ಸೈಲೆಂಟಾಗಿ ಸೆಟ್ಟೇರಿದ ಸುದೀಪ್ 'ಸೆಂಟಿಮೆಂಟ್' ಚಿತ್ರ
ಕಿಚ್ಚ ಸುದೀಪ್ ಅವರ ಹೊಚ್ಚ ಹೊಸ ಚಿತ್ರದ ಮುಹೂರ್ತ ಗುರುವಾರ ಬೆಳಗ್ಗೆ ರಾಜಾಜಿನಗರದ ಮೋದಿ ಆಸ್ಪ್ರತೆ ಬಳಿಯಿರುವ ಗಣೇಶ ದೇಗುಲದಲ್ಲಿ ಸರಳವಾಗಿ ನೆರವೇರಿದೆ. ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ನಡೆದ ಈ ಪೂಜಾ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕರು ಉಪಸ್ಥಿತರಿದ್ದರು. ಚಿತ್ರಕ್ಕೆ ಶುಭ ಹಾರೈಸಲು ಯೋಗಿ, ಹರಿಕೃಷ್ಣ, ಡಾ. ನಾಗೇಂದ್ರ ಪ್ರಸಾದ್ ಬಂದಿದ್ದರು.
ಅಂದ ಹಾಗೆ, ಇವತ್ತಿಗೆ ತೆಲುಗಿನಿಂದ ರಿಮೇಕ್ ಮಾಡಿರುವ ಕನ್ನಡದ ಮಾಣಿಕ್ಯ ಚಿತ್ರ ಯಶಸ್ವಿ ಪ್ರದರ್ಶನ ಕಂಡು 50 ದಿನಗಳನ್ನು ಪೂರೈಸಿದೆ. ಕೌಟುಂಬಿಕ ಮೌಲ್ಯಗಳು, ಅಪ್ಪನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಗನಾಗಿ ಕಿಚ್ಚ ಸುದೀಪ್ ನಟಿಸಿರುವುದು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ.
ಇದರ ಯಶಸ್ಸಿನ ಬೆನ್ನಲ್ಲೇ ಸುದೀಪ್ ಅವರು ಮತ್ತೆ ಸೆಂಟಿಮೆಂಟ್ ಸಬ್ಜೆಕ್ಟ್ ಉಳ್ಳ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸಭ್ಯ ಖಳನಟ ದಿವಂಗತ ಸುಧೀರ್ ಅವರ ಪುತ್ರ, ಯಶಸ್ವಿ ನಿರ್ದೇಶಕ ನಂದಕಿಶೋರ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಕೂಡಾ ರಿಮೇಕ್ ಆಗಿದೆ. [ಮಾಣಿಕ್ಯ ಚಿತ್ರವಿಮರ್ಶೆ]

ಫ್ಯಾಮಿಲಿ ಆಡಿಯನ್ಸ್ ಉದ್ದೇಶವಾಗಿಟ್ಟುಕೊಂಡು ಪವನ್ ಕಲ್ಯಾಣ್ ಪ್ರಧಾನ ಭೂಮಿಕೆಯಲ್ಲಿ ತೆರೆಗೆ ಬಂದ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಈಗ ಕನ್ನಡದಲ್ಲಿ ಸೆಟ್ಟೇರಿದೆ. ಚಿತ್ರದ ಹೆಸರೇನೋ ಗೊತ್ತಿಲ್ಲ. ಅತ್ತೆ ಮನೆ ದಾರಿ ಯಾವುದು? ಎಂಬ ಕೆಟ್ಟ ಟೈಟಲ್ ಅಂತೂ ಇಡುವುದಿಲ್ಲ ಬಿಡಿ.
ಮತ್ತೆ ಇವತ್ತಿನ ಕಾರ್ಯಕ್ರಮದ ವಿಷಯಕ್ಕೆ ಬಂದರೆ, ಕಿಚ್ಚ ಸುದೀಪ್ ಅವರು ಯಾಕೋ ಬಂದಿರಲಿಲ್ಲ. ಬಹುಶಃ ಬಿಗ್ ಬಾಸ್ ಬಿಸಿಯಲ್ಲಿದ್ದಾರೆನೋ..ಜೂ. 29ರಿಂದ ಬಿಗ್ ಬಾಸ್ ಸೀಸನ್ 2 ಆರಂಭಗೊಳ್ಳಲಿದ್ದು ಸುವರ್ಣ ವಾಹಿನಿಯಲ್ಲಿ ಮತ್ತೆ ಸುದೀಪ್ ನಿರೂಪಣೆ ನೋಡಬಹುದು.
ಮಾಣಿಕ್ಯ ಚಿತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ಅಪ್ದೇಡ್ ಮಾಡಿರುವ ಸುದೀಪ್ ಅವರು ಯಾಕೋ ನಂದಕಿಶೋರ್ ಚಿತ್ರ ಸೆಟ್ಟೇರಿರುವುದರ ಬಗ್ಗೆ ಬರೆದುಕೊಂಡಿಲ್ಲ. ರಿಮೇಕ್, ಸ್ವಮೇಕ್, ನೆಟಿವೆಟಿ ಎಲ್ಲಾ ನನಗೆ ಗೊತ್ತಿಲ್ಲ. ಜನಕ್ಕೆ ಬೇಕಾದ್ದು ಮನರಂಜನೆ ಅದನ್ನು ನಾನು ನೀಡಲು ಯತ್ನಿಸುತ್ತಿದ್ದೇನೆ ಅಷ್ಟೇ ಎನ್ನುವುದು ಸುದೀಪ್ ವಾದ. ಎನಿ ವೇ, ಟಾಲಿವುಡ್ ನಲ್ಲಿ ಬಾಹುಬಾಲಿ ಚಿತ್ರೀಕರಣ ಮುಗಿಸಿರುವ ಕಿಚ್ಚ, ಕಾಲಿವುಡ್ ನಲ್ಲಿ ವಿಜಯ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್, ಸ್ಯಾಂಡಲ್ ವುಡ್ ಸುದೀಪ್ ನ ಲಿಸ್ಟ್ ನಲ್ಲಿ ಪ್ರಮುಖ ಆದ್ಯತೆಯಾಗಿದೆ.


Click it and Unblock the Notifications











