ಹುಟ್ಟುಹಬ್ಬಕ್ಕೆ ಸಿದ್ಧತೆ ನೋಡಿ ದಂಗಾದ ಕಿಚ್ಚ ಸುದೀಪ್
ಹದಿನೈದು ವರ್ಷಗಳ ಹಿಂದೆ ಕೇವಲ ಒಬ್ಬ ನಟರಾಗಲೂ ಭಾರಿ ಕಷ್ಟಪಟ್ಟಿದ್ದ ಸುದೀಪ್ ಇಂದು ಇಂಡಿಯಾ ಮೀರಿ ಪ್ರಸಿದ್ಧರಾಗಿರುವ ಹೊಸ ಸೌತ್ ಇಂಡಿಯಾ ಸ್ಟಾರ್. ಹದಿನೈದು ವರ್ಷಗಳ ಹಿಂದೆ ಕೆಲವೇ ಗೆಳೆಯರು ಹಾಗೂ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸುದೀಪ್, ಇಂದು ಬೆಳೆದ ಪರಿ ಅಚ್ಚರಿ ಹುಟ್ಟಿಸುವಂತಾದ್ದು. ಇದೀಗ ಅವರ ಹುಟ್ಟುಹಬ್ಬಕ್ಕೆ ಇಡೀ ಭಾರತವೇ ಕಾದಿದೆ.
ಮೊದಮೊದಲು ಸುದೀಪ್ ಸ್ವತಃ ಮಾಡಿಕೊಳ್ಳುತ್ತಿದ್ದ ಹುಟ್ಟುಹಬ್ಬ, ನಟರಾಗಿ ಕೆಲವು ವರ್ಷಗಳು ಕಳೆಯುತ್ತಿದ್ದಂತೆ ಅಭಿಮಾನಿಗಳ ಹಬ್ಬವಾಗುತ್ತಾ ಬಂತು. ಬಾಲಿವುಡ್ ಚಿತ್ರಗಳಲ್ಲಿ ಅಭಿನಯಸಿದ ಸುದೀಪ್, ಸೌತ್ ಇಂಡಿಯಾ ಮೀರಿ ಬೆಳೆದರು. ಆಗಲೂ ಸುದೀಪ್ ಹುಟ್ಟುಹಬ್ಬ ಭಾರಿ ದೊಡ್ಡ ಸುದ್ದಿಯೇನೂ ಆಗಿರಲಿಲ್ಲ. ಆದರೆ ಇತ್ತೀಚಿಗೆ ತೆಲುಗಿನ 'ಈಗ' ಚಿತ್ರದ ಮೂಲಕ ಕಿಚ್ಚ ಎಲ್ಲರಿಗೂ ಹುಚ್ಚು ಹಿಡಿಸಿದ್ದಾರೆ. ಈಗವರ ಹುಟ್ಟುಹಬ್ಬ ಅವರ ಕೈತಪ್ಪಿ ಅಭಿಮಾನಿಗಳ ಕೈಸೇರಿದೆ.
ಸೆಪ್ಟೆಂಬರ್ 2ರಂದು ನಡೆಯಲಿರುವ ತಮ್ಮ ಹುಟ್ಟುಹಬ್ಬಕ್ಕೆ ಈಗಲೇ ನಡೆಯುತ್ತಿರುವ ತಯಾರಿ ನೋಡಿ ಸ್ವತಃ ಸುದೀಪ್ ದಂಗಾಗಿದ್ದಾರೆ. "ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿಸುವಂತಾದ್ದು ನಾನೇನು ಮಾಡಿದ್ದೇನೆ? ಏನೂ ಲಾಭವಿಲ್ಲದೇ, ಬೇರೆ ಯಾವುದೇ ಉದ್ದೇಶವಿಲ್ಲದೆ ಪ್ರೀತಿಯಿಂದ, ಅಭಿಮಾನದಿಂದ ಇದನ್ನೆಲ್ಲ ಮಾಡುತ್ತಿರುವ ಅಭಿಮಾನಿಗಳ ಪ್ರೀತಿ, ಆದರಕ್ಕೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ.
ಮೊದಲೆಲ್ಲ ನನಗೆ ಸೆಪ್ಟೆಂಬರ್ 2 ಅನ್ನೋದು ಬರೀ ಬರ್ತ್ಡೇ ಆಗಿತ್ತಷ್ಟೇ. ಆದರೆ ಈಗ ಅಭಿಮಾನಿಗಳು ನನ್ನ ಜೀವನದಲ್ಲಿ ಬಂದ ನಂತರ ದಿನಚರಿಯೇ ಬದಲಾಗಿದೆ, ಇನ್ನು ಹುಟ್ಟುಹಬ್ಬವಂತೂ ಮೊದಲಿನಂತೆ ಇಲ್ಲವೇ ಇಲ್ಲ. ಹುಟ್ಟುಹಬ್ಬದ ದಿನವನ್ನು ನನಗೂ ವಿಶೇಷವಾಗುವಂತೆ ಮಾಡಿಬಿಟ್ಟಿದ್ದಾರೆ" ಎಂದು ಅಚ್ಚರಿ ಹಾಗೂ ಸಂತೋಷ ವ್ಯಕ್ತಪಡಿಸುತ್ತಾ ಹೇಳಿದ್ದಾರೆ ಕಿಚ್ಚ ಸುದೀಪ್.
'ಕಿಚ್ಚೋತ್ಸವ' ಕಾರ್ಯಕ್ರ ಹಮ್ಮಿಕೊಂಡಿರುವ 'ಅಖಿಲ ಕರ್ನಾಟಕ ಸುದೀಪ್ ಅಭಿಮಾನಿಗಳ ಸಂಘ', ಸೆಪ್ಟೆಂಬರ್ 2ರಂದು ಬೆಂಗಳೂರಿನ ಜೆಪಿ ನಗರದಲ್ಲಿ ಬೃಹತ್ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುವ ಈ ಸಂಘವು, ಸಮಾಜಕ್ಕೆ ಒಳಿತಾಗುವ ಹಲವು ಕಾರ್ಯಕ್ರಮಗಳನ್ನೂ ಅಂದು ಪ್ರಕಟಿಸಲಿದೆ. ಬೆಳಗ್ಗೆ 9.30ರಿಂದ ಸಂಜೆ 4.00 ಗಂಟೆಯವರೆಗೆ 'ಕಿಚ್ಚೋತ್ಸವ' ನಡೆಯಲಿದ್ದು, ಅಸಂಖ್ಯಾತ ಜನರು ಸೇರುವ ನಿರೀಕ್ಷೆಯಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












