ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿನಯ ಚಕ್ರವರ್ತಿ: ಮಧ್ಯರಾತ್ರಿಯಿಂದಲೇ ಕಳೆಕಟ್ಟಿದ ಕಿಚ್ಚೋತ್ಸವ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಧ್ಯರಾತ್ರಿಯಿಂದಲೇ ಜೆಪಿ ನಗರದಲ್ಲಿರುವ ಸುದೀಪ್ ನಿವಾಸದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೆಚ್ಚಿನ ನಟನನ್ನು ನೋಡಲು ಕೈ ಕುಲುಕಿ ಶುಭ ಹಾರೈಸಲು ದೂರದ ಊರುಗಳಿಂದ ಅಭಿಮಾನಿಗಳು ಜಮಾಯಿಸಿದ್ದರು. ಇನ್ನು ಸಾಮಾಜಿಕ ಕೆಲಸಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ಸುದೀಪಿಯನ್ಸ್ ಮನಸ್ಸು ಮಾಡಿದ್ದಾರೆ.
ಕಳೆದೆರಡು ವರ್ಷಗಳಿಂದ ಕೊರೊನಾ ಹಾವಳಿ ಕಾರಣ ಸುದೀಪ್ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅದಕ್ಕಿಂತ ಎರಡು ವರ್ಷ ಹಿಂದೆಯೇ ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ದುಂದು ವೆಚ್ಚ ಬೇಡ ಎಂದು ಸುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿಯಾಗಿ ಶುಭಾಶಯ ಸ್ವೀಕರಿಸುತ್ತಿದ್ದರು. ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇನ್ನು ರಾತ್ರಿ ಅಭಿಮಾನಿಗಳೇ ಕೇಕ್ ಕತ್ತರಿಸಿ ಕಿಚ್ಚನ ಹುಟ್ಟುಹಬ್ಬ ಆಚರಿಸಿದ್ದಾರೆ. ಇನ್ನು ಸುದೀಪ್ ನಿವಾಸದ ಬಳಿ ಪೊಲೀಸ್ ಬಿಗಿ ಭದ್ರತೆ ಕೂಡ ಕೈಗೊಂಡಿದ್ದರು. ಮಧ್ಯರಾತ್ರಿ ಮನೆಯಿಂದ ಹೊರ ಬಂದು ಬಾದ್ಶಾ ಕಿಚ್ಚ ಅಭಿಮಾನಿಗಳ ಪ್ರೀತಿಗೆ ಕೈ ಮುಗಿದು ಧನ್ಯವಾದ ತಿಳಿಸಿದರು.
ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. 4 ದಿನ ಮೊದಲೇ ಸ್ಪೆಷಲ್ ಬರ್ತ್ಡೇ ಸಿಡಿಪಿ ಮಾಡಿ ವೈರಲ್ ಮಾಡಿದ್ದರು. ಟ್ವಿಟ್ಟರ್ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿ ಅಭಿಮಾನಿಗಳು ದಾಖಲೆ ಬರೆದಿದ್ದರು. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ರಿಲೀಸ್ ಮಾಡಿದ್ದ ಸಿಡಿಪಿ ಎಲ್ಲರ ಗಮನ ಸೆಳೆದಿತ್ತು. ನಟನಾಗಿ ನಿರ್ದೇಶಕರಾಗಿ ಗಾಯಕರಾಗಿ ನಿರ್ಮಾಪಕರಾಗಿ ಕಿರುತೆರೆಯ ನಿರೂಪಕರಾಗಿ ಸುದೀಪ್ ಸಕ್ಸಸ್ ಕಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.

ಭಾರ್ಗವ್ ಭಕ್ಷಿ ಖಡಕ್ ಪೋಸ್ಟರ್
'ವಿಕ್ರಾಂತ್ ರೋಣ' ನಂತರ ಸುದೀಪ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯ ಸುದೀಪ್ ಹೀರೊ ಆಗಿ ನಟಿಸುತ್ತಿರುವ ಹೊಸ ಸಿನಿಮಾ ಯಾವುದು ಘೋಷಣೆಯಾಗಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಚಿತ್ರದ ಅತಿಥಿ ಪಾತ್ರದಲ್ಲಿ ಕಿಚ್ಚ ನಟಿಸಿದ್ದಾರೆ. ಭಾರ್ಗವ್ ಭಕ್ಷಿ ಅನ್ನುವ ಪವರ್ಫುಲ್ ರೋಲ್ ಪ್ಲೇ ಮಾಡ್ತಿದ್ದು, ಹೊಸ ಪೋಸ್ಟರ್ ಮೂಲಕ ಕಿಚ್ಚನಿಗೆ ತಂಡ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಆರ್. ಚಂದ್ರು ಆಕ್ಷನ ಕಟ್ ಹೇಳಿದ್ದಾರೆ.

ಸೋಲುಗಳನ್ನು ಮೆಟ್ಟಿ ಗೆದ್ದ ಬಾದ್ಶಾ
1996ರಲ್ಲಿ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ ಮೊದಲಬಾರಿಗೆ ಸುದೀಪ್ ಬಣ್ಣ ಹಚ್ಚಿದ್ದರು. ಮರು ವರ್ಷವೇ 'ತಾಯವ್ವ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಡೈರೆಕ್ಟರ್ ಆಗಬೇಕು ಎಂದುಕೊಂಡು ಚಿತ್ರರಂಗಕ್ಕೆ ಬಂದವರು ಸುದೀಪ್. ಆದರೆ ಉಪೇಂದ್ರ ನೀವು ನೋಡಲು ಚೆನ್ನಾಗಿದ್ದೀರಿ ಹೀರೊ ಆಗಬಹುದು ಎಂದಿದ್ದರಂತೆ. ಆಗ ಫೋಟೊಶೂಟ್ ಮಾಡಿಸಿ, ಹೀರೊ ಆಗುವ ಕನಸು ಕಂಡರು. ತಂದೆ ದೊಡ್ಡ ಹೋಟೆಲ್ ಉದ್ಯಮಿ ಆದರೂ ಚಿತ್ರರಂಗದಲ್ಲೇ ಏನಾದರೂ ಸಾಧಿಸಬೇಕು ಎಂದು ಬಂದು ಸಾಧಿಸಿ ತೋರಿಸಿದರು.

ಐರೆನ್ ಲೆಗ್ ಟು ಪ್ಯಾನ್ ಇಂಡಿಯಾ ಸ್ಟಾರ್
ಸುದೀಪ್ ಆಯ್ಕೆ ಆಗಿದ್ದ ಬ್ರಹ್ಮ ಸಿನಿಮಾ ನಿಂತು ಹೋಗಿತ್ತು. 'ಓ ಕುಸುಮ ಬಾಲೆ' ಚಿತ್ರದಲ್ಲಿ ನಟಿಸಿ ಅದೃಷ್ಟ ಇಲ್ಲ ಎಂದುಕೊಂಡು ಧಾರಾವಾಹಿ ಕಡೆ ಮುಖ ಮಾಡಿದ್ದರು. 'ತಾಯವ್ವ', 'ಪ್ರತ್ಯರ್ಥ' ಚಿತ್ರಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಇಂತಹ ಸಮಯದಲ್ಲೇ ಸುದೀಪ್ ಐರೆನ್ ಲೆಗ್ ಅನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುವುದಕ್ಕೆ ಶುರುವಾಗಿತ್ತು. ಸಾಕಷ್ಟು ಸಮಸ್ಯೆಗಳ ನಡುವೆ ಬಂದ 'ಸ್ಪರ್ಶ' ಸಿನಿಮಾ ಗೆದ್ದರೂ ಬಾಕ್ಸಾಫೀಸ್ನಲ್ಲಿ ನಷ್ಟ ಅನುಭವಿಸಿತ್ತು. ಆದರೆ 'ಹುಚ್ಚ' ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಯ್ತು. ಕೆಲ ನಟರು ಬೇಡ ಎಂದು ಬಿಟ್ಟ ಕಥೆಯನ್ನು ಒಪ್ಪಿ ನಟಿಸಿದ್ದ ಸುದೀಪ್ ಸಕ್ಸಸ್ ಕಂಡರು. ಆ ಚಿತ್ರದ ಪಾತ್ರದ ಹೆಸರು ಕಿಚ್ಚ ಸುದೀಪ್ ಹೆಸರಿನ ಜೊತೆ ಸೇರಿಕೊಳ್ತು. ಅಲ್ಲಿಂದ ಮುಂದೆ ಕಿಚ್ಚ ಹಿಂತಿರುಗಿ ನೋಡಲೇಯಿಲ್ಲ.

ಪರಭಾಷೆಗಳಲ್ಲೂ ನಟಿಸಿ ಗೆದ್ದ ಕಿಚ್ಚ ಸುದೀಪ್
ರಾಮ್ಗೋಪಾಲ್ ವರ್ಮಾ ನಿರ್ದೇಶಣದ 'ಫೂಂಕ್' ಸಿನಿಮಾ ಮೂಲಕ ಸುದೀಪ್ ಬಾಲಿವುಡ್ ಪ್ರವೇಶಿಸಿದರು. 'ರಣ್' ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿತು. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಲೀಡ್ ರೋಲ್ನಲ್ಲಿ ಸುದೀಪ್ ನಟನೆಯನ್ನು ಇಡೀ ಭಾರತೀಯ ಚಿತ್ರರಂಗ ಕೊಂಡಾಡಿತ್ತು. ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್ ಜೊತೆ 'ದಬಾಂಗ್'- 3, ಮೆಗಾಸ್ಟಾರ್ ಚಿರಂಜೀವಿ ಜೊತೆ 'ಸೈರಾ' ಸಿನಿಮಾಗಳಲ್ಲಿ ಅದ್ಭುತ ಅಭಿನಯದಿಂದ ಕಮಾಲ್ ಮಾಡಿದರು.

ಸೂಪರ್ ಹಿಟ್ ಸಿನಿಮಾಗಳು
'ಹುಚ್ಚ', 'ಮೈ ಆಟೋಗ್ರಾಫ್', 'ವೀರ ಮದಕರಿ', 'ಕೆಂಪೇಗೌಡ', 'ಮಾಣಿಕ್ಯ', 'ಕೋಟಿಗೊಬ್ಬ-2', 'ಹೆಬ್ಬುಲಿ', 'ವಿಕ್ರಾಂತ್ ರೋಣ' ಸುದೀಪ್ ನಟನೆಯ ಕೆಲ ಸೂಪರ್ ಹಿಟ್ ಸಿನಿಮಾಗಳು. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸುದೀಪ್ ಆರ್ಭಟ ಶುರುವಾಗಿದೆ. 'ಪೈಲ್ವಾನ್' ನಂತರ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗಿ ಸದ್ದು ಮಾಡಿದೆ. ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಆ ಆಕ್ಷನ್ ಥ್ರಿಲ್ಲರ್ ಸಿನಿಮಾ ಓಟಿಟಿಗೆ ಬಂದಿದೆ.

ಸಕಲಕಲಾವಲ್ಲಭ ಅಭಿನಯ ಚಕ್ರವರ್ತಿ
ಬರೀ ನಟನಾಗಿ ಮಾತ್ರವಲ್ಲದೇ ಸುದೀಪ್ ನಿರ್ದೇಶಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಕಿಚ್ಚ ಸೋಲಿನ ಸುಳಿಗೆ ಸಿಲುಕಿದಾಗ ತಾವೇ ನಿರ್ದೇಶನ ಮಾಡುವ ಹಠಕ್ಕೆ ಬಿದ್ದರು. ಆಗ ಸಿದ್ಧವಾದ ಸಿನಿಮಾ 'ಮೈ ಆಟೋಗ್ರಾಫ್'. ಮುಂದೆ ನಾಲ್ಕೈದು ಸಿನಿಮಾಗಳಿಗೆ ಸುದೀಪ್ ಆಕ್ಷನ್ ಕಟ್ ಹೇಳಿ ಗೆದ್ದರು. ಇನ್ನು ಸುದೀಪ್ ಗಾಯಕರಾಗಿಯೂ ಸಾಕಷ್ಟು ಹಿಟ್ ಸಾಂಗ್ಸ್ಗೆ ದನಿಯಾಗಿದ್ದಾರೆ. ಇನ್ನು ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ನಿರೂಪರಾಗಿಯೂ ಸಕ್ಸಸ್ ಕಂಡಿದ್ದಾರೆ. ಸುದೀಪ್ ಒಳ್ಳೆ ಕ್ರಿಕೆಟ್ ಆಟಗಾರ. ಅಷ್ಟೇ ಅಲ್ಲ ಒಮ್ಮೆ ಶೆಫ್ ಕೂಡ ಆಗಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಸುದೀಪ್ ಸಕಲಕಲಾವಲ್ಲಭ.


Click it and Unblock the Notifications











