'ಕೆಸಿಸಿ' ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ ಕಿಚ್ಚ ಸುದೀಪ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ (ಕನ್ನಡ ಚಲನಚಿತ್ರ ಕಪ್) ಯಶಸ್ವಿಯಾಗಿ ನೆರವೇರಿತು. ಕೆಸಿಸಿ ಪಂದ್ಯಾವಳಿ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗೂ ಕಮ್ಮಿ ಆಗಿರಲಿಲ್ಲ. ಸಿಕ್ಸರ್-ಬೌಂಡರಿಗಳ ಅಬ್ಬರದಿಂದ ಕೆಸಿಸಿ ಮ್ಯಾಚ್ ಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡ್ತು.
ಕನ್ನಡ ಚಲನಚಿತ್ರ ಕಪ್-2 ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಗಳಾದ ಆಡಮ್ ಗಿಲ್ ಕ್ರಿಸ್ಟ್, ಲಾನ್ಸ್ ಕ್ಲೂಸ್ನರ್, ತಲಕರತ್ನೇ ದಿಲ್ಶಾನ್, ಓವೈಸ್ ಶಾ, ಹರ್ಷಲ್ ಗಿಬ್ಸ್ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದು ಪಂದ್ಯವಳಿಗೆ ಕಳೆ ಕಟ್ಟಿತ್ತು.
ಕನ್ನಡ ಚಲನಚಿತ್ರ ಕಪ್ ಎರಡನೇ ಆವೃತ್ತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು. ಸೋಲು-ಗೆಲುವು ಎನ್ನುವ ಭಿನ್ನ ಇಲ್ಲದೇ ಕನ್ನಡ ಚಿತ್ರರಂಗದ ತಾರೆಯರು ಒಂದೇ ಸೂರಿನಡಿ ಸೇರಿ ಕ್ರಿಕೆಟ್ ಆಡಿ ಮಸ್ತ್ ಮಜಾ ನೀಡಿದ್ದು ಕಿಚ್ಚ ಸುದೀಪ್ ಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.
ಹೀಗಾಗಿ, ಕೆಸಿಸಿ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಮುಂದೆ ಓದಿರಿ....
ನಮ್ಮೆಲ್ಲರಿಗೂ ಮರೆಯಲಾಗದ ಕ್ಷಣ
''ನಮ್ಮೆಲ್ಲರಿಗೂ ಒಂದು ಮರೆಯಲಾಗದ ಕ್ಷಣ ಅಂದ್ರೆ, ಅದು ಕೆಸಿಸಿ ಲೀಗ್. ಇಲ್ಲಿಯವರೆಗೂ ಪ್ರತಿ ದಿನ ಯಾರಾದರೂ ಒಬ್ಬರು ಟೆನ್ಷನ್ ನಿಂದ ನನ್ನನ್ನ ನಿದ್ರೆಯಿಂದ ಎಚ್ಚರಗೊಳಿಸುತ್ತಿದ್ದರು. ಆದ್ರೀಗ, ಅದೆಲ್ಲವೂ ಮುಗಿದಿದೆ. ಎಲ್ಲರ ಮೊಗದಲ್ಲೂ ಮಂದಹಾಸ ನೋಡಿ ಮನಸ್ಸಿಗೆ ಖುಷಿ ತಂದಿದೆ'' ಎಂದು ಟ್ವೀಟ್ ಮಾಡಿದ್ದಾರೆ ಕೆಸಿಸಿ ರೂವಾರಿ ಕಿಚ್ಚ ಸುದೀಪ್.
ನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದಗಳು
''ನಮ್ಮ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದಗಳು. ನನಗೆ ಸಪೋರ್ಟ್ ಮಾಡಿದ ಜಾಕ್ ಮಂಜು, ಶೆಣೈ, ಕೃಷ್ಣ... ನನಗೆ ಶಕ್ತಿ ತುಂಬಿದ ಶ್ರೀಕಾಂತ್ ಹಾಗೂ ನಂದಾಗೆ ತುಂಬು ಹೃದಯದ ಧನ್ಯವಾದಗಳು'' - ಕಿಚ್ಚ ಸುದೀಪ್
'ಕೆ.ಎಸ್.ಸಿ.ಎ'ಗೆ ಧನ್ಯವಾದ
''ಕೆ.ಎಸ್.ಸಿ.ಎ' ಆಡಳಿತ ಮಂಡಳಿಗೆ ತುಂಬಾ ತುಂಬಾ ಥ್ಯಾಂಕ್ಸ್. ಅವರ ಸಪೋರ್ಟ್ ಇಲ್ಲದೇ ಹೋಗಿದ್ದರೂ, ಇಷ್ಟೆಲ್ಲ ಸಾಧ್ಯವೇ ಆಗುತ್ತಿರಲಿಲ್ಲ'' - ಕಿಚ್ಚ ಸುದೀಪ್
ಮಾಧ್ಯಮಗಳಿಗೂ ಧನ್ಯವಾದ
ಕನ್ನಡ ಚಲನಚಿತ್ರ ಕಪ್ ಗೆ ಬೆಂಬಲ ನೀಡಿದ ಮಾಧ್ಯಮಗಳಿಗೂ ಕಿಚ್ಚ ಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ.
ಸಂಗೀತ ಕಾರ್ಯಕ್ರಮ ಕೊಟ್ಟ ಅರ್ಜುನ್ ಜನ್ಯ
''ಸ್ಟೇಡಿಯಂ ನಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟ ಅರ್ಜುನ್ ಜನ್ಯ ಮತ್ತು ತಂಡ. ಹಾಗೂ ಡ್ಯಾನ್ಸ್ ಪರ್ಫಾಮೆನ್ಸ್ ಕೊಟ್ಟ ಹರ್ಷಿಕಾ, ಕೃಷಿ, ಸೋನು ಗೆ ನನ್ನ ವಂದನೆಗಳು'' - ಕಿಚ್ಚ ಸುದೀಪ್.
ಸೃಜನ್ ಲೋಕೇಶ್ ಗೆ ಥ್ಯಾಂಕ್ಸ್
ಸ್ಟೇಡಿಯಂನಲ್ಲಿ ನೆರೆದಿದ್ದ ಜನರ ಎನರ್ಜಿ ಇಮ್ಮಡಿಗೊಳಿಸಿದ ಸೃಜನ್ ಲೋಕೇಶ್ ಗೂ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ.

ಪೊಲೀಸ್ ಇಲಾಖೆಗೆ ನಮನ
ಯಾವುದೇ ಅಡೆ ತಡೆ ಇಲ್ಲದೇ, ಸುಗಮವಾಗಿ ಕೆಸಿಸಿ ನಡೆಯಲು ಸಪೋರ್ಟ್ ಮಾಡಿದ ಪೊಲೀಸ್ ಇಲಾಖೆಗೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಸುದೀಪ್ ನಮನ ಸಲ್ಲಿಸಿದ್ದಾರೆ. ಹಾಗೇ, ಕೆಸಿಸಿ ಟೂರ್ನಿಯನ್ನ ಪ್ರಸಾರ ಮಾಡಿದ ಕಲರ್ಸ್ ಸೂಪರ್ ವಾಹಿನಿಗೂ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ.

ಸ್ಪರ್ಧಿಗಳಿಗೆ ಧನ್ಯವಾದ
ಕೆಸಿಸಿಯಲ್ಲಿ ಭಾಗಿಯಾದ ರಾಕ್ ಸ್ಟಾರ್ ರೋಹಿತ್, ಹಾಗೇ ಕೆಸಿಸಿ ಯಶಸ್ಸಿಗೆ ಸಾಕ್ಷಿಯಾದ ಎಲ್ಲರಿಗೂ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ.
ತಾರೆಯರಿಗೆ ನಮನ
ಸಪೋರ್ಟ್ ಮಾಡಿದ ಶಿವಣ್ಣ, ಹಾಜರಿದ್ದು ಚಿಯರ್ ಮಾಡಿದ ಪುನೀತ್, ಜ್ವರ ಇದ್ದರೂ ಮ್ಯಾಚ್ ಗೆ ಬಂದ ಉಪೇಂದ್ರ, ಗಣೇಶ್ ಮತ್ತು ಯಶ್ ಕೊಟ್ಟ ಮನರಂಜನೆಗೆ ಕಿಚ್ಚ ಸುದೀಪ್ ನಮನ ಸಲ್ಲಿಸಿದ್ದಾರೆ.
ಅಂತಾರಾಷ್ಟ್ರೀಯ ಆಟಗಾರರಿಗೆ ಧನ್ಯವಾದ
''ನಮ್ಮ ಜೊತೆಗೆ ಕ್ರಿಕೆಟ್ ಆಡಿದ ಸೆಹ್ವಾಗ್, ಗಿಬ್ಸ್, ಕ್ಲೂಸ್ನರ್, ದಿಲ್ಶಾನ್, ಗಿಲ್ ಕ್ರಿಸ್ಟ್, ಓವೈಸ್ ಗೆ ಧನ್ಯವಾದಗಳು. ಮತ್ತೊಮ್ಮೆ ನಿಮ್ಮನ್ನ ನೋಡಲು ಕಾತರರಾಗಿದ್ದೇನೆ'' - ಕಿಚ್ಚ ಸುದೀಪ್


Click it and Unblock the Notifications











