ಒಂದು ರಿಪ್ಲೇ ಕೊಡಿ ಸಾಕು ಎಂದಿದ್ದ ಕಿಚ್ಚನ ಅಭಿಮಾನಿ; ಈಗ ಅದನ್ನು ಓದಲು ಆತನೇ ಬದುಕಿಲ್ಲ!
ಸಾವು ಅದ್ಯಾವಾಗ ಅದ್ಯಾರನ್ನು ಅದ್ಯಾವ ರೂಪದಲ್ಲಿ ಆವರಿಸಿಕೊಳ್ಳುತ್ತದೆ ಅನ್ನೋದು ಗೊತ್ತಾಗಲ್ಲ. ಈ ಕ್ಷಣ ಇದ್ದವರು ಮರುಕ್ಷಣ ಇರುತ್ತಾರೆ ಎನ್ನುವ ಗ್ಯಾರೆಂಟಿಯೇ ಇಲ್ಲ. ಬಡವನಾಗಲಿ, ಶ್ರೀಮಂತನಾಗಲಿ, ಯಾವುದೇ ಜಾತಿ, ಧರ್ಮದವರಾಗಲಿ ಸಾವು ಒಂದಲ್ಲಾ ಒಂದು ದಿನ ಬಂದೇ ಬರುತ್ತದೆ. ಕಾಲನ ಕರೆಗೆ ಎಲ್ಲರೂ ಓಗೊಡಲೇಬೇಕು.
ಒಂದೂವರೆ ತಿಂಗಳ ಹಿಂದೆ "ಬಾಸ್ ಒಂದೇ ಒಂದು ರಿಪ್ಲೇ ಮಾಡಿ ಬಾಸ್" ಎಂದು ಸುದೀಪ್ ಅಭಿಮಾನಿಯೊಬ್ಬ ಕಿಚ್ಚನಲ್ಲಿ ಮನವಿ ಮಾಡಿದ್ದ. ಇಂದು ಖುದ್ದು ಸುದೀಪ್ ಆ ಮಮವಿಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ರಿಪ್ಲೇ ಮಾಡಿದ ಸಂದರ್ಭ, ಬರೆದ ಸಾಲುಗಳು ಮಾತ್ರ ನೋವು ತರಿಸುವಂತಿದೆ. ಅಂದು ರಿಪ್ಲೇ ಕೇಳಿದ್ದ ಅಭಿಮಾನಿಗೆ ಸುದೀಪ್ ಈಗ ಸಂತಾಪ ಸೂಚಿಸಿದ್ದಾರೆ. ಇದಕ್ಕೆ ಹೇಳುವುದು ವಿಪರ್ಯಾಸ ಅಂತ.

ನಟ ಕಿಚ್ಚ ಸುದೀಪ್ ಆಗಾಗ್ಗೆ #AskKichcha ಸೆಷನ್ ನಡೆಸುತ್ತಾರೆ. ಟ್ವಿಟ್ಟರ್ನಲ್ಲಿ ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಫೆಬ್ರವರಿ 25ರಂದು ಕೂಡ ಅದೇ ರೀತಿ ಪ್ರಶ್ನೆಗಳನ್ನು ಕೇಳಲು ಹೇಳಿದ್ದರು. ಸಾಕಷ್ಟು ಜನ ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲಿ ಕೆಲವು ಪ್ರಶ್ನೆಗಳಿಗೆ ರಿಪ್ಲೇ ಮಾಡಿ ಉತ್ತರಿಸಿದ್ದರು. ನಿಖಿಲ್ ಎಂಬ ಅಭಿಮಾನಿ "ಲವ್ ಯು ಬಾಸ್, ಒಂದೇ ಒಂದು ರಿಪ್ಲೇ ಕೊಡಿ ಸಾಕು" ಎಂದು ಕೇಳಿದ್ದ.
ಅಂದು ರಿಪ್ಲೇ ಕೇಳಿದ್ದ ನಿಖಿಲ್ಗೆ ಇದೀಗ ಸುದೀಪ್ ರಿಪ್ಲೇ ಮಾಡಿದ್ದಾರೆ. "ಈ ಸುದ್ದಿ ಕೇಳಲು ನಿಜಕ್ಕೂ ಬೇಸರವಾಗುತ್ತಿದೆ. ನನ್ನ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಆತನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನನ್ನ ಸಂತಾಪಗಳು" ಎಂದು ಸುದೀಪ್ ರಿಪ್ಲೇ ಮಾಡಿದ್ದಾರೆ. ಅಂದಹಾಗೆ ಯುವ ನಿಖಿಲ್ ನಟ ಕಿಚ್ಚ ಸುದೀಪ್ ವೀರಾಭಿಮಾನಿ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದ.
ನೆಚ್ಚಿನ ನಟನ ಸಿನಿಮಾ ಹಾಗೂ ಇತರೆ ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದ. ಜಮಖಂಡಿ ಮೂಲದ ನಿಖಿಲ್ ಇತ್ತೀಚೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆತನಿಗೆ 22 ವರ್ಷ ವಯಸ್ಸಾಗಿತ್ತು. ಇಷ್ಟು ಸಣ್ಣ ವಯಸ್ಸಿಗೆ ನಿಖಿಲ್ ಹೃದಯಾಘಾತದಿಂದ ಸಾವನ್ನಪ್ಪಿರುವುದು ಆಪ್ತರಿಗೆ ಆಘಾತ ತಂದಿದೆ. ಈ ಸುದ್ದಿ ಕೇಳಿ ನಟ ಸುದೀಪ್ ಕೂಡ ಭಾವುಕರಾಗಿದ್ದಾರೆ.
ಅಂದು ರಿಪ್ಲೇ ಕೊಡಿ ಎಂದು ನಿಖಿಲ್ ಕೇಳಿದ್ದ ಕಾಮೆಂಟ್ ಅನ್ನು ರೀಟ್ವೀಟ್ ಮಾಡಿ ಸುದೀಪ್ ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು ಈ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. "ಸುದೀಪ್ ಸರ್ ರಿಪ್ಲೇ ಮಾಡಿದ್ದಾರೆ ನೋಡೊ ನಿಖಿಲ್" ಎಂದು ಬರೆಯುತ್ತಿದ್ದಾರೆ. ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಸಂತಾಪ ಸೂಚಿಸುತ್ತಿದ್ದಾರೆ. ಸದ್ಯ ಈ ಕಾಮೆಂಟ್ಗಳು ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅಭಿಮಾನಿಗಳು ಅಂದರೆ ಕಿಚ್ಚನಿಗೂ ಪಂಚಪ್ರಾಣ. ಅವರನ್ನು ಎಂದೂ ಬಿಟ್ಟುಕೊಡುವವರಲ್ಲ. ಸದ್ಯ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಮಹಾಬಲಿಪುರಂನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ವಿಕ್ರಾಂತ್ ರೋಣ' ಸಿನಿಮಾ ಬಳಿಕ ಸುದೀಪ್ 'ಮ್ಯಾಕ್ಸ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕಲೈಪುಲಿ ಎಸ್ ತನು ಜೊತೆ ಸಿನಿಮಾ ನಿರ್ಮಾಣಕ್ಕೂ ಸುದೀಪ್ ಕೈ ಜೋಡಿಸಿದ್ದಾರೆ. ಇನ್ನು ಈ ವರ್ಷವೇ 'ಬಿಲ್ಲ ರಂಗ ಬಾಷ' ಸಿನಿಮಾ ಆರಂಭಿಸಲು ಸುದೀಪ್ ನಿರ್ಧರಿಸಿದ್ದಾರೆ. ಅನುಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.


Click it and Unblock the Notifications











