ಟ್ವಿಟ್ಟರ್ ನಲ್ಲಿ ಮತ್ತೆ ಕಿಚ್ಚ ಸುದೀಪ್ ಜಿಂತಾತ ಚಿತಾಚಿತ
ಸದಾ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಆಕ್ಟೀವಾಗಿರುತ್ತಿದ್ದ ನಮ್ಮ ಕಿಚ್ಚ ಸುದೀಪ್ ಕಾರಣಾಂತರಗಳಿಂದ ಸಾಂದರ್ಭಿಕ ರಜೆ ತೆಗೆದುಕೊಂಡಿದ್ದರು. ಇದೀಗ ಮತ್ತೆ ಅವರು ಟ್ವಿಟ್ಟರ್ ಗೆ ಮರಳಿದ್ದಾರೆ. ಇನ್ನು ಮುಂದಾದರೂ ಅವರ ಅಭಿಮಾನಿಗಳು, ಫಾಲೋವರ್ಸ್ ಹೆಚ್ಚುಹೆಚ್ಚು ಅಪ್ ಡೇಟ್ಸ್ ನಿರೀಕ್ಷಿಸಬಹುದು.

'ರನ್ನ' ಚಿತ್ರದ ಬಿಜಿ ಶೆಡ್ಯೂಲ್, ಜೊತೆಗೆ ಸಿಸಿಎಲ್ ಮ್ಯಾಚ್ ಗಳು ಅದೂಇದೂ ಎಂದು ಅವರು ಟ್ವಿಟ್ಟರ್ ಕಡೆಗೆ ಗಮನಕೊಡಲು ಸಾಧ್ಯವಾಗಿರಲಿಲ್ಲ. ಫೆಬ್ರವರಿ 2ಕ್ಕೆ ಟ್ವೀಟ್ ಮಾಡಿದ ಅವರು ಸಿಸಿಎಲ್ ಫೈನಲ್ ಮ್ಯಾಚ್ ಗೆಲ್ಲಲು ಸಾಧ್ಯವಾಗಲಿಲ್ಲ. ನಿಮ್ಮೆಲ್ಲರ ನಿರೀಕ್ಷೆಗಳು ಹುಸಿಯಾದವು. ಆದರೂ ನೀವು ತೋರಿದ ಪ್ರೀತಿಗೆ ನಾನು ಚಿರಋಣಿ ಎಂದಿದ್ದರು.
ಅದಾದ ಬಳಿಕ ಟ್ವಿಟ್ಟರ್ ಗೆ ಹಂಗಾಮಿ ರಜೆ ಘೋಷಿಸಿಬಿಟ್ಟಿದ್ದರು. ಇದೀಗ ಮಾರ್ಚ್ 9ರಿಂದ ಮತ್ತೆ ಟ್ವಿಟ್ಟರ್ ನಲ್ಲಿ ಜಿಂತಾತ ಚಿತಾಚಿತಾ ಶುರುವಾಗಿದೆ. ಎಲ್ಲರಿಗೂ ಹಾಯ್ ಹೇಳುತ್ತಾ, ಇಷ್ಟು ದಿನ ಟ್ವಿಟ್ಟರ್ ನಿಂದ ದೂರ ಉಳಿದಿದ್ದೆ. ನೀವೆಲ್ಲಾ ಕ್ಷೇಮವಾಗಿದ್ದೀರೆಂದು ಭಾವಿಸಿದ್ದೇನೆ ಎಂದಿದ್ದಾರೆ.
ಸದ್ಯಕ್ಕೆ ಸುದೀಪ್ ಅವರು 'ರನ್ನ' ಚಿತ್ರ ಹಾಗೂ ತಮಿಳಿನ 'ಪುಲಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ರನ್ನ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಸ್ವಿಟ್ಜರ್ ಲ್ಯಾಂಡ್ ಗೆ ಹೋಗಿ ಮಾರ್ಚ್ 14ಕ್ಕೆ ಅವರು ಹಿಂತಿರುಗಲಿದ್ದಾರೆ. ಆ ಬಳಿಕ ಅದೇ ಚಿತ್ರದ ವಿಶೇಷ ಹಾಡನ್ನು ಹೈದರಾಬಾದಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಏಪ್ರಿಲ್ ಮೊದಲ ವಾರದಲ್ಲಿ ರನ್ನ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)


Click it and Unblock the Notifications











