ಮತ್ತೆ ಬೇಕು ಅಂದ್ರೆ ಸಿಗಲ್ಲ, 'ಲಕ್ಕಿಮ್ಯಾನ್' ಚಿತ್ರವನ್ನು ಅಪ್ಪಿಕೊಂಡು ಅನುಭವಿಸಿ: ಸುದೀಪ್ ಭಾವುಕ
ತಿಂಗಳುಗಳೇ ಕಳೆದರೂ ಅಪ್ಪು ಅಗಲಿಕೆಯ ನೋವು ಕರಗುತ್ತಿಲ್ಲ. ಅಪ್ಪು ನೆನೆಯದೆ ಯಾವುದೇ ಸಿನಿಮಾಗಳ ಕಾರ್ಯಕ್ರಮಗಳು ಶುರುವಾಗುವುದಿಲ್ಲ. ಇನ್ನು ಪುನೀತ್ ರಾಜ್ಕುಮಾರ್ ನಟಿಸಿದ ಸಿನಿಮಾ ಸಮಾರಂಭಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು. 'ಲಕ್ಕಿಮ್ಯಾನ್' ಸಿನಿಮಾ ಆಡಿಯೋ ಹಾಗೂ ಟ್ರೈಲರ್ ಲಾಂಚ್ ಈವೆಂಟ್ನಲ್ಲೂ ಮೌನವೇ ರಾಜಭಾರ ಮಾಡುತ್ತಿತ್ತು. ಯಾರಿಗೂ ಮಾತುಗಳೇ ಹೊರಳುತ್ತಿರಲಿಲ್ಲ. ಅಪ್ಪು ಅಗಲಿಕೆಯ ನೋವು ಕಾಡುತ್ತಲೇ ಇತ್ತು. ಎಲ್ಇಡಿ ಸ್ಕ್ರೀನ್ನಲ್ಲಿ ಅಪ್ಪು ಫೋಟೊ, ವಿಡಿಯೋ ಬಂದಾಗಲೆಲ್ಲಾ ದುಃಖ ಉಮ್ಮಳಿಸಿ ಬರುತ್ತಿತ್ತು. "ಮತ್ತೆ ಬೇಕು ಅಂದ್ರೆ ಸಿಗಲ್ಲ, ತಬ್ಬಿಕೊಂಡು 'ಲಕ್ಕಿಮ್ಯಾನ್' ಸಿನಿಮಾ ಕಣ್ತುಂಬಿಕೊಳ್ಳಿ" ಎಂದು ಸುದೀಪ್ ಭಾವುಕರಾದರು.
ನಿನ್ನೆ(ಆಗಸ್ಟ್ 23) ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಾದ್ಶಾ ಕಿಚ್ಚ ಸುದೀಪ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್, ಯುವರಾಜ್ ಕುಮಾರ್, ಸಾಧು ಕೋಕಿಲ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂದೇಶ್ ನಾಗರಾಜ್, ತಮಿಳಿನ ಪ್ರಭುದೇವ, ವಿಜಯ್ ಅಂಟೋನಿ, ರಾಜ್ ಸುಂದರಂ ಹಾಗು ಪ್ರಭುದೇವ ತಂದೆ ಮುಗೂರು ಸುಂದರಂ ಭಾಗವಹಿಸಿದ್ದರು. ಕಿಚ್ಚ ಸುದೀಪ್ 'ಲಕ್ಕಿ ಮ್ಯಾನ್' ಸಿನಿಮಾ ಟ್ರೈಲರ್ ಲಾಂಚ್ ಮಾಡಿದ್ರೆ, ತಮಿಳು ನಟ ವಿಜಯ್ ಅಂಟೋನಿ ಸಾಂಗ್ ರಿಲೀಸ್ ಮಾಡಿದರು.
ವೇದಿಕೆ ಏರಿದವರೆಲ್ಲಾ ಅಪ್ಪು ನೆನೆದು ಮಾತನಾಡಲಾಗದೇ ಎರಡೆರಡು ಮಾತಾಡಿ ಮೌನಕ್ಕೆ ಜಾರಿದರು. ಸುದೀಪ್ ಮಾತನಾಡಿ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಆದಾಗ ಎರಡೂ ಕೈ ಅಗಲಿಸಿ ತಬ್ಬಿಕೊಂಡು ನೋಡಿ. ಯಾಕಂದರೆ ಮತ್ತೆ ಬೇಕು ಎಂದರೆ ಸಿಗುವುದಿಲ್ಲ. ಕೆಲವು ಇರಬೇಕಾದ್ರೆ ಬೆಲೆ ಕೊಡ್ತೀವಿ ಕೆಲವೊಂದಕ್ಕೆ ಕಳೆದುಕೊಂಡ ಮೇಲೆ ಜಾಸ್ತಿ ಬೆಲೆ ಕೊಡ್ತೀವಿ. ದೇವರು ಅನ್ನುವುದು ಎಲ್ಲಾ ನಂಬಿಕೆ. ಆ ವ್ಯಕ್ತಿ ಮನಸ್ಸಿನಿಂದ ಬಾಳಿದರು. ಇದ್ದರು. ನಿಜಕ್ಕೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀವಿ. ನಾನು ಹೇಳಿದಂತೆ ಮತ್ತೆ ಇಂತಹ ಅವಕಾಶ ಸಿಗೋದಿಲ್ಲ. ತಬ್ಬಿಕೊಂಡು ಸಿನಿಮಾವನ್ನು ಅನುಭವಿಸಿ" ಎಂದರು.

ಖ್ಯಾತ ನಟ, ಕೊರಿಯೋಗ್ರಫರ್ ಪ್ರಭುದೇವ ಮಾತನಾಡಿ "ನನ್ನ ತಮ್ಮನಿಗೆ ಹೀರೊ ಆಗಿ ನಮ್ಮ ತಂದೆ ಮೊದಲ ಅವಕಾಶ ಕೊಟ್ಟರು. ನನ್ನ ತಮ್ಮನಿಗೆ, ತಂಡಕ್ಕೆ ಶುಭವಾಗಲಿ. ಟ್ರೈಲರ್ ನೋಡ್ತಿದ್ದೆ ಅಪ್ಪು ಸರ್ ದೇವರು ಅಂದಾಗ ಭಾವುಕನಾದೆ. ವೀ ಮಿಸ್ ಯು ಅಪ್ಪು. ಒಮ್ಮೆ ಮಾತನಾಡುತ್ತಾ ಕೊರಿಯೋಗ್ರಫಿ ಮಾಡಲು ಕರೆದರೆ ಬರುತ್ತೀರಾ ಸರ್ ಎಂದರು. ಅಯ್ಯೋ ಖಂಡಿತ ಸರ್, ಎಲ್ಲಾ ಸಿನಿಮಾಗೂ ಕರೆ ಮಾಡಿ ಬರ್ತೀನಿ ಎಂದಿದ್ದೆ. ಮಿಸ್ ಯು ಅಪ್ಪು " ಎಂದು ಮಾತು ಮುಗಿಸಿದರು.

ಸೆಪ್ಟೆಂಬರ್ 9ಕ್ಕೆ 'ಲಕ್ಕಿಮ್ಯಾನ್' ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ಬಿಡುಗಡೆ ಅಗುತ್ತಿದೆ. ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಕಾಮಿಡಿ ಫ್ಯಾಂಟಸಿ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಲೀಡ್ ರೋಲ್ಗಳಲ್ಲಿ ಮಿಂಚಿದ್ದಾರೆ. ಪುನೀತ್ ರಾಜ್ಕುಮಾರ್ ದೇವರಾಗಿ ಕಾಣಿಸಿಕೊಂಡಿದ್ದಾರೆ. 'ಗಂಧದ ಗುಡಿ' ಸಾಕ್ಷ್ಯಚಿತ್ರ ಬಿಟ್ಟರೆ ಅಪ್ಪು ನಟಿಸಿರುವ ಕೊನೆಯ ಸಿನಿಮಾ 'ಲಕ್ಕಿಮ್ಯಾನ್'. ಈಗಾಗಲೇ ಸಿನಿಮಾ ಟ್ರೈಲರ್, ಸಾಂಗ್ಸ್ ಹಿಟ್ ಆಗಿದ್ದು, ಸುದೀಪ್ ಹೇಳಿದಂತೆ ಅಪ್ಪಿ ಸಿನಿಮಾವನ್ನು ಅನುಭವಿಸಲು ಕನ್ನಡ ಸಿನಿ ರಸಿಕರು ಕಾಯುತ್ತಿದ್ದಾರೆ.


Click it and Unblock the Notifications











