ಅಪ್ಪು ಕನಸಿನ ಕೂಸು 'ಗಂಧದ ಗುಡಿ' ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಪುನೀತ್ ರಾಜ್ಕುಮಾರ್ ಅವರ ಅಂತಿಮ ಚಿತ್ರ ಗಂಧದ ಗುಡಿ ಇಂದು ( ಅಕ್ಟೋಬರ್ 28 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿದೆ. ಇನ್ನು ಚಿತ್ರ ಒಂದು ದಿನ ಮುಂಚಿತವಾಗಿಯೇ ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಪ್ರೀಮಿಯರ್ ಪ್ರದರ್ಶನವನ್ನು ಕಂಡಿತ್ತು. ಪ್ರೀಮಿಯರ್ ಪ್ರದರ್ಶನ ವೀಕ್ಷಿಸಿದ ಸಿನಿ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು.
ಪ್ರೀಮಿಯರ್ ಶೋ ಮಾತ್ರವಲ್ಲದೇ ಬಿಡುಗಡೆ ದಿನದ ಬೆಳಗಿನ ಜಾವದ ಪ್ರದರ್ಶನಗಳನ್ನು ವೀಕ್ಷಿಸಿದ ಸಿನಿ ರಸಿಕರೂ ಸಹ ಚಿತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಚಿತ್ರ ಇಷ್ಟರ ಮಟ್ಟಿಗೆ ಮೂಡಿ ಬಂದಿರುತ್ತದೆ ಎಂಬ ಊಹೆ ಕೂಡ ಇರಲಿಲ್ಲ, ಚಿತ್ರ ನಿರ್ದೇಶಿಸಿದ ಅಮೋಘವರ್ಷ ಹಾಗೂ ನಿರ್ಮಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.
ಕೇವಲ ಸಿನಿ ರಸಿಕರು ಹಾಗೂ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಹ ಗಂಧದ ಗುಡಿ ಬಗ್ಗೆ ಮಾತನಾಡಿದ್ದಾರೆ ಹಾಗೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಗಂಧದ ಗುಡಿ ಚಿತ್ರಕ್ಕೆ ಶುಭವಾಗಲಿ ಎಂದು ಹಲವಾರು ಕ್ರಿಕೆಟಿಗರು, ನೆರೆ ಚಿತ್ರರಂಗದ ಕಲಾವಿದರು ಮತ್ತು ಚಂದನವನದ ಬಹುತೇಕ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ಕುರಿತಾಗಿ ಸ್ಟಾರ್ ನಟ ಕಿಚ್ಚ ಸುದೀಪ್ ಮಾತ್ರ ಟ್ವೀಟ್ ಮಾಡಿರಲಿಲ್ಲ. ಆದರೆ ಇದೀಗ ಕಿಚ್ಚ ಸುದೀಪ್ ಸಹ ಗಂಧದ ಗುಡಿ ಬಗ್ಗೆ ಟ್ವೀಟ್ ಮಾಡಿದ್ದು, ಇದು ಸಿನಿ ರಸಿಕರ ಗಮನ ಸೆಳೆದಿದೆ.

ಕಿಚ್ಚ ಸುದೀಪ್ ಟ್ವೀಟ್ ಹೀಗಿದೆ
ಪುನೀತ್ ಕುಟುಂಬ ಹಾಗೂ ಗಂಧದ ಗುಡಿ ಚಿತ್ರತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು, ಗಂಧದ ಗುಡಿ ಚಿತ್ರ ಅಪ್ಪು ರೀತಿಯೇ ಪ್ರಜ್ವಲಿಸಲಿ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಶುಭವಾಗಲಿ, ನೀವು ಗಂಧದ ಗುಡಿ ಜತೆ ನಿಂತಿದ್ದೀರಿ, ಅಪ್ಪು ಅಭಿಮಾನಿಗಳೇ ಚಿತ್ರಮಂದಿರಕ್ಕೆ ತೆರಳಿ ಅಪ್ಪುವನ್ನು ಅಪ್ಪಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಧನ್ಯವಾದ ತಿಳಿಸಿದ ಯುವ ರಾಜ್ಕುಮಾರ್
ಇನ್ನು ಕಿಚ್ಚ ಸುದೀಪ್ ಮಾಡಿರುವ ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ಕುಮಾರ್ 'ಥ್ಯಾಂಕ್ ಯೂ ಸೋ ಮಚ್ ಸರ್' ಎಂದು ರಿಪ್ಲೇ ಮಾಡಿದ್ದಾರೆ. ಹಾಗೂ ಈ ಟ್ವೀಟ್ಗೆ ಇನ್ನೂ ಹಲವು ನೆಟ್ಟಿಗರು ಮತ್ತು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು ಅವರೂ ಸಹ ಧನ್ಯವಾದ ತಿಳಿಸಿದ್ದಾರೆ. ಒಳ್ಳೆ ಕನ್ನಡ ಚಿತ್ರಗಳಿಗೆ ಕಿಚ್ಚ ಸುದೀಪ್ ಸದಾ ನೀಡುವ ಬೆಂಬಲಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪುನೀತ ಪರ್ವಕ್ಕೆ ಬಂದಿರಲಿಲ್ಲ ಕಿಚ್ಚ
ಇನ್ನು ಗಂಧದ ಗುಡಿ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮವಾದ ಪುನೀತ ಪರ್ವ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಆಗಮಿಸದೇ ಇದ್ದದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು ಹಾಗೂ ಕಿಚ್ಚ ಯಾಕೆ ಬರಲಿಲ್ಲ ಎಂಬುದರ ಅನುಮಾನವನ್ನೂ ಮೂಡಿಸಿತ್ತು. ಅಷ್ಟೇ ಅಲ್ಲದೇ ಸ್ನೇಹಿತನ ಬೃಹತ್ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗವೇ ಆಗಮಿಸಿರುವಾಗ ಕಿಚ್ಚ ಬರಲಿಲ್ಲ ಎಂಬ ವಿವಾದವೂ ಎದ್ದಿತ್ತು. ಆದರೆ ಆ ಸಮಯದಲ್ಲಿ ಕಿಚ್ಚ ಸುದೀಪ್ ಆಸ್ಟ್ರೇಲಿಯಾ ಪ್ರವಾಸಲ್ಲಿದ್ದ ಕಾರಣ ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ.


Click it and Unblock the Notifications











