ಸುದೀಪ್ ಸರ್ ಯಾವ್ದೆ ಸಿನ್ಮಾ ಮಾಡಿದ್ರು ಜೊತೆಗಿರ್ತೀನಿ.. 'ಬಿಲ್ಲ ರಂಗ ಬಾಷ' ಯಾವಾಗ ಅಂದ್ರೆ?- ಅನೂಪ್ ಭಂಡಾರಿ
ಬಾಕ್ಸಾಫೀಸ್ನಲ್ಲಿ 'ಮಾರ್ಕ್' ಆರ್ಭಟ ಜೋರಾಗಿದೆ. 12ನೇ ದಿನವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಸುದೀಪ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. ಈ ವರ್ಷ ಕ್ರಿಸ್ಮಸ್ ವೇಳೆಗೆ ಮತ್ತೊಂದು ಸಿನಿಮಾ ಕೊಡಲು ಪ್ರಯತ್ನಿಸುವುದಾಗಿ ಕಿಚ್ಚ ಹೇಳಿದ್ದಾರೆ. ಮತ್ತೊಂದು ಕಡೆ 'ಬಿಲ್ಲ ರಂಗ ಬಾಷ' ಸಿನಿಮಾ ಮಾಡಬೇಕಿದೆ.
ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದಾರೆ. ಅದರ ಬೆನ್ನಲ್ಲೇ 'ಮಾರ್ಕ್' ಸಿನಿಮಾ ಆರಂಭಿಸಿ ಬಿಡುಗಡೆ ಕೂಡ ಮಾಡಿದ್ದಾರೆ. ಈ ಚಿತ್ರಕ್ಕೂ ಅನೂಪ್ ಭಂಡಾರಿ ಬೆಂಬಲವಾಗಿ ನಿಂತಿದ್ದರು. ಚಿತ್ರಕ್ಕೆ ಟೈಟಲ್ ಕೊಡುವುದು ಪಾತ್ರವಲ್ಲ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಎರಡೂ ಹಾಡುಗಳು ಹಿಟ್ ಆಗಿದೆ. ಈ ಬಗ್ಗೆ ಅನೂಪ್ ಭಂಡಾರಿ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

ಶೀಘ್ರದಲ್ಲೇ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎಂದು ಊಆಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಅನೂಪ್ ಭಂಡಾರಿ ಮಾತನಾಡಿ "ಮತ್ತೆ ಚಿತ್ರೀಕರಣಕ್ಕೆ ಪ್ಲ್ಯಾನಿಂಗ್ ನಡೀತಿದೆ. ಅಪ್ಡೇಟ್ ನಾವೇ ಕೊಡ್ತೀವಿ. ಸದ್ಯಕ್ಕೆ ಯಾವುದೇ ವಿಚಾರ ಹೇಳಲು ಸಾಧ್ಯವಿಲ್ಲ. ಎಲ್ಲಾ ಫೈನಲ್ ಆದಾಗ ಅಪ್ಡೇಟ್ ಬರುತ್ತೆ" ಎಂದಿದ್ದಾರೆ.
'ಮಾರ್ಕ್' ಚಿತ್ರಕ್ಕೆ ನಿಮ್ಮ ಬೆಂಬಲದ ಬಗ್ಗೆ ಸುದೀಪ್ ಸರ್ ಮಾತನಾಡಿದ್ದರು. ಚಿತ್ರದ ಸಕ್ಸಸ್ ನಿಮಗೆಷ್ಟು ಖುಷಿ ತಂದಿದೆ ಎನ್ನುವ ಪ್ರಶ್ನೆಗೆ "ಸುದೀಪ್ ಸರ್ ಯಾವುದೇ ಸಿನಿಮಾ ಮಾಡಿದ್ರು ಎಲ್ಲೋ ಒಂದು ಕಡೆ ನಾನು ಇರ್ತೀನಿ. 'ಮ್ಯಾಕ್ಸ್' ಚಿತ್ರಕ್ಕೆ ನಾನೇ ಟೈಟಲ್ ಕೊಟ್ಟಿದ್ದೆ. 'ಮಾರ್ಕ್'ಗೂ ನಾನು ಸೂಚಿಸಿದ್ದೆ. ಒಂದು ಫೋನ್ ಮಾಡ್ತಾರೆ, ಅಥವಾ ಭೇಟಿ ಆದಾಗ ಕೇಳ್ತಾರೆ. ಒಂದಷ್ಟು ಆಪ್ಷನ್ ಕೊಡ್ತೀನಿ. ಅದರಲ್ಲಿ ಇಷ್ಟ ಆಗಿದ್ದು ಫೈನಲ್ ಮಾಡ್ತಾರೆ. 'ಮ್ಯಾಕ್ಸ್' ಚಿತ್ರಕ್ಕೆ ಬೇರೆ ಬೇರೆ ಟೈಟಲ್ ಚರ್ಚೆಯಲ್ಲಿತ್ತು. ಚಿತ್ರೀಕರಣಕ್ಕೆ ಹೋಗುವಾಗ ಫೋನ್ ಮಾಡಿ ಕೇಳಿದ್ರು. ಬೆಳಗ್ಗೆ ಒಂದಷ್ಟು ಆಪ್ಷನ್ ಕೊಟ್ಟೆ. 'ಮ್ಯಾಕ್ಸ್' ಇಷ್ಟ ಆಯ್ತು. ಅದೇ ರೀತಿ ಅಜಯ್ ಮಾರ್ಕಂಡೇಯ 'ಮಾರ್ಕ್' ಎಂದು ಹೇಳಿದಾಗ ಅವರಿಗೆ ಇಷ್ಟವಾಯಿತು" ಎಂದಿದ್ದಾರೆ.

ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ 'ಜಿಮ್ಮಿ' ಚಿತ್ರಕ್ಕೆ ನಾನೇ ಟೈಟಲ್ ಕೊಟ್ಟಿದ್ದು ಎಂದು ಅನೂಪ್ ಭಂಡಾರಿ ನೆನಪಿಸಿಕೊಂಡಿದ್ದಾರೆ. 'ಮಾರ್ಕ್' ಚಿತ್ರದ 'ಸೈಕೊ ಸೈತಾನ್' ಹಾಡು ಯಾರೋ ಬರೆದಿದ್ರು. ಅದು ಸುದೀಪ್ ಸರ್ಗೆ ಇಷ್ಟವಾಗದೇ ನನಗೆ ಬರೆಯಲು ಹೇಳಿದ್ರು. ರಾತ್ರಿ ಹೇಳಿದ್ರು ಬೆಳಗ್ಗೆ ಬರೆದು ಕೊಟ್ಟೆ. 'ಮಸ್ತ್ ಮಲೈಕಾ' ಹಾಡಿನ ಸಾಹಿತ್ಯ ಕೂಡ ಬೇರೆ ತರ ಇತ್ತು. ನಾಳೆ ಶೂಟಿಂಗ್ ಚೇಂಜ್ ಮಾಡಬೇಕು ಅಂದಾಗ ಒಂದು ರಾತ್ರಿಯಲ್ಲಿ ಕೂಡ ಹಾಡು ಬರೆದಿದ್ದೆ. ಸಾನ್ವಿ ಹಾಡುತ್ತಾರೆ ಎನ್ನುವುದು ಗೊತ್ತಿರಲಿಲ್ಲ. ರೆಕಾರ್ಡಿಂಗ್ ವೇಳೆ ಗೊತ್ತಾಯ್ತು ಎಂದು ವಿವರಿಸಿದ್ದಾರೆ.
ಸಾನ್ವಿ ಗಾಯನದ ಬಗ್ಗೆ ಮಾತನಾಡಿ "ನಮ್ಮ ಸಿನಿಮಾ ರೆಕಾರ್ಡಿಂಗ್ ವೇಳೆ ಸಾನ್ವಿ ಅವರಿಂದ ಹಾಡಿಸುತ್ತಿದ್ದೆ. ಪ್ರಾಕ್ಟೀಸ್ ಮಾಡ್ತಿದ್ರು. ಇದೀಗ ಆಕೆ ಗಾಯಕಿಯಾಗಿ ಹಾಡಲು ಶುರು ಮಾಡಿದ್ದಾರೆ. 'ರಾ ರಾ ರಕ್ಕಮ್ಮ' ಹಾಡನ್ನು ಕೂಡ ಹಾಡಿಸುತ್ತಿದ್ವಿ. 'ದಬಾಂಗ್- 3' ಚಿತ್ರದ ಹಿಂದಿ ವರ್ಷನ್ ಹಾಡೊಂದನ್ನು ಸಾನ್ವಿ ಹಾಡಿದ್ರು. ಅದು ಸಲ್ಮಾನ್ ಖಾನ್ ಸರ್ಗೂ ಇಷ್ಟವಾಗಿತ್ತು ಎಂದು ಅನೂಪ್ ಹೇಳಿದ್ದಾರೆ.
'ಮಾರ್ಕ್' ಬಳಿಕ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಮುಂದುವರೆಸಬೇಕು ಎನ್ನುವ ಪ್ಲ್ಯಾನ್ ಸುದೀಪ್ ಸರ್ಗೆ ಇದೆ. ಆದರೆ ಅದರ ಜೊತೆ ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ನಾವು 'ಬಿಲ್ಲ ರಂಗ ಬಾಷ' ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದೀವಿ. ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದು ನಿರ್ದೇಶಕ ಅನೂಪ್ ಭಂಡಾರಿ ಮಾಹಿತಿ ನೀಡಿದ್ದಾರೆ.


Click it and Unblock the Notifications











