್ತಿದೆ.
ಕೆಜಿಎಫ್ ಸಿನಿಮಾದ ಮೂಲಕ ಬಹಳ ವೈರಲ್ ಆಗಿದ್ದ ಕೃಷ್ಣಾಜಿ ರಾವ್ಗೆ ಆ ನಂತರ ಹಲವು ಸಿನಿಮಾಗಳಲ್ಲಿ ಅವಕಾಶ ಲಭಿಸಿತು. 'ನ್ಯಾನೊ ನಾರಾಯಣಪ್ಪ' ಹೆಸರಿನ ಸಿನಿಮಾಕ್ಕೆ ಇವರೇ ನಾಯಕ. ಸುಧಾರಾಣಿ, ಶಶಿಕುಮಾರ್ ನಟನೆಯ 'ವಿಧಿ 370' ಸಿನಿಮಾದಲ್ಲಿ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ಕೃಷ್ಣಾಜಿ ರಾವ್ ನಟಿಸಿದ್ದರು. ಆದರೆ ಇದೀಗ ಅವರು ಆಸ್ಪತ್ರೆ ಸೇರಿರುವ ಕಾರಣ ಈ ಸಿನಿಮಾಗಳ ಕತೆಯೇನು ಎಂಬುದು ಗೊತ್ತಿಲ್ಲ.
ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ 'ಕೆಜಿಎಫ್' ತಂಡದವರು ಯಾರಾದರೂ ಕುಟುಂಬಕ್ಕೆ ಸಹಾಯ ಮಾಡಿದ್ದಾರೆಯೋ ಅಥವಾ ಇಲ್ಲವೊ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications











