ಸಿಎಂ ಕುರ್ಚಿ ತಮಾಷೆಯಲ್ಲ, ಸಿನ್ಮಾ ಟಿಕೆಟ್ ವೋಟ್ ಆಗಿ ಪರಿವರ್ತನೆ ಆಗೋದು ಸುಲಭವಲ್ಲ- ಸುದೀಪ್
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಸಾಕಷ್ಟು ಜನ ರಾಜಕೀಯರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಚುನಾವಣೆ ಪ್ರಚಾರಗಳಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ. ಸಾಕಷ್ಟು ಜನ ಅವರನ್ನು ರಾಜಕೀಯರಂಗಕ್ಕೆ ಕರೆತರಲು ಪ್ರಯತ್ನಿಸಿದ್ದು ಇದೆ. ಆದರೆ ಸುದೀಪ್ ಸಿನಿಮಾ ಬಿಟ್ಟು ಬರಲ್ಲ ಎಂದುಬಿಟ್ಟಿದ್ದಾರೆ.
'ಮಾರ್ಕ್' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ R-ಕನ್ನಡ ವಾಹಿನಿ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ಗಳ ಕುರಿತು ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ. ನೀವು ಮುಖ್ಯಮಂತ್ರಿ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆ ಎನ್ನುವ ನೇರ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ. 'ಮಾರ್ಕ್' ಚಿತ್ರದಲ್ಲಿ ಕೂಡ ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳಿವೆ. ಮುಖ್ಯಮಂತ್ರಿ ಬದಲಾವಣೆ ವಿಚಾರಗಳಿವೆ. ರಾಜ್ಯದಲ್ಲಿ ಕೂಡ ಸಿಎಂ ಬದಲಾವಣೆ ವಿಚಾರ ಚರ್ಚೆ ಜೋರಾಗಿದೆ. ಈ ಬಗ್ಗೆ ಕೇಳಿದ್ದಕ್ಕೆ ಸುದೀಪ್ ಇದಕ್ಕೂ ಸಿನಿಮಾ ಕಥೆಗೂ ಸಂಬಂಧವಿಲ್ಲ ಎಂದಿದ್ದಾರೆ.

ನೆಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದವರು ಸಿಎಂ ಆಗುವ ಬಗ್ಗೆ ಚರ್ಚೆ ನಡೀತಿದೆ. ಸುದೀಪ್ ಅವರು ಸಿನಿಮಾ ಮೂಲಕ ಏನಾದರೂ ಮೆಸೇಜ್ ಕೊಡ್ತಿದ್ದಾರಾ? ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರಿಸಿ "ನಿಜ ಹೇಳಬೇಕು ಅಂದ್ರೆ ನನಗೆ ಆ ವ್ಯಕ್ತಿ(ಡಿಸಿಎಂ ಡಿ. ಕೆ ಶಿವಕುಮಾರ್) ಬಗ್ಗೆ ಬಹಳ ಪ್ರೀತಿಯಿದೆ. ಅವ್ರು ಮಾತನಾಡಿದ್ದರು ರೀಚ್ ಆಗಬೇಕಿದ್ದ ಕಡೆ ರೀಚ್ ಆಗಲಿಲ್ಲ. ಅದನ್ನು ಹಾಕಿಕೊಟ್ಟ ವ್ಯಕ್ತಿ ಸೈಲೆಂಟ್ ಆಗಿ ಹೋಗಿಬಿಟ್ರು. ಇವ್ರು ಹೇಳಿ ತಗ್ಲಾಕಿಕೊಂಡ್ರು. ಅವ್ರು ಅಂತಹ ವ್ಯಕ್ತಿ ಅಲ್ಲ, ಚಿತ್ರರಂಗಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ" ಎಂದಿದ್ದಾರೆ.
ನೀವು ಸಿಎಂ ಆಗಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ "ಅಭಿಮಾನಿಗಳು ಆಸೆಪಡುವುದರಲ್ಲಿ ತಪ್ಪಿಲ್ಲ. ಆದರೆ ಆ ಸ್ಥಾನಕ್ಕೆ ತೂಕ ಇದೆ. ಯಾರು ಬೇಕಾದರೂ ಆ ಸ್ಥಾನ ಪಡೆಯಲು ಸಾಧ್ಯವಿಲ್ಲ. ಅದಕ್ಕೆ ಬಹಳ ಶ್ರಮ ಬೇಕು. ಸಿನಿಮಾದಲ್ಲಿ ಹೆಸರು ಮಾಡಿದ್ದೀವಿ ಅಂದ ಮಾತ್ರಕ್ಕೆ ಆಗಿಬಿಡ್ತೀವಿ ಎನ್ನುವುದಕ್ಕೆ ಆಗಲ್ಲ. ಬಹಳ ಜವಾಬ್ದಾರಿಗಳಿವೆ. ಬಹಳ ವರ್ಷ ಶ್ರಮಪಟ್ಟವರು ಆ ಸ್ಥಾನಕ್ಕೆ ಹೋಗಿದ್ದಾರೆ. ಅಭಿಮಾನಿಗಳು ಹೇಳಿದಂತೆ ನಡೆಯಲ್ಲ. ರಾಜಕೀಯಕ್ಕೆ ಬರಲೇಬೇಕು ಅಂದಾಗ ಬರೋಣ. ಅದಕ್ಕೆ ಕೆಲಸ ಮಾಡಬೇಕು ಮಾಡೋಣ. ಅಷ್ಟು ಸುಲಭವಾಗಿ ಸಿಗುವ ಸ್ಥಾನ ಅಲ್ಲ ಅದು. ಅಭಿಮಾನಿಗಳು ಹೇಳಿದಾಕ್ಷಣ ಆಗುವಂಥದ್ದಲ್ಲ" ಎಂದು ಸುದೀಪ್ ತಿಳಿಸಿದ್ದಾರೆ.

ಮಾತು ಮುಂದುವರೆಸಿರುವ ಸುದೀಪ್ "ಜನಕ್ಕೆ ನಂಬಿಕೆ ಬರಬೇಕು, ಜನಕ್ಕೆ ನಂಬಿಕೆ ಬರುವಂಥದ್ದು ಏನಾದರೂ ಮಾಡ್ಬೇಕು. ಸಿನಿಮಾ ಜನಪ್ರಿಯತೆ ನೋಡಿ ಜನ ವೋಟ್ ಹಾಕುತ್ತಾರೆ ಎನ್ನುವುದು ತಪ್ಪು. ನಮ್ಮ ಪ್ರಪಂಚ ಬೇರೆ, ಆ ಪ್ರಪಂಚ ಬೇರೆ. ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಬಂದಾಗ ಅವರ ವೋಟಿಂಗ್ ಬ್ಯಾಂಕ್ ಇಲ್ಲಿ ಸಿನಿಮಾ ಟಿಕೆಟ್ ಆಗಿ ಕನ್ವರ್ಟ್ ಆಗಿಲ್ಲ.. ಅದೇ ರೀತಿ ನಾವು ಕಲಾವಿದರು ಇಲ್ಲಿ ಏನೋ ಸಾಧಿಸಿದ್ದೀವಿ ಎಂದು ಚುನಾವಣೆಗೆ ಹೋದಾಗ ಸಿನಿಮಾ ಟಿಕೆಟ್ ಕೂಡ ವೋಟ್ ಆಗಿ ಕನ್ವರ್ಟ್ ಆಗಿಲ್ಲ. ಎರಡೂ ಕೂಡ ಬೇರೆ ಬೇರೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು" ಎಂದು ವಿವರಿಸಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಿಸಿದ್ದಾರೆ. ಸೂಪರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್ನಲ್ಲೇ ಈ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಹಾಡು, ಟೀಸರ್, ಟ್ರೈಲರ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಮೂಡಿಸಿದೆ. ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಸಿನಿಮಾ ವಿತರಣೆ ಮಾಡುತ್ತಿದೆ.


Click it and Unblock the Notifications











