Mango Pachcha: ಕಿಚ್ಚನ ಸೋದರಳಿಯ ಸಂಚಿತ್ ಸಂಜೀವ್ ಸಿನಿಮಾ 'ಮ್ಯಾಂಗೋ ಪಚ್ಚ' ಹಾಡು ಟ್ರೆಂಡಿಂಗ್;ಹೇಗಿದೆ "ಹರಿಸಿರವ್ವ"?
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಯುವ ನಿರ್ದೇಶಕ ವಿವೇಕಾ ಈ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದು, ಇವರೇ ಈ ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನು ಸಹ ಬರೆದಿದ್ದಾರೆ. ಇಲ್ಲಿವರೆಗೂ ಈ ಸಿನಿಮಾದ ಲುಕ್ ಹಾಗೂ ತುಣುಕು ಸದ್ದು ಮಾಡಿದ್ದವು. ಈಗ ಮೊದಲ ಹಾಡು ಕಿಕ್ ಕೊಡುತ್ತಿದೆ.
ಈ ಸಿನಿಮಾವನ್ನು ಹೆಸರಾಂತ ನಿರ್ಮಾಣ ಸಂಸ್ಥೆಗಳಾದ ಕೆಆರ್ಜಿ ಸ್ಟುಡಿಯೋಸ್ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಗಳು ನಿರ್ಮಿಸಿವೆ. ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ಪ್ರಿಯಾ ಸುದೀಪ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದು ಸಂಚಿತ್ ಸಂಜೀವ್ ಅವರ ಮೊದಲ ಸಿನಿಮಾ ಆಗಿದೆ. ಅದ್ಧೂರಿಯಾಗಿ ನಿರ್ಮಾಣ ಆಗಿರುವ ಈ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳಿವೆ.

ಕಿಚ್ಚ ಸುದೀಪ್ ಹೆಜ್ಜೆಯನ್ನೇ ಸಂಚಿತ್ ಸಂಜೀವ್ ಇಟ್ಟಿದ್ದಾರೆ. ಕಿಚ್ಚ ಕೂಡ ತಮ್ಮ ಪರಂಪರೆಯನ್ನು ಮುಂದುವರಿಸಲು ಅಕ್ಕನ ಮಗನನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. 'ಮ್ಯಾಂಗೋ ಪಚ್ಚ'ದಲ್ಲಿ ಸಂಚಿತ್ ಸಂಜೀವ್ ಶಿಸ್ತು ಹಾಗೂ ಡೆಡಿಕೇಷನ್ ಎದ್ದು ಕಾಣುತ್ತಿದ್ದು, ಈ ಸಿನಿಮಾ ಮೊದಲ ಹಾಡು ಅದಕ್ಕೆ ಸಾಕ್ಷಿಯಾಗಿದೆ. ಚರಣ್ ರಾಜ್ ಕಂಪೋಸ್ ಮಾಡಿರುವ "ಹಸಿರವ್ವ.." ಅನ್ನೋ ಹಾಡು ವೈರಲ್ ಆಗಿದೆ.
'ಮ್ಯಾಂಗೋ ಪಚ್ಚ' ಸಿನಿಮಾದಲ್ಲಿ ಸಂಚಿತ್ ಸಂಜೀವ್ ನಾಯಕನಾಗಿ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಸಂಚಿತ್ ಪಾತ್ರದ ಹೆಸರು "ಪಚ್ಚ". ಸಂಚಿತ್ ಸಂಜೀವ್ಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸುತ್ತಿದ್ದು, ಈ ಸಿನಿಮಾದಲ್ಲಿ 'ಸುಜಿ' ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದುಗೆ ಮಯೂರ್ ಪಟೇಲ್ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇವರೊಂದಿಗೆ ಕನಸಿನ ರಾಣಿ, ಹಿರಿಯ ನಟಿ ಮಾಲಾಶ್ರೀ ಕೂಡ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಹಂಸ ಪ್ರತಾಪ್, ಜೈ ಗೋಪಿನಾಥ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿ ಇದೆ. ಮೈಸೂರಿನಲ್ಲಿ ನಡೆಯುವ ಕಥೆಯಾಗಿದ್ದರಿಂದ ಈ ಸಿನಿಮಾ ಕುತೂಹಲವನ್ನು ಕೆರಳಿಸಿದೆ. ಅಲ್ಲದೆ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕ ನಟ ಸಿಗಬಹುದೆಂಬ ನಿರೀಕ್ಷೆಯಿದೆ.

ಟ್ರೆಂಡ್ ಆಗುತ್ತಿದೆ 'ಹಸಿರವ್ವ'
'ಮ್ಯಾಂಗೋ ಪಚ್ಚ' ಚಿತ್ರದ 'ಹಸಿರವ್ವ' ಹಾಡು ಇಂದು (ನವೆಂಬರ್ 26) ರಿಲೀಸ್ ಆಗಿದೆ. ಚರಣ್ ರಾಜ್ ಟ್ಯೂನ್ ಹಾಕಿರುವ ಈ ಹಾಡು ಈಗಾಗಲೇ ಟ್ರೆಂಡಿಂಗ್ನಲ್ಲಿ ಇದೆ. ಸಿದ್ಧಾರ್ಥ್ ಬೆಳ್ಮಣ್ಣು ಅವರ ಮಧುರ ಗಾಯನ ಕೇಳುಗರಿಗೆ ಇಷ್ಟವಾಗಿದೆ. ವಿವೇಕ ಅವರು ಈ ಹಾಡಿಗೆ ಉತ್ತಮ ಸಾಹಿತ್ಯ ಬರೆದಿದ್ದಾರೆ. 'ನಮ್ಮವ್ವ ಹಸಿರವ್ವ' ಎಂಬ ಸಾಲು ಈ ಹಾಡಿನ ಪ್ರಮುಖ ಆಕರ್ಷಣೆಯಾಗಿದ್ದು, ಈ ಗೀತೆಯು ಯೂಟ್ಯೂಬ್ನಲ್ಲಿ ಲಕ್ಷಾಂತರ ವೀವ್ಸ್ ಪಡೆದಿದೆ. ಈ ಮೂಲಕ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಚಿತ್ರದ ಕಥಾ ಹಂದರ
'ಮ್ಯಾಂಗೋ ಪಚ್ಚ' ಒಂದು ಕ್ರೈಮ್ ಡ್ರಾಮಾ ಮತ್ತು ಥ್ರಿಲ್ಲರ್ ಸಿನಿಮಾ. ಈ ಚಿತ್ರವು ಮೈಸೂರು ನಗರದ ಹಿನ್ನೆಲೆಯಲ್ಲಿ ಸಾಗುತ್ತದೆ. 2001 ರಿಂದ 2011 ರವರೆಗಿನ ಘಟನೆಗಳನ್ನು ಆಧರಿಸಿದೆ. ಮೈಸೂರಿನ ರೋಚಕ ಜಗತ್ತನ್ನು ತೆರೆಮೇಲೆ ತೋರಿಸಲಿದೆ. ಕೆಲವು ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದರಿಂದ ಮೈಸೂರಿನ ಸುಂದರ ತಾಣಗಳ ಜೊತೆಗೆ ಕಥೆ ಪ್ರೇಕ್ಷಕರಿಗೆ ಕಿಕ್ ಕೊಡಲಿದೆ ಎಂಬ ನಿರೀಕ್ಷೆಯಿದೆ.


Click it and Unblock the Notifications











