ಪರಭಾಷೆಯ ಸ್ಟಾರ್ ನಟರು ಕನ್ನಡದಲ್ಲಿ ಯಾಕೆ ನಟಿಸಲ್ಲ- ಕಿಚ್ಚ ಸುದೀಪ್ ಅಸಮಾಧಾನ
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಸ್ಟಾರ್ ನಟರು ಭಾಷೆಯ ಗಡಿ ಮೀರಿ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವುದು ಹೆಚ್ಚಾಗಿದೆ. ಆದರೆ ಕಿಚ್ಚ ಸುದೀಪ್ ಬಹಳ ಹಿಂದಿನಿಂದಲೂ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದವರು. ಇತ್ತೀಚೆಗೆ ಶಿವಣ್ಣ, ಉಪೇಂದ್ರ ಕೂಡ ತೆಲುಗು, ತಮಿಳು ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದಾರೆ. ಆದರೆ ಪರಭಾಷೆಯ ನಟರು ಯಾಕೆ ಕನ್ನಡದಲ್ಲಿ ನಟಿಸೋಕೆ ಒಪ್ಪಲ್ಲ ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.
ಹೀಗೆ ಸ್ಟಾರ್ ನಟರು ಬೇರೆ ಭಾಷೆ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸೋದು ದಶಕಗಳಿಂದ ನಡೆದುಕೊಂಡು ಬಂದಿದೆ. ತೆಲುಗು, ತಮಿಳು, ಬಾಲಿವುಡ್ ಕಲಾವಿದರು ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸಿರುವುದು ಇದೆ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಕನ್ನಡದಲ್ಲಿ ಯಾವುದೇ ದೊಡ್ಡ ನಟ ಬಂದು ನಟಿಸಿಲ್ಲ. ಇದೇ ವಿಚಾರದ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಖುದ್ದು ನಾನೇ ಕೇಳಿದ್ರು ಯಾರು ಒಪ್ಪುತ್ತಿಲ್ಲ ಎಂದಿದ್ದಾರೆ. ಗಲಾಟ ತಮಿಳು ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

"ನಾನು ಸ್ನೇಹಕ್ಕಾಗಿ ಬೇರೆ ಭಾಷೆಗಳಲ್ಲಿ ನಟಿಸಿದ್ದೀನಿ. ನಾನು ನಟಿಸಬೇಕು ಎಂದು ಕೇಳಿಕೊಂಡಾಗ ಈ ಪಾತ್ರಕ್ಕೆ ನೀವೇ ಸೂಕ್ತ ಎಂದಾಗ ನಾನು ಹೋಗಿದ್ದೇನೆ. ವಿಜಯ್ ಅವರಿಗಾಗಿ 'ಪುಲಿ' ಚಿತ್ರದಲ್ಲಿ ನಟಿಸಿದ್ದು. ಸಲ್ಮಾನ್ ಖಾನ್ ನಮ್ಮ ಫ್ಯಾಮಿಲಿ ರೀತಿ. ಅವರಿಗೋಸ್ಕರ ಸಂಭಾವನೆ ಪಡೆಯದೇ 'ದಬಾಂಗ್- 3' ಚಿತ್ರದಲ್ಲಿ ನಟಿಸಿದ್ದೆ. ಕನ್ನಡದಲ್ಲಿ ನಾನು ಹೀರೊ ಆಗಿದ್ದು ಬೇರೆ ಭಾಷೆಗಳಲ್ಲಿ ವಿಲನ್ ಆಗಿ ಅಲ್ಲಿನ ನಟರ ಕೈಯಿಂದ ಒದೆ ತಿನ್ನುವಂತೆ ನಟಿಸೋದು ಅಭಿಮಾನಿಗಳಿಗೆ ಬೇಸರವಾಗುತ್ತದೆ ನಿಜ. ಅದಕ್ಕಿಂತಲೂ ಬೇಸರ ಸಂಗತಿ ಮತ್ತೊಂದಿದೆ ಎಂದು ಸುದೀಪ್ ಹೇಳಿದ್ದಾರೆ.
ನಾನು, ಶಿವಣ್ಣ ಸರ್ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸ್ತಿದ್ದೀವಿ. ಅದೇ ರೀತಿ ಬೇರೆ ಭಾಷೆಯ ಕಲಾವಿದರು ಇಲ್ಲಿ ಬಂದು ನಟಿಸ್ತಾರೆ ಎಂದು ಬಯಸುತ್ತೇವೆ. ಅದು ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಸುದೀಪ್ ಪ್ರಶ್ನಿಸಿದ್ದಾರೆ. "ನಾವು ಯಾಕೆ ಬಂದು ತೆಲುಗು, ತಮಿಳಿನಲ್ಲಿ ನಟಿಸ್ತೀವಿ. ನಾವು ಆ ಭಾಷೆಯನ್ನು ಸಿನಿಮಾವನ್ನು ಪ್ರೀತಿಸಿ ಬಂದು ನಟಿಸ್ತೀವಿ. ಆದರೆ ಅಲ್ಲಿನ ಜನಪ್ರಿಯ ನಟರು ಕನ್ನಡಕ್ಕೆ ಯಾಕೆ ಬರಲ್ಲ ಎನ್ನುವ ಬೇಸರ ಇದೆ. ಕೊಟ್ಟುಕೊಳ್ಳುವುದು ನಡೆಯಬೇಕಲ್ವಾ? ನಾನೇ ಖುದ್ದಾಗಿ ಕೇಳಿದಾಗಲೂ ನಯವಾಗಿ ಜಾರಿಕೊಳ್ಳುತ್ತಾರೆ. ಅದು ಅವರಿಷ್ಟ. ಅದರ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಆದರೆ ನಾವೇ ಕೇಳಿದ್ರು ಬಹಳ ಜನ ಬರಲ್ಲ, ಅವ್ರು ಬಂದ್ರೆ ನಮ್ಮ ಭಾಷೆಗೂ ಗೌರವ, ನಮ್ಮ ಜನ ಕೂಡ ಒಪ್ಪಿಕೊಳ್ತಾರೆ. ಒಂದು ಹಾಡಿಗೋ, ಸನ್ನಿವೇಶಕ್ಕೋ ಬಂದು ನಟಿಸಿದ್ರೆ ಚೆನ್ನಾಗಿರುತ್ತದೆ" ಎಂದು ಸುದೀಪ್ ವಿವರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗುತ್ತದೆ ಎನ್ನುವ ಭರವಸೆ ಇದೆ ಎಂದು ನಿರೂಪಕ ಹೇಳುತ್ತಿದ್ದಂತೆ ಸುದೀಪ್ ಭರವಸೆ ಎಲ್ಲಾ ಬೇಡ ಸರ್ ಎಂದಿದ್ದಾರೆ. "ಇಷ್ಟು ದಿನ ಮಾಡಿಲ್ಲ, ಇನ್ನು ಮುಂದೆ ಮಾಡ್ತಾರೆ ಎನ್ನುವ ಭರವಸೆ ಇಟ್ಟುಕೊಳ್ಳುವುದು ನಿಮ್ಮ ಒಳ್ಳೆತನ" ಎಂದಿದ್ದಾರೆ. ಕಿಚ್ಚನ ಈ ಮಾತಿನಲ್ಲೇ ಅಸಮಾಧಾನ ಗೊತ್ತಾಗುತ್ತಿದೆ. ಅವ್ರು ಕೇಳಿದಾಗ ಆ ಚಿತ್ರಕ್ಕೆ ಒಳ್ಳೆದಾಗುತ್ತೆ ಎಂದು ಹೋಗ್ತೀವಿ ಅಲ್ವಾ? ಅವ್ರ ದೊಡ್ಡ ಚಿತ್ರದಲ್ಲಿ ನಾನು ಒಂದು ಸಣ್ಣ ಪಾತ್ರ ಮಾಡಿದರೆ ಚೆನ್ನಾಗಿರುತ್ತೆ ಎಂದಾಗ ಮಾಡೋಣ ಅಂತ ಮಾಡ್ತೀನಿ ಅಷ್ಟೆ" ಎಂದು ಸುದೀಪ್ ಹೇಳಿದ್ದಾರೆ.
ಬಿಸಿನೆಸ್ ಕೂಡ ಇಲ್ಲಿ ಲೆಕ್ಕಕ್ಕೆ ಬರಲ್ಲ. ಅವರಿಗೆ ಇಲ್ಲಿಗೆ ಬರಬೇಕು ಎನ್ನುವ ಉದ್ದೇಶ ಬಹಳ ಮುಖ್ಯ. ಸೇತುವೆ ಅಂದ್ರೆ ಎರಡೂ ಕಡೆಯಿಂದ ವಾಹನಗಳು ಓಡಾಡಬೇಕು, ಒಂದು ಕಡೆಯಿಂದ ಓಡಾಡಿದರೆ ಬೇಸರವಾಗುತ್ತದೆ. ಅವ್ರು ಬಂದ್ರು ಗೌರವ ಇರುತ್ತದೆ, ಬರದಿದ್ದರೂ ಗೌರವ ಇರುತ್ತದೆ ಅಷ್ಟೆ ಎಂದು ಸುದೀಪ್ ಚರ್ಚೆಗೆ ಅಂತ್ಯ ಹಾಡಿದ್ದಾರೆ.


Click it and Unblock the Notifications











