ಸುದೀಪ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ಸಿನಿಮಾ ರೀ-ರಿಲೀಸ್; ಅಡ್ವಾನ್ಸ್ ಬುಕ್ಕಿಂಗ್ ಶುರು
ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಅಭಿಮಾನಿಗಳ ಪ್ರೀತಿಯ ಬಾದ್ಶಾ ಹುಟ್ಟುಹಬ್ಬ ಬಹಳ ವಿಶೇಷಗಳಿಂದ ಕೂಡಿರುತ್ತದೆ. 'K47' ಟೀಸರ್ ಕೂಡ ಬರಲಿದೆ. ಬಿಗ್ಬಾಸ್ ಪ್ರೋಮೊ ಬಿಡುಗಡೆ ಆಗುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ಸುದೀಪ್ ನಟನೆಯ ಹಳೇ ಸಿನಿಮಾ ರೀ-ರಿಲೀಸ್ ಆಗ್ತಿದೆ.
ಹಳೇ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಬಹಳ ಹಿಂದೆ ಶುರುವಾಯಿತು. ಇತ್ತೀಚೆಗೆ ಅದು ಹೆಚ್ಚಾಗಿದೆ. ದರ್ಶನ್, ಪುನೀತ್ ಹಾಗೂ ಉಪೇಂದ್ರ ಸಿನಿಮಾ ಹೆಚ್ಚು ಮರುಬಿಡುಗಡೆ ಆಗಿ ಸದ್ದು ಮಾಡಿವೆ. ಈ ಬಾರಿ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಚಿತ್ರಮಂದಿರಗಳಲ್ಲಿ ಸರ್ಪ್ರೈಸ್ ಕಾಡಿದೆ.

ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ಸುದೀಪ್ ಮುಂದಾಗಿದ್ದಾರೆ. ಸೆಪ್ಟೆಂಬರ್ 2ರಂದು ಅವರ 52ನೇ ಹುಟ್ಟುಹಬ್ಬ. ಆದರೆ ಅದಕ್ಕಿಂತ ಒಂದು ದಿನ ಮನ್ನ ಅಂದರೆ ಸೆಪ್ಟೆಂಬರ್ 1ರಂದು ರಾತ್ರಿಯೇ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಸುದೀಪ್ ಹೇಳಿದ್ದಾರೆ. ಅದು ಮನೆ ಬಳಿ ಅಲ್ಲ, ಬೇರೆ ಕಡೆ ಎಂದು ತಿಳಿಸಿದ್ದಾರೆ. ಆದರೆ ಮರುದಿನ ಅಭಿಮಾನಿಗಳು ಯಾರು ಮನೆ ಬಳಿ ಬರಬೇಡಿ ಎಂದು ಸುದೀಪ್ ಮನವಿ ಮಾಡಿದ್ದಾರೆ.
ತಮ್ಮ ಹುಟ್ಟುಹಬ್ಬ ಆಚರಣೆ ಬಗ್ಗೆ ಸುದೀಪ್ ಇತ್ತೀಚೆಗೆ ಪತ್ರ ಬರೆದು ಮಾಹಿತಿ ನೀಡಿದ್ದರು. ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಸುದೀಪ್ ಹುಟ್ಟುಹಬ್ಬ ಆಚರಣೆ ನಡೆಯಬಹುದು ಎನ್ನಲಾಗ್ತಿದೆ. ಮಂಗಳವಾರ ಸುದೀಪ್ ಹುಟ್ಟುಹಬ್ಬ. ಆದರೆ ಶುಕ್ರವಾರ ಅವರು ನಟಿಸಿರುವ 'ವಿಷ್ಣುವರ್ಧನ' ಸಿನಿಮಾ ತೆರೆಗೆ ಬರಲಿದೆ. ಪಿ. ಕುಮಾರ್ ನಿರ್ದೇಶನದ ಈ ಕಾಮಿಡಿ ಆಕ್ಷನ್ ಥ್ರಿಲ್ಲರ್ 2011ರಲ್ಲಿ ತೆರೆಗೆ ಬಂದಿತ್ತು.

ದ್ವಾರಕೀಶ್ ಚಿತ್ರ ಬ್ಯಾನರ್ ಅಡಿಯಲ್ಲಿ ಯೋಗೇಶ್ ದ್ವಾರಕೀಶ್ ಚಿತ್ರ ನಿರ್ಮಾಣ ಮಾಡಿದ್ದರು. ಸುದೀಪ್ ಜೊತೆ ಜಾಕಿ ಭಾವನಾ ಹಾಗೂ ಪ್ರಿಯಾಮಣಿ ನಾಯಕಿಯರಾಗಿ ನಟಿಸಿದ್ದರು. ಸೋನುಸೂದ್ ವಿಲನ್ ಆಗಿ ಅಬ್ಬರಿಸಿದ್ದರು. ಜಯಣ್ಣ ಫಿಲ್ಮ್ಸ್ ಸಿನಿಮಾ ವಿತರಣೆ ಮಾಡಿದ್ದರು. ಬಹಳ ಅದ್ಧೂರಿಯಾಗಿ 'ವಿಷ್ಣುವರ್ಧನ' ಸಿನಿಮಾ ಬಿಡುಗಡೆಯಾಗಿತ್ತು.
ಇನ್ನು ಸಿನಿಮಾ ಟೈಟಲ್ ವಿಚಾರವಾಗಿ ವಿವಾದ ಏರ್ಪಟ್ಟಿತ್ತು. ಭಾರತೀ ವಿಷ್ಣುವರ್ಧನ್ ಈ ಟೈಟಲ್ ಕೊಡಲ್ಲ ಎಂದಿದ್ದರು. ಆದರೆ ದ್ವಾರಕೀಶ್ ಪಟ್ಟು ಹಿಡಿದು ಧಕ್ಕಿಸಿಕೊಂಡಿದ್ದರು. ಅಂದಹಾಗೆ ಈ ಕಥೆಯನ್ನು ನಟ ಗಣೇಶ್ ಕೇಳಿ ಮೆಚ್ಚಿದ್ದರು. ಆದರೆ ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಚಿತ್ರದಲ್ಲಿ ಸುದೀಪ್ ನಟಿಸುವಂತಾಗಿತ್ತು.
'ವಿಷ್ಣುವರ್ಧನ' ಸಿನಿಮಾ ಮರು ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ನಗರದ ಪ್ರಸನ್ನ ಸೇರಿ ರಾಜ್ಯದ ಕೆಲವೆಡೆ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರಮಂದಿರದ ಮುಂದೆ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಸುದೀಪ್ ಜೊತೆ ಸಾಹಸಸಿಂಹ ವಿಷ್ಣುವರ್ಧನ್ ಕಟೌಟ್ ಕೂಡ ಇದೆ. ಈಗಾಗಲೇ ದಾದಾ ಸ್ಮಾರಕ ನಿರ್ಮಾಣಕ್ಕಾಗಿ ಸುದೀಪ್ ಕೆಂಗೇರಿ ಬಳಿ ಅರ್ಧ ಎಕರೆ ಜಾಗ ಖರೀದಿಸಿದ್ದಾರೆ.
ಕೆಂಗೇರಿ ಬಳಿ ವಿಷ್ಣು ದರ್ಶನ ಕೇಂದ್ರ ಸ್ಥಾಪನೆಗಾಗಿ ಈಗಾಗಲೇ ಕೆಲಸಗಳು ಆರಂಭವಾಗಿದೆ. 25 ಅಡಿ ಪುತ್ಥಳಿ ನಿರ್ಮಿಸಲು ಈಗಾಗಲೇ ಮೂರ್ತಿ ತಯಾರಕರಿಗೆ ವಿಷ್ಣು ಅಭಿಮಾನಿಗಳು ಅಡ್ವಾನ್ಸ್ ಕೊಟ್ಟಿದ್ದಾರೆ. ಇನ್ನು ಸುದೀಪ್ ಹುಟ್ಟುಹಬ್ಬದ ದಿನ ಈ ಸ್ಮಾರಕದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.


Click it and Unblock the Notifications











