ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಪ್ಟನ್ ಸ್ಥಾನ ಬಿಟ್ಟುಕೊಡ್ತಾರಾ ಕಿಚ್ಚ ಸುದೀಪ್?
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಮತ್ತೊಂದು ಸೀಸನ್ ಮುಕ್ತಾಯವಾಗಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ತಂಡ ಮತ್ತೊಮ್ಮೆ ಕಮಾಲ್ ಮಾಡಿದೆ. ಟ್ರೋಫಿ ಗೆದ್ದ ತಂಡದ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಭಾನುವಾರ(ಫೆಬ್ರವರಿ 1) ಕೋಯಂಬತ್ತೂರಿನ ಶ್ರೀ ರಾಮಕೃಷ್ಣ ಕಲೆ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಮಣಿಸಿ ಬುಲ್ಡೋಜರ್ಸ್ ಟ್ರೋಫಿ ಎತ್ತಿ ಹಿಡಿದರು. ರೋಹಿತ್ ಶರ್ಮಾ ರೀತಿ ರೊಬೊ ವಾಕ್ ಮಾಡುತ್ತಾ ಸುದೀಪ್ ವೇದಿಕೆಯಲ್ಲಿ ಟ್ರೋಫಿ ಸ್ವೀಕರಿಸಿದ್ದು ಗಮನ ಸೆಳೆದಿತ್ತು. 2013 ಹಾಗೂ 2014ರಲ್ಲಿ ಎರಡು ಬಾರಿ ಟ್ರೋಫಿ ಗೆದ್ದಿದ್ದ ತಂಡ 3ನೇ ಬಾರಿ ಗೆದ್ದು ಅಭಿಮಾನಿಗಳ ಮನಗೆದ್ದಿದೆ.

ವಯಸ್ಸು 50 ದಾಟಿದ್ರು 20ರ ಯುವಕನಂತೆ ಸುದೀಪ್ ಮೈದಾನದಲ್ಲಿ ಕಾಣಿಸಿಕೊಂಡರು. ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುವ ಜೊತೆಗೆ ಕೀಪರ್ ಆಗಿ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅದ್ಭುತ ಕ್ಯಾಚ್ಗಳನ್ನು ಹಿಡಿದು, ರನ್ ಔಟ್ ಮಾಡಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಎದುರಾಗಳಿ ತಂಡದ ವಿಕೆಟ್ ಪಡೆದಾಗ ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಡಗೌಟ್ನಲ್ಲಿ ನಿಂತ ತಂಡದ ಆಟಗಾರರ ಬೌಂಡರಿ, ಸಿಕ್ಸರ್ ಸಿಡಿಸಿದಾಗ ಮಗುವಿನ ರೀತಿ ಸಂಭ್ರಮಿಸುತ್ತಿದ್ದರು. ಅವಕಾಶ ಸಿಕ್ಕಾಗ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದು ಅಬ್ಬರಿಸಿದ್ದಾರೆ. 3 ಬಾರಿ ಟ್ರೋಫಿ ಗೆದ್ದ ಕಿಚ್ಚ ಸಿಸಿಎಲ್ ಕ್ರಿಕೆಟ್ನಿಂದ ಹಿಂದೆ ಸರಿಯುತ್ತಾರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.
ಸಾಕು ಕ್ರಿಕೆಟ್ ಸಿನಿಮಾಗಳ ಕಡೆ ಗಮನ ಹರಿಸಿ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೊನೆ ಪಕ್ಷ ಕ್ಯಾಪ್ಟನ್ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಸುದೀಪ್ ತಂಡದಲ್ಲಿ ಆಡುತ್ತಾರೆ, ಅಥವಾ ಮೆಂಟರ್ ಆಗಿ ತಂಡದ ಜೊತೆ ನಿಲ್ಲುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. 2024ರಲ್ಲಿ ಪ್ರದೀಪ್ ಕ್ಯಾಪ್ಟನ್ ಆಗಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸಿದ್ದು ಇದೆ.

ವಯಸ್ಸು 50 ದಾಟಿರುವುದರಿಂದ ಸುದೀಪ್ ಕ್ರಿಕೆಟ್ ಆಟದಿಂದ ವಿಶ್ರಾಂತಿ ಪಡೆಯುವುದು ಉತ್ತಮ ಎನ್ನುವುದು ಕೆಲ ಅಭಿಮಾನಿಗಳ ಆಸೆಯಾಗಿದೆ. ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೇ, ಗಂಟೆಗಳ ಕಾಲ ನಿಂತು ಬಿಗ್ಬಾಸ್ ಶೋ ನಿರೂಪಣೆ ಮಾಡುತ್ತಾರೆ. ಇದು ನಿಜಕ್ಕೂ ಸವಾಲಿನ ಕೆಲಸ. ಮುಂದಿನ ದಿನಗಳಲ್ಲಿ ಮತ್ತಷ್ಟು ಅದ್ಭುತ ಸಿನಿಮಾಗಳಲ್ಲಿ ಕಿಚ್ಚ ನಟಿಸಬೇಕಿದೆ. ಹಾಗಾಗಿ ಸಿಸಿಎಲ್ ಸಾಕು ಎನ್ನುತ್ತಿದ್ದಾರೆ. ಟ್ರೋಫಿ ಜೊತೆಗೆ ವಿದಾಯ ಹೇಳುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಬಾರಿ ಕ್ರಿಕೆಟ್ ಮೈದಾನದಲ್ಲಿ ಕಿಚ್ಚನ ಜೋಶ್ ನೋಡಿದ್ರೆ, ಸದ್ಯಕ್ಕೆ ಸಿಸಿಎಲ್ ಬಿಡುವಂತೆ ಕಾಣುತ್ತಿಲ್ಲ. ಮೈದಾನದ ಒಳಗೆ ಅಥವಾ ಬೌಂಡರಿ ಲೈನ್ನಲ್ಲಿ ನಿಂತು ಆಟವನ್ನು ಎಷ್ಟು ಎಂಜಾಯ್ ಮಾಡುತ್ತಿದ್ದರು ಎನ್ನುವುದನ್ನು ನೋಡಿದ್ದೇವೆ. ಮೈದಾನದಲ್ಲಿ ಎಷ್ಟು ಅಗ್ರೆಸ್ಸಿವ್ ಆಗಿ ತಂಡವನ್ನು ಮುನ್ನಡೆಸಿದರು, ಹುಡುಗರನ್ನು ಹುರಿದುಂಬಿಸಿ ಟ್ರೋಫಿ ಗೆದ್ದಿದ್ದಾರೆ ಎನ್ನುವುದು ಗೊತ್ತೇಯಿದೆ. ಕಿಚ್ಚನ ಜೋಶ್ ನೋಡಿದ್ರೆ, ಇನ್ನು 5 ವರ್ಷ ಸಿಸಿಎಲ್ ಆಡುವುದನ್ನು ನಿಲ್ಲಿಸುವುದಿಲ್ಲ ಎನ್ನಲಾಗ್ತಿದೆ. ಅವರ ಆಪ್ತರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.
ಕಿಚ್ಚನ ಕ್ರಿಕೆಟ್ ಪ್ರೀತಿ ಇಂದು ನಿನ್ನೆಯದ್ದಲ್ಲ. ಕಾಲೇಜು ದಿನಗಳಲ್ಲಿ ಒಳ್ಳೆ ಕ್ರಿಯೆಟರ್ ಆಗಿದ್ದರು. ಬಳಿಕ ಇಂಜಿನಿಯರಿಂಗ್ ಮುಗಿಸಿ ಸಿನಿಮಾರಂಗದತ್ತ ಮುಖ ಮಾಡಿದ್ದರು. ಇಲ್ಲದೇ ಇದ್ದಿದ್ದರೆ ಒಳ್ಳೆ ಕ್ರಿಕೆಟರ್ ಆಗುವ ಕನಸು ಕಂಡಿದ್ದರು. ಇದೀಗ ಸಿಸಿಎಲ್, ಕೆಸಿಸಿ ಟೂರ್ನಿಗಳಲ್ಲಿ ಕ್ರಿಕೆಟ್ ಆಗಿ ಖುಷಿಪಡುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೂಡ ಕರ್ನಾಟಕ ಬುಲ್ಡೋಜರ್ಸ್ ತಂಡದ ಜೊತೆ ಇರುತ್ತಾರೆ. ಇನ್ನು ಕ್ಯಾಪ್ಟನ್ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲು ಸ್ವತಃ ಸುದೀಪ್ ಒಪ್ಪಿದರೂ ಇತರೆ ಆಟಗಾರರು ಒಪ್ಪುವುದಿಲ್ಲ. ಕಿಚ್ಚನ ನೇತೃತ್ವದಲ್ಲೇ ಮುಂದುವರೆಯಲು ಎಲ್ಲರೂ ಬಯಸುತ್ತಾರೆ. ಮುಂದಿನ ಸೀಸನ್ ವೇಳೆಗೆ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.
'ಮಾರ್ಕ್' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಕಿಚ್ಚ ಶೀಘ್ರದಲ್ಲೇ 'ಬಿಲ್ಲ ರಂಗ ಬಾಷ' ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಆದಷ್ಟು ಬೇಗ 2ನೇ ಶೆಡ್ಯೂಲ್ ಶುರುವಾಗಲಿದೆ. ಅನೂಪ್ ಭಂಡಾರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











