'ಬ್ರ್ಯಾಟ್' ಆಗಿ ಡಾರ್ಲಿಂಗ್ ಕೃಷ್ಣ ಆರ್ಭಟ; ಟ್ರೈಲರ್ ರಿಲೀಸ್ ಮಾಡಿ ಕಿಚ್ಚನ ಸಾಥ್
ಸದಭಿರುಚಿ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಕಮಾಲ್ ಮಾಡಿದ ನಿರ್ದೇಶಕ ಶಶಾಂಕ್. ನಿಜ ಜೀವನಕ್ಕೆ ಬಹಳ ಹತ್ತಿರವಾದ ಸಿನಿಮಾಗಳನ್ನು ಮಾಡುವುದರಲ್ಲಿ ಅವರು ಸಿದ್ಧಹಸ್ತರು. ಎರಡು ವರ್ಷಗಳ ಹಿಂದೆ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ನಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಮಾಡಿ ಗೆದ್ದಿದ್ದರು. ಈಗ 'ಬ್ರ್ಯಾಟ್' ಕಥೆ ಹೇಳೋಕೆ ಬರ್ತಿದ್ದಾರೆ.
ನಟ ಕಿಚ್ಚ ಸುದೀಪ್ 'ಬ್ರ್ಯಾಟ್' ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ. ಡಾರ್ಲಿಂಗ್ ಕೃಷ್ಣ ಜೋಡಿಯಾಗಿ ಮನಿಷಾ ಕಂದಕುರ್ ಬಣ್ಣ ಹಚ್ಚಿದ್ದಾರೆ. ತಂದೆಯಾಗಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ರಮೇಶ್ ಇಂದಿರಾ ಹಾಗೂ ಡ್ರ್ಯಾಗನ್ ಮಂಜು ವಿಲನ್ಗಳಾಗಿ ಅಬ್ಬರಿಸಿದ್ದಾರೆ. ಹೆಚ್ಚು ತರಲೆ ಮಾಡುವ, ಜವಾಬ್ದಾರಿ ಇಲ್ಲದೇ ಹುಂಬನಂತೆ ಓಡಾಡುವವನಿಗೆ 'ಬ್ರ್ಯಾಟ್' ಎಂದು ಕರೆಯುತ್ತಾರೆ. ಇಂತಹ ವಿಭಿನ್ನ ಟೈಟಲ್ ಇಟ್ಟು ಶಶಾಂಕ್ ಸಿನಿಮಾ ಮಾಡಿದ್ದಾರೆ.

'ಕೌಸಲ್ಯಾ ಸುಪ್ರಜಾ ರಾಮ' ಚಿತ್ರದಲ್ಲಿ ಲವರ್ ಬಾಯ್ ಆಗಿ ನಟಿಸಿದ್ದ ಕೃಷ್ಣ ಇಲ್ಲಿ ಅದಕ್ಕಿಂತ ಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಹಣಕ್ಕಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ, ತಂದೆ ಪೊಲೀಸ್ ಕಾನ್ಸ್ಸ್ಟೇಬಲ್ ಆಗಿದ್ದರೂ ನ್ಯಾಯ, ನೀತಿ ಎಂದು ನೋಡುತ್ತಾ ಕೂರಲ್ಲ. ನಾನು ಅಂದುಕೊಂಡಂತೆ ನನ್ನಿಷ್ಟದಂತೆ ಬದುಕುತ್ತೇನೆ ಎಂದು ಆತ ಹೊರಡುತ್ತಾನೆ. ಈ ಹಾದಿಯಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ? ಮುಂದೆ ಹೇಗೆ ಗೆಲ್ಲುತ್ತಾನೆ ಎನ್ನುವುದೇ ಸಿನಿಮಾ ಕಥೆ ಅನ್ನುವುದು ಟ್ರೈಲರ್ ನೋಡಿದರೆ ಗೊತ್ತಾಗುತ್ತದೆ.
ಕ್ರಿಕೆಟ್ ಬೆಟ್ಟಿಂಗ್ ಕಟ್ಟುತ್ತಾ ದುಡ್ಡು ಮಾಡುವ ಪ್ರಯತ್ನ ಮಾಡುವ ನಾಯಕ ಕೊನೆಗೆ ತಾನೇ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುತ್ತಾನೆ. ಕೊನೆಗೆ ದೊಡ್ಡದೊಂದು ಆಪರೇಷನ್ಗೆ ಕೈಹಾಕಿ ಹಣ ಹಾಕುವ ಸಾಹಸವನ್ನು ಮಾಡುತ್ತಾನೆ. ಅದನ್ನೆಲ್ಲಾ ತೆರೆಮೇಲೆ ನೋಡಬೇಕು. ಅಕ್ಟೋಬರ್ 31ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ. 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.
ಅರ್ಜುನ್ ಜನ್ಯಾ ಸಂಗೀತದಲ್ಲಿ ಈಗಾಗಲೇ 'ಬ್ರ್ಯಾಟ್' ಚಿತ್ರದ 3 ಹಾಡುಗಳು ಬಿಡುಗಡೆಯಾಗಿದೆ. ಸಿದ್ದ್ ಶ್ರೀರಾಮ್ ಹಾಡಿರುವ 'ನಾನೇ ನೀನಂತೆ ನೀನಂತೆ' ಹಾಡು ಹಿಟ್ ಲಿಸ್ಟ್ ಸೇರಿದೆ. 'ಶುಗರ್ ಫ್ಯಾಕ್ಟರಿ' ಬಳಿಕ ಕೃಷ್ಣ ನಟಿಸಿರುವ ಸಿನಿಮಾ ಇದು. ಅವರು ಲವರ್ ಬಾಯ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಮಾಸ್ ಇಮೇಜ್ ಇರುವ ನಟ. ಹಾಗಾಗಿ ಕೃಷ್ಣ ಹೀರೊ ಆಗಿ 'ಬ್ರ್ಯಾಟ್' ಸಿನಿಮಾ ಮಾಡಿರುವುದಾಗಿ ಶಶಾಂಕ್ ಹೇಳಿದ್ದಾರೆ.
ಅಭಿಲಾಷ್ ಕಾಲತಿ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನ 'ಬ್ರ್ಯಾಟ್' ಚಿತ್ರಕ್ಕಿದೆ. ಮಂಜುನಾಥ್ ಕಂದಕುರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದೀಪಾವಳಿ ಮುಗಿದು ಅಕ್ಟೋಬರ್ ತಿಂಗಳ ಕೊನೆಗೆ ಸಿನಿಮಾ ತೆರೆಗೆ ಬರ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ಶುರುವಾಗಿದೆ.
ಸದ್ಯ ಬಿಡುಗಡೆ ಆಗಿರುವ 'ಬ್ರ್ಯಾಟ್' ಚಿತ್ರದ ಟ್ರೈಲರ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಸಿನಿರಸಿಕರು ಫಸ್ಟ್ ಡೇ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಸುದೀಪ್ ಅವರು ನಮಗೆ ಲಕ್ಕಿ. 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ್ರು. ಆ ಸಿನಿಮಾ ಹಿಟ್ ಆಗಿತ್ತು. ಈ ಸಿನಿಮಾ ಕೂಡ ಗೆಲ್ಲುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
"ಶಶಾಂಕ್ ಅವರು ಬಹಳ ಸಾಮರ್ಥ್ಯ ಇರುವಂತಹ ನಿರ್ದೇಶಕ. ಅವರು ಸಿನಿಮಾಗಳನ್ನು ಮಾಡುತ್ತಾ ಇರ್ತಾರೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಿನಿಮಾ ಮಾಡಬೇಕು ಎಂದು ಬಯಸುತ್ತೇನೆ" ಎಂದು ಸುದೀಪ್ ಹೇಳಿದ್ದಾರೆ. ಶಶಾಂಕ್ ಒಳ್ಳೆ ನಿರ್ದೇಶಕ, ಹಾಗಾಗಿ ಅವರ ಸಿನಿಮಾ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.


Click it and Unblock the Notifications











