ವಿಷ್ಣು ಸ್ಮಾರಕ ಉದ್ಘಾಟನೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಿದೆ ಎಂದ ಕಿಚ್ಚ ಸುದೀಪ್

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಸಂಖ್ಯಾತ ಅಭಿಮಾನಿಗಳ ಆಸೆ ಈಡೇರುವ ಸಮಯ ಬಂದೇ ಬಿಟ್ಟಿದೆ. ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ನಿರ್ಮಾಣವಾಗಿರುವ ಡಾ. ವಿಷ್ಣುವರ್ಧನ್ ಭವ್ಯ ಸ್ಮಾರಕ ಇಂದು ( ಜನವರಿ 29 ) ಲೋಕಾರ್ಪಣೆಯಾಗುತ್ತಿದೆ. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣಗೊಂಡಿದೆ.
ಈ ಶುಭದಿನವನ್ನು ಅಭಿಮಾನಿಗಳು ಹಬ್ಬದ ರೀತಿ ಆಚರಿಸಲು ನಿರ್ಧರಿಸಿದ್ದು, ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆ ಸಮೀಪ ನೆಚ್ಚಿನ ನಟ ವಿಷ್ಣುವರ್ಧನ್ ಅವರ ಸಾಲು ಸಾಲು ಕಟ್ ಔಟ್ ಗಳನ್ನು ನಿಲ್ಲಿಸಿ, ಬ್ಯಾನರ್ ಕಟ್ಟಿ, ಹಾರ ಹಾಕಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಚಂದನವನದ ಹಲವಾರು ನಟ - ನಟಿಯರು ಹಾಗೂ ಕಲಾವಿದರು ಆಗಮಿಸುವ ಸಾಧ್ಯತೆ ಇದ್ದು, ಸಹಸ್ರಾರು ಅಭಿಮಾನಿಗಳು ಜಮಾಯಿಸಲಿದ್ದಾರೆ.
ಹಲವು ವರ್ಷಗಳ ಕನಸು ನನಸಾದ ದಿನವನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಹ ಸಂಭ್ರಮಿಸುತ್ತಿದ್ದಾರೆ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾದ ನಟ ಕಿಚ್ಚ ಸುದೀಪ್ ಸಹ ಈ ಸಾಲಿನಲ್ಲಿದ್ದಾರೆ. ವಿಷ್ಣುವರ್ಧನ್ ಅವರನ್ನು ಹಿಂದಿನಿಂದಲೂ ಮನಸಾರೆ ಆರಾಧಿಸುತ್ತಾ ಬಂದಿರುವ ಕಿಚ್ಚ ಸುದೀಪ್ ಸ್ಮಾರಕ ಉದ್ಘಾಟನೆಯಾಗುತ್ತಿರುವ ಕುರಿತು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಷ್ಣುವರ್ಧನ್ ಅವರ ಫೊಟೊವೊಂದನ್ನು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ "ಕಾಯುತ್ತಿದ್ದರು ಕರುನಾಡ ಜನತೆ ಇಂತಹದ್ದೊಂದು ಅದ್ಭುತ ಕ್ಷಣಕ್ಕೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ, ಒಳ್ಳೆಯದೇ ಆಗುತ್ತಿದೆ. ಯಜಮಾನ್ರ ಸ್ಮಾರಕ ಲೋಕಾರ್ಪಣೆ ಸಮಾರಂಭಕ್ಕೆ ಶುಭಕೋರುತ್ತೇನೆ - ಕಿಚ್ಚ ಸುದೀಪ್" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











