ನನಗೆ ಹೆಚ್ಚು ಕಡಿಮೆ ಆದರೆ ಯಶ್ಗೆ ಕಾಲ್ ಮಾಡಿ ಹೇಳಿ ಅಂತ ಹೇಳಿದೀನಿ - ಹರೀಶ್ ರಾಯ್
ಸಾಮಾನ್ಯರು ಸೆಲೆಬ್ರೆಟಿಗಳೆಂದರೆ ರಾಯಲ್ ಲೈಫು.. ಕಾರು.. ಪಾರ್ಟಿ.. ಫೈವ್ ಸ್ಟಾರ್ ಹೋಟೆಲ್.. ಸೆಲ್ಫಿ.. ಇತ್ಯಾದಿಗಳೆಂದು ಅಂದುಕೊಂಡಿರುತ್ತಾರೆ. ಆದರೆ.. ಅವರಿಗೂ ಕೂಡ ಅವರದ್ದೇ ಆದ ಕಷ್ಟಗಳಿರುತ್ತಾವೆ. ಹೊರ ಜಗತ್ತಿಗೆ ಅದು ಗೊತ್ತಾಗುವುದಿಲ್ಲ ಅಷ್ಟೇ. ಗೊತ್ತಾದರೂ ಕೂಡ ತೀರಾ ಅಪರೂಪ. ಇನ್ನು.. ಬದುಕು ಕಷ್ಟಸುಖದ ಕಡಲು. ಅವರ ಬಾಳಿನ ಹೊದಿಕೆ ಕೂಡ ಸುಖ ದುಃಖದ ದಾರಗಳಿಂದ ನೇಯ್ದಿರುತ್ತದೆ.
ಸಿರಿವಂತರಿರಲಿ, ಬಡವರಿರಲಿ ಸುಖ, ದುಃಖ ಎರಡನ್ನೂ ಅನುಭವಿಸಲೇಬೇಕು. ಇದಕ್ಕೆ ಮತ್ತೊಂದು ಉದಾಹರಣೆಯಂತೆ ಇರುವ ಹರೀಶ್ ರಾಯ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಲಿದೆ. ದೇಹದ ತೂಕ ಕಡಿಮೆಯಾಗಿದೆ. ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಕ್ಯಾನ್ಸರ್ ಹರೀಶ್ ರಾಯ್ ಅವರ ಬದುಕನ್ನೇ ಹಿಂಡಿ ಹಿಪ್ಪೆಯಾಗಿಸಿದೆ.

ಹರೀಶ್ ರಾಯ್ ಅವರಿಗೆ ಈಗ ಆರ್ಥಿಕ ಸಹಾಯ ಬೇಕಿದೆ. ಆದರೆ ಕೇಳಲು ಮುಜುಗರ. ಸ್ವಾಭಿಮಾನ ಅಡ್ಡಿ ಬರುತ್ತೆ. ಆದರೂ ಕೂಡ ಹರಿಶ್ ರಾಯ್ ಆರ್ಥಿಕ ಸಹಾಯಕ್ಕಾಗಿ ಮನವಿಯನ್ನು ಮಾಡಿಕೊಂಡಿದ್ದಾರೆ. ನನಗೆ ಸಹಾಯ ಮಾಡಿ ನನ್ನನ್ನು ಉಳಿಸಿ. ನಾನು ಗುಣವಾದರೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಹರೀಶ್ ರಾಯ್ ವೀಡಿಯೋ ಮೂಲಕ ಕೇಳಿಕೊಂಡಿದ್ದಾರೆ.
ಇನ್ನೂ ಈ ಹಿಂದೆ ಹರೀಶ್ ರಾಯ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾಗ ಯಶ್ ಮತ್ತು ದರ್ಶನ್ ಇವರಿಗೆ ನೆರವಾಗಿದ್ದರು. ಸಹಾಯದ ಹಸ್ತವನ್ನು ಚಾಚಿದ್ದರು. ಖುದ್ದು ಹರೀಶ್ ರಾಯ್ ಹಿಂದೆ ಈ ವಿಚಾರವನ್ನು ಹೇಳಿದ್ದರು ಕೂಡ. ಆದರೂ ಕೂಡ ಹಲವರು ಈಗ ಯಶ್ ಅವರತ್ತ ಬೆರಳು ತೋರುತ್ತಿದ್ದಾರೆ. ಹಿರಿಯ ಕಲಾವಿದನಿಗೆ ಯಶ್ ನೆರವಾಗುತ್ತಿಲ್ಲ ಎಂಬ ಮಾತುಗಳನ್ನಾಡುತ್ತಿದ್ದರು. ಇದರ ಕುರಿತು ಮತ್ತು ತಮ್ಮ ಆರೋಗ್ಯದ ಸ್ಥಿತಿಯ ಕುರಿತು ಹರೀಶ್ ರಾಯ್ ''ಟಿವಿ 9 ಕನ್ನಡ'' ಜೊತೆ ಮಾತನಾಡಿದ್ದು ಯಶ್ ಅವರ ಬಳಿ ಮತ್ತೆ ಮತ್ತೆ ಸಹಾಯ ಕೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಹರೀಶ್ ರಾಯ್, ಯಶ್ ನನಗೆ ಸಹಾಯ ಮಾಡಿದಾರೆ, ಈಗ ಹೇಗೆ ಮತ್ತೆ ಕೇಳುವುದು ? ಮತ್ತೆ ಕೇಳುವುದು ತಪ್ಪಾಗುತ್ತೆ ಎಂದು ಹೇಳಿದ್ದಾರೆ. ಹಾಗೊಂದು ವೇಳೆ ಕೇಳಲೇಬೇಕಾದ ಪರಿಸ್ಥಿತಿ ಬಂದರೆ ಅವರ ಮನೆಗೆ ಹೋಗ್ತೀನಿ ಎಂದು ಹೇಳಿದ್ಧಾರೆ.
ಒಂದು ಬಾರಿ ಸಹಾಯ ಮಾಡಿದವರಿಗೆ ಪದೇ ಪದೇ ತೊಂದರೆ ಕೊಡಬಾರದು ಎಂದು ಹೇಳಿರುವ ಹರೀಶ್ ರಾಜ್, ಅವರಿಗೆ ಎಷ್ಟು ಅಂತ ಹಣ ಕೇಳೋದು, ಬೇಡ ಈಗ ಸುಮ್ಮನೆ, ಅವರು ಈಗ ಬಾಲಿವುಡ್ನಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ, ಈ ಸಮಯದಲ್ಲಿ ನನ್ನಿಂದ ಅವರ ಮನಸಿಗೆ ನೋವಾಗಿ ನಾನು ಅವರನ್ನು ಕಳೆದುಕೊಂಡು ಬಿಟ್ಟರೆ ಎನ್ನುವ ಭಯ ನನಗೆ ಎಂದು ಹೇಳಿರುವ ಹರೀಶ್ ರಾಯ್ ಇವತ್ತು ವರ್ಲ್ಡ್ ವೈಡ್ನಲ್ಲಿ ಅವರು ಯಾರಿಗೂ ಸಿಕ್ತಿಲ್ಲ. ನಾವು ಒಂದು ಫೋನ್ ಮಾಡಿದರೆ ಸ್ಪಂದಿಸುತ್ತಾರೆ, ಅಂತಹವರನ್ನು ನಾವು ಯಾವತ್ತು ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ನನ್ನ ಜೀವ ಇರುವವರೆಗೆ ಯಾವ ಕಾರಣಕ್ಕೂ ಕೂಡ ನಾನು ಯಶ್ ಅವರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಈ ಮಾತನ್ನು ನಾನು ನಮ್ಮ ಮನೆಯಲ್ಲಿ ಕೂಡ ಹೇಳಿದ್ದೇನೆ ಎಂದಿರುವ ಹರೀಶ್ ರಾಯ್, ಅವರು ಖಂಡಿತಾ ಬರುತ್ತಾರೆ ಎಂದು ಹೇಳಿದ್ದಾರೆ.
ನನಗೇನಾದರೂ ಆದರೆ ಯಶ್ ಅವರಿಗೆ ಒಂದು ಫೋನ್ ಮಾಡು ಇಲ್ಲಾ ಅಂದರೆ ಮೆಸೇಜ್ ಮಾಡು ಅಂತ ನಾನು ನಮ್ಮ ಮನೆಯವರಿಗೆ ಹೇಳಿದ್ದೇನೆ, ನನ್ನ ಮಕ್ಕಳಿಗೆ ಕೂಡ ಹೇಳಿದ್ದೇನೆ, ನನಗೆ ಅವರ ಮೇಲೆ ನಂಬಿಕೆ ಇದೆ ಎಂದು ಹೇಳಿರುವ ಹರೀಶ್ ರಾಯ್ ಈ ಸರಿ ನಾನು ಅವರಿಗೆ ವಿಷಯ ತಿಳಿಸೋಕೆ ಹೋಗಿಲ್ಲ ಸದ್ಯಕ್ಕೆ ಬೇಡ ಎಂದು ಸುಮ್ಮನೆ ಇದ್ದೆ ಆದರೆ ಮಾಧ್ಯಮಗಳ ಮೂಲಕ ಅವರಿಗೆ ಈಗಾಗಲೇ ವಿಚಾರ ಗೊತ್ತಾಗಿರಬಹುದು, ನನ್ನ ವಿಷಯದಲ್ಲಿ ಅವರು ಸುಮ್ಮನೆ ಕೂರುವ ಮನುಷ್ಯ ಅಂತೂ ಅಲ್ಲ ನನ್ನ ಬೆಂಬಲಕ್ಕೆ ಸಹಾಯಕ್ಕೆ ಅವರು ನಿಲ್ತಾರೆ ಎಂದು ಹೇಳಿದ್ದಾರೆ. ಆ ಭರವಸೆ ಇದೆ ಹಾಗಂತ ನಾವು ಅವರ ದುರ್ಬಳಕೆಯನ್ನು ಮಾಡಿಕೊಳ್ಳಬಾರದು, ಪದೇ ಪದೇ ಅವರಿಗೆ ಕಿರಿಕಿರಿ ಕೊಡಬಾರದು ಹಾಗೊಂಮದು ವೇಳೆ ಆ ಪರಿಸ್ಥಿತಿ ಬಂದರೆ ಮುಂದೆ ನೋಡೋಣ ಎಂದು ಕೂಡ ಹರೀಶ್ ರಾಯ್ ಹೇಳಿದ್ದಾರೆ.


Click it and Unblock the Notifications











