ಸಿಸಿಎಲ್ ಪಂದ್ಯದ ವೇಳೆ ಅವಾಚ್ಯ ಪದ ಬಳಕೆ, ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್
ಇತ್ತೀಚೆಗೆ ಸಿಸಿಎಲ್ ಪಂದ್ಯದ ವೇಳೆ ಕಿಚ್ಚ ಸುದೀಪ್ ಬಳಸಿದ್ದ ಅವಾಚ್ಯ ಪದ ವೈರಲ್ ಆಗಿ ಚರ್ಚೆ ಹುಟ್ಟುಹಾಕಿತ್ತು. ಬಿಗ್ಬಾಸ್ ಮನೆಯಲ್ಲಿ ಬಳಸು ಪದಗಳ ಬಗ್ಗೆ ಸುದೀಪ್ ಕ್ಲಾಸ್ ತಗೋತ್ತಾರೆ. ಮೈದಾನದಲ್ಲಿ ಅವರು ಹೀಗೆ ಮಾತನಾಡಬಹುದಾ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಸಿಸಿಎಲ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸುದೀಪ್ ವಿವರಣೆ ಕೊಟ್ಟಿದ್ದಾರೆ.
ಭೋಜ್ಪುರಿ ದಬಾಂಗ್ಸ್ ವಿರುದ್ಧದ ಪಂದ್ಯದಲ್ಲಿ ಸುದೀಪ್ ಒಂದು ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡಿದ್ದರು. ಕರ್ನಾಟಕ ಬುಲ್ಡೋಜರ್ಸ್ ಪರ ಮಂಜುನಾಥ್ 15ನೇ ಓವರ್ ಬೌಲಿಂಗ್ ಮಾಡಿದ್ದರು. ಮೊದಲ ಎಸೆತದಲ್ಲಿ ಎದುರಾಳಿ ತಂಡದ ಆಟಗಾರ ಸಿಕ್ಸರ್ ಸಿಡಿಸಿದ್ದರು. 2ನೇ ಬಾಲ್ ವೈಡ್ ಆದಾಗ ಸುದೀಪ್ ಗರಂ ಆಗಿದ್ದರು. ಜೋರಾಗಿ ಚೆಂಡು ಎಸೆಯಲು ಯಾಕೆ ಯತ್ನಿಸುತ್ತಿದ್ದೀಯಾ? ಹೀಗೆ ಆದ್ರೆ ಪಂದ್ಯ ಸೋಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ವೇಳೆ ಆ ಕೆಟ್ಟ ಪದ ಬಳಸಿದ್ದರು. ಆ ವೀಡಿಯೋ ರೀಲ್ಸ್ ರೂಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೆದಿತ್ತು.

ಸುದೀಪ್ ಮಾತನಾಡಿ "ಅದು ಕೋಪದಲ್ಲಿ ಬಂದ ಮಾತಲ್ಲ. ಫ್ಲೋನಲ್ಲಿ ಬಂದಿದ್ದು. ಅದನ್ನು ತಂಡದವರೆಲ್ಲಾ ಬಹಳ ಮಜಾ ತಗೊತ್ತಾರೆ. ಆ ಸಮಯದಲ್ಲಿ ಮಂಜುಗೆ ನೋಡಪ್ಪಾ ಇದೇ ರೀತಿ ಬೌಲಿಂಗ್ ಮಾಡ್ತಿದ್ರೆ, ನಮ್ಮ ಜೀವನ ಹಾಳಾಗುತ್ತೆ ಅನ್ನೋಕ್ಕಾಗುತ್ತಾ. ಅವ್ರಿಗೆ ಅರ್ಥ ಆಗುವಂತೆ ಹೇಳ್ದೆ. ಬಳಿಕ 2 ವಿಕೆಟ್ ತೆಗೆದ್ರು" ಎಂದು ಸುದೀಪ್ ನಕ್ಕಿದ್ದಾರೆ.
ಸಾಗರ್ ಕ್ಯಾಚ್ ಬಿಟ್ಟಾಗ, ನೋಡಪ್ಪಾ ಸಾಗರ್ ಕ್ಯಾಚ್ ಬಿಟ್ಟರೆ ಹೀಗಾಗುತ್ತೆ ಎಂದು ಹೇಳೋಕೆ ಆಗಲ್ಲ. ಆಗ ಯಾವ ರೀತಿ ಹೇಳಬೇಕೋ ಹೇಳ್ತೀವಿ. ಒಂದೇ ಪದದಲ್ಲಿ ಅರ್ಥ ಆಗುತ್ತೆ. ಬಿಗ್ಬಾಸ್ ಅಲ್ಲಿ ಎಂತೆಂಥ ಡೈಲಾಗ್ ಹೇಳ್ದೆ. ಆದರೆ ಇದೊಂದು ಡೈಲಾಗ್ ಇನ್ಸ್ಟಾಗ್ರಾಮ್ನಲ್ಲೆಲ್ಲಾ ವೈರಲ್ ಆಗಿದೆ. ಎಷ್ಟೋ ಕಲಾವಿದರು, ಅವರ ಮನೆಯವರು ಈ ವಿಡಿಯೋ ನೋಡಿ ಸುದೀಪ್ ಅಭಿಮಾನಿ ಆಗಿಬಿಟ್ಟಿದ್ದೀನಿ ಅಂತಿದ್ದಾರಂತೆ. ಹೆಂಗೆ ಅಂತ ನನಗೆ ಅರ್ಥವಾಗಲಿಲ್ಲ ಎಂದು ಸುದೀಪ್ ಫನ್ನಿಯಾಗಿ ಉತ್ತರಿಸಿದ್ದಾರೆ.

ಎಲ್ಲರೂ ಇದೇ ತರ ಮಾತಾಡ್ತಾರೆ. ಮ್ಯಾಚ್ ವೇಳೆ ಅದೆಲ್ಲಾ ಸಹಜ. ಅಂತರಾಷ್ಟ್ರೀಯ ಪಂದ್ಯಗಳ ವೇಳೆ ಕೂಡ ಇಂತಹ ಮಾತುಗಳು ಬರ್ತಾವೆ. ಅದನ್ನೆಲ್ಲಾ ಕೇಳಿಕೊಳ್ಳಬಾರದು. ಅಲ್ಲಿಗೆ ಬಿಟ್ಟು ಬಿಡಬೇಕು. ವೈಯಕ್ತಿಕವಾಗಿ ಯಾರಿಗೂ ಬೈಯ್ಯುವ ವೇದಿಕೆ ಅಲ್ಲ ಅದು, ಮೈದಾನ. ಅಲ್ಲಿ ಹೇಗೆ ಹೇಳಬೇಕೋ ಅದೇ ರೀತಿ ಹೇಳಬೇಕು. ಇನ್ನು ತಪ್ಪು ಮಾಡಿದಾಗ ಸಹ ಆಟಗಾರರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಸುದೀಪ್ ತಮಾಷೆಯಾಗಿ ವಿವರಿಸಿದ್ದಾರೆ. ಕೆಲವರು ಹೊಸಬರು, ಬೈಸಿಕೊಳ್ತಾರೆ ಎಂದು ಸುದೀಪ್ ಹೇಳಿದ್ದಾರೆ.
ನನ್ನ ಬಳಿ ಇಷ್ಟು ಬೈಸಿಕೊಳ್ತಾರೆ ತಮ್ಮ ತಂಡದವರು. ಆದರೆ ಬೇರೆಯವರು ಯಾರಾದರೂ ಒಬ್ಬರೂ ನಮ್ಮ ತಂಡದ ಕಡೆ ಬೆರಳು ಮಾಡಿ ತೋರಿಸಲಿ ನೋಡೋಣ. ಹೋಟೆಲ್ ಇಂದ ಮೈದಾನದವರೆಗೆ ಕರ್ನಾಟಕ ಬುಲ್ಡೋಜರ್ಸ್ ಅಂದರೆ ಎಲ್ಲರೂ ಮೈಲಿ ದೂರ ಇರ್ತಾರೆ. ಯಾರು ಹತ್ತಿರ ಬರಲ್ಲ, ಯಾಕಂದ್ರೆ ಅಷ್ಟು ಒಳ್ಳೆಯವರು ನಾವು ಎಂದು ಸುದೀಪ್ ತಿಳಿಸಿದ್ದಾರೆ.
ಇನ್ನು ಪುನೀತ್ ರಾಜ್ಕುಮಾರ್ ಸೇರಿದಂತೆ ಕನ್ನಡ ಕಲಾವಿದರು, ತಂತ್ರಜ್ಞರ ಬಗ್ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಾಲಿಗೆ ಹರಿಬಿಟ್ಟ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರಿಸಲು ನಿರಾಕರಿಸಿದರು. ಅದಕ್ಕೆ ಬೇರೆ ವೇದಿಕೆ ಇದೆ. ಅಲ್ಲಿ ಮಾತನಾಡೋಣ ಎಂದರು. 12 ವರ್ಷಗಳ ಬಳಿಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಈ ಹಿಂದೆ 2 ಬಾರಿ ತಂಡ ಚಾಂಪಿಯನ್ ಆಗಿತ್ತು. ಇದು 3ನೇ ಬಾರಿ.


Click it and Unblock the Notifications











