ತಮಿಳುನಾಡಿನಲ್ಲಿ ನರಾಚಿ ಕೋಟೆ, ಕಾಳಿ ಗುಡಿ, ಗಣೇಶನ ವೀರಗಲ್ಲು: ಇದ್ದಪ್ಪಾ ರಾಕಿ ಭಾಯ್ ಕ್ರೇಜ್ ಅಂದ್ರೆ!
'KGF' ಸರಣಿ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಕರ್ನಾಟಕ ಮಾತ್ರವಲ್ಲದ್ದೇ ವಿಶ್ವದಾದ್ಯಂತ ರಾಕಿಭಾಯ್ ಆರ್ಭಟ ಹೇಗಿತ್ತು ಅನ್ನುವುದು ಗೊತ್ತೇಯಿದೆ. ಗಣೇಶ ಹಬ್ಬದ ಸಂಭ್ರಮದಲ್ಲಿ ತಮಿಳುನಾಡಿನಲ್ಲಿ ನರಾಚಿ ಕೋಟೆ ಎದ್ದು ನಿಂತಿದೆ. ಥೇಟ್ ರಾಕಿಭಾಯ್ ವೀರಗಲ್ಲಿನಂತೆ ಗಣೇಶನನ್ನು ಪ್ರತಿಷ್ಠಾಪಿಸಿ ಅಭಿಮಾನಿಗಳು ಪೂಜಿಸುತ್ತಿದ್ದಾರೆ.'KGF' ಸಿನಿಮಾ ಇಂಪ್ಯಾಕ್ಟ್ ಯಾವ ರೇಂಜಿಗಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ 'KGF' ಸಿನಿಮಾ ಎರಡು ಭಾಗಗಳಾಗಿ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ಯಾನ್ ಇಂಡಿಯಾ ಲೆವಲ್ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತ, ತಮಿಳು, ಆಂಧ್ರ, ತೆಲಂಗಾಣ, ಕೇರಳದಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಸೆಕೆಂಡ್ ಚಾಪ್ಟರ್ ರಿಲೀಸ್ ಹೊತ್ತಿಗೆ ಅಕ್ಕಪಕ್ಕ ರಾಜ್ಯಗಳಲ್ಲಿ ರಾಕಿಭಾಯ್ಗೆ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಚಾಪ್ಟರ್- 2 ಬಂದಮೇಲೆ ಕೇಳೋದೇ ಬೇಡ. ತಮಿಳುನಾಡಿನ ಗಣೇಶೋತ್ಸವದಲ್ಲೂ ರಾಕಿಭಾಯ್ ಹವಾ ಜೋರಾಗಿದೆ.
ಬರೀ ಕಲೆಕ್ಷನ್ ಅಷ್ಟೇ ಅಲ್ಲ ಪ್ರೇಕ್ಷಕರ ಮೇಲೆ ಸಿನಿಮಾ ಇಂಪ್ಯಾಕ್ಟ್ ಕೂಡ ಅಷ್ಟೇ ಜೋರಾಗಿದೆ. ಸಿನಿಮಾ ಬಂದೋಗಿ ತಿಂಗಳುಗಳೇ ಕಳೆದರು ರಾಕಿಭಾಯ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ರಾಜ್ಯದಲ್ಲಿ ರಾಕಿ ಭಾಯ್ ಲುಕ್ನಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಇಡೀ 'KGF' ಸೆಟ್ ಹಾಕಿ ಬಹಳ ಜೋರಾಗಿ ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ. ಅದರ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ತಮಿಳುನಾಡಿನ ನರಾಚಿ ಕೋಟೆಯಲ್ಲಿ ಗಣೇಶ ಹಬ್ಬ
ಸಾಮಾನ್ಯವಾಗಿ ಗಣೇಶೋತ್ಸವಗಳಲ್ಲಿ ವಿಭಿನ್ನ ಸೆಟ್ಗಳನ್ನು ಹಾಕಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತಿದೆ. ತಮಿಳುನಾಡಿನ ಹೊಸೂರಿನಲ್ಲಿ ಅಭಿಮಾನಿಗಳು ನರಾಚಿ ಸಾಮ್ರಾಜ್ಯದ ಸೆಟ್ ನಿರ್ಮಾಣ ಮಾಡಿದ್ದಾರೆ. ಭಕ್ತರು ಥೇಟ್ ನರಾಚಿ ಕೋಟೆಯ ಒಳಗೆ ಹೋದಂತೆ ಹೋಗಿ ಗಣೇಶನನ್ನು ಪೂಜಿಸುವಂತೆ ಮಾಡಿದ್ದಾರೆ. ನರಾಚಿ ಗೇಟ್ನ ಮೂಲಕ ಒಳಗೆ ಹೋಗಿ ಕಾಳಿ ಮಾತೆ ದೇವಸ್ಥಾನದ ದರ್ಶನ ಮಾಡಿ ನಂತರ ರಾಕಿ ಭಾಯ್ ವೀರಗಲ್ಲಿನ ರೀತಿಯಲ್ಲಿ ಮಾಡಿರುವ ಗಣೇಶನನ್ನು ಪೂಜಿಸಬಹುದು.

ಅದ್ಧೂರಿಯಾಗಿ ಕಾಳಿಗುಡಿಯ ಸೆಟ್
ಸುಮಾರು ಅರ್ಧ ಕಿಲೊಮೀಟರ್ವರೆಗೂ ಗುಹೆಯಲ್ಲಿ ತೆರಳಿ ಕಾಳಿ ಮಾತೆಯ ದರ್ಶನ ಮಾಡುವಂತೆ ಸೆಟ್ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಸೆಟ್ ನಿರ್ಮಾಣ ಮಾಡಲಾಗಿದೆ. ಒಂದು ತಿಂಗಳಿನಿಂದ ನೂರಾರು ಜನ ಸೇರಿ ಸೆಟ್ ನಿರ್ಮಿಸಿದ್ದಾರೆ. ಅದರಲ್ಲೂ ಕಾಳಿ ದೇವಸ್ಥಾನದ ಸೆಟ್ ಹೈಲೆಟ್ ಆಗಿದೆ. ಕೆಜಿಎಫ್ ಸರಣಿಯ ಎರಡು ಸಿನಿಮಾಗಳಲ್ಲಿ ಈ ಕಾಳಿಗುಡಿ ಹೈಲೆಟ್ ಆಗಿತ್ತು. ಮೊದಲ ಭಾಗದಲ್ಲಿ ಇದೇ ಕಾಳಿ ಎದುರು ರಾಕಿ ಗರುಡನ ರುಂಡ ಚೆಂಡಾಡಿದರೆ ಎರಡನೇ ಭಾಗದಲ್ಲಿ ರಾಕಿಭಾಯ್ ಕಾಳಿಗೆ ಪೂಜೆ ಮಾಡುವ ಸನ್ನಿವೇಶ ಇದೆ.

ಶಿವಕುಮಾರ್ ಕಲ್ಪನೆಯ ನರಾಚಿ ಸಾಮ್ರಾಜ್ಯ
ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯಂತೆ ಆರ್ಟ್ ಡೈರೆಕ್ಟರ್ ಶಿವಕುಮಾರ್ ಅಂಡ್ ಟೀಂ ನರಾಚಿ ಕೋಟೆಯ ಸೆಟ್ ಹಾಕಿದ್ದರು. 'KGF' ಗಣಿಯ ನಡುವೆ ಅದ್ಭುತ ನರಾಚಿ ಕೋಟೆ ನಿರ್ಮಾಣವಾಗಿತ್ತು. ಸಿನಿಮಾ ನೋಡಿದವರಿಗೆ ಈ ಸೆಟ್ ಬಹಳ ಮಜಾ ಕೊಟ್ಟಿತ್ತು. ಥೇಟ್ ಇದೇ ರೀತಿಯಲ್ಲಿ ಸೆಟ್ ನಿರ್ಮಾಣ ಮಾಡಿ ತಮಿಳುನಾಡಿನಲ್ಲಿ ಅಭಿಮಾನಿಗಳು ಗಣೇಶೋತ್ಸವ ಆಚರಿಸುತ್ತಾರೆ.

ಗಮನ ಸೆಳೆಯುತ್ತಿರುವ ನರಾಚಿ ವಿನಾಯಕ
ಸದ್ಯ ತಮಿಳುನಾಡಿನ ಡಕಣಿಕೋಟೆ ಸುತ್ತಾಮುತ್ತಾ ಈಗ ನರಾಚಿ ಸಾಮ್ರಾಜ್ಯದಲ್ಲಿರುವ ರಾಕಿಭಾಯ್ ಗಣೇಶನದ್ದೇ ಚರ್ಚೆ ನಡೀತಿದೆ. ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು, ಭಕ್ತರು ಬಂದು 'KGF' ನರಾಚಿ ಕೋಟೆ ನೆನಪಿಸುವಂತೆ ಹಾಕಿರುವ ಸೆಟ್ನಲ್ಲಿ ಕೂರಿಸಿರುವ ಗಣೇಶನನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಕನ್ನಡ ಸಿನಿಮಾವೊಂದು ಈ ಪಾಟಿ ಸದ್ದು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.


Click it and Unblock the Notifications











